ತುರುವೇಕೆರೆ:
ತಾಲೂಕಿನ ಮಾದೀಹಳ್ಳಿ ಗ್ರಾಮದ ಶ್ರೀ ಹುತ್ತುಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಯುಗಾದಿ ಹಬ್ಬದಿನವಾದ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಬಣೆಯಿಂದ ನಡೆಯಿತು.
ಬೆಳಿಗ್ಗೆಯಿಂದಲೇ ಸ್ವಾಮಿಗೆ ಅಷ್ಠಾಲಂಕಾರ, ಅಭಿಷೇಕ, ಪುಷ್ಪ ಅಲಂಕಾರ, ವಿಶೇಷ ಪೂಜೆಗಳು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿವರೆಗೂ ನೆಡೆದವು. ಶ್ರೀ ಸ್ವಾಮಿಯವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೇವಲ ಒಂದು ದಿನ ನೆಡೆಯುವ ಈ ಸ್ವಾಮಿಯ ಜಾತ್ರೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.
ಹರಕೆ ಹೊತ್ತ ನೂರಾರು ಭಕ್ತರು ಮಕ್ಕಳಾದಿಯಾಗಿ ಮುಡಿ ತೆಗೆಸಿಕೊಂಡು ಹರಕೆ ತೀರಿಸಿದರು. ಜಾತ್ರ ಪ್ರಯುಕ್ತ ಲಿಂಗದಬೀರರ ಕುಣಿತ, ಡೊಳ್ಳು ಕುಣಿತ, ಭಜನೆ ಸೇರಿದಂತೆ ಆನೇಕ ಜಾನಪದ ಕಲಾಪ್ರಕಾರಗಳೊಂದಿಗೆ ರಾತ್ರಿಯೆಲ್ಲಾ ಮೆರವಣಿಗೆ ನಡೆಸಲಾಯಿತು. ಬಂದಂತ ಭಕ್ತಾಧಿಗಳಿಗೆ ಆಡಳಿತ ಮಂಡಳಿಯವರು ಸೂಕ್ತ ವ್ಯವಸ್ಥೆ ಮಾಡಿದ್ದರು. ಸಾವಿರಾರು ಭಕ್ತರು ಹುತ್ತುಸಿದ್ದೇಶ್ವರನ ಸನ್ನಿಧಿಗೆ ತೆರಳಿ ಶ್ರೀ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಜಾತ್ರೆಯಲ್ಲಿ ಯಾವುದೇ ಅಹಿತರಕರ ಘಟನೆ ನೆಡೆಯದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಬಿಗಿ ಬಂದೋಬಸ್ತು ಏರ್ಪಡಿಸಲಾಗಿತ್ತು.
ಭಕ್ತರಿಗೆ ಪಾನಕ,ಪಲಹಾರ, ಮಜ್ಜಿಗೆ ವಿತರಣೆ: ಜಾತ್ರ ಸಮಿತಿಯಿಂದ ಹಾಗೂ ಭಕ್ತಾಧಿಗಳಿಂದ ಬಂದಂತ ಭಕ್ತಾಧಿಗಳಿಗೆ ಕಡ್ಲೆಬೇಳೆ, ಹೆಸರು ಬೇಳೆ ಫಲಹಾರ, ಬಾಳೆ ಹಣ್ಣಿನ ರಸಾಯಣ, ಪಾನಕ, ಮಜ್ಜಿಗೆಯನ್ನು ಸಾಮೂಹಿಕವಾಗಿ ನೀಡಲಾಯಿತು. ಜಾತ್ರೆಗೆ ಆಗಮಿಸಿದ್ದ ಭಕ್ತರು ತಾವೇ ತಯಾರು ಮಾಡಿಕೊಂಡು ತಂದ ಫಲಹಾರವನ್ನು ಸ್ವತಃ ಅವರೇ ಭಕ್ತರಿಗೆ ವಿತರಿಸುವುದು ಕಂಡು ಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
