ತುಮಕೂರು:
ಭಾಷೆ, ಸಂಸ್ಕತಿಯನ್ನು ಬೆಳೆಸಿಕೊಂಡು ಬರುತ್ತಿರುವ ಬ್ರಾಹ್ಮಣ ಸಮುದಾಯದಲ್ಲಿ ಯುವಜನ ಅದನ್ನು ಮುಂದುವರೆಸಿಕೊಂಡುಹೋಗದೇ ಇರುವುದು ಬೇಸರದ ಸಂಗತಿ ಎಂದು ನಿವೃತ್ತ ಬಾಹ್ಯಾಕಾಶ ವಿಜ್ಞಾನಿ ಡಾ.ಸಿ.ಆರ್.ಸತ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಶಂಕರಮಠದ ಸಭಾಂಗಣದಲ್ಲಿ ಜಿಲ್ಲಾ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹೊಯ್ಸಳ ಹಬ್ಬ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಮ್ಮ ಬ್ರಾಹ್ಮಣ ಸಮಾಜದವರು ಭಾಷೆ, ಸಂಸ್ಕತಿ ಬೆಳೆಸಿಕೊಂಡು ಬರುತ್ತಿದ್ದಾರೆ. ಸಮಾಜದವರು ತಾಂತ್ರಿಕತೆ, ಕಾನೂನು, ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತಹ ಸಾಧಕರನ್ನು ಗುರುತಿಸಿ ಅವರ ಬಗ್ಗೆ ಹೊಯ್ಸಳ ಮಾಲೆ ಎಂಬ ಪುಸ್ತಕಗಳನ್ನು ರಚಿಸುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಎನ್.ಸತ್ಯನಾರಾಯಣ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಆದರೆ ಸಮಾಜದಿಂದ ಮಾಡುವ ಕಾರ್ಯಕ್ರಮಗಳಿಗೆ ಯುವ ಪೀಳಿಗೆಯು ಪಾಲ್ಗೊಳ್ಳದಿರುವುದು ವಿಷಾದನೀಯ ಎಂದರು.
ಮುಂದಿನ ದಿನಗಳಲ್ಲಿ ಸಮಾಜದ ಕಾರ್ಯಕ್ರಮಗಳು ನಡೆಸಲು ಯುವ ಪೀಳಿಗೆಯ ಶಕ್ತಿ ಅತ್ಯವಶ್ಯಕವಾಗಿದೆ. ನಮ್ಮ ಸಮಾಜದ ಸಂಘಟನೆ ದೇಶದುದ್ದಕ್ಕೂ ಬೆಳೆಯಬೇಕು. ಆಗ ನಮ್ಮ ಸಂಸ್ಕತಿ ಬೆಳೆಯುತ್ತದೆ. ಯುವಕರು ಮುಂದೆಬಾರದೆ ಹೋದರೆ ಮುಂದಿನ ಪೀಳಿಗೆಗೆ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಚಂದನ ವಾಹಿನಿಯ ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮದ ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಬ್ರಾಹ್ಮಣರೇ ಅಲ್ಪಸಂಖ್ಯಾತರು ಆಗಿದ್ದಾರೆ. ಸರ್ಕಾರದಿಂದ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಂತ ನಾವು ಸೌಲಭ್ಯಗಳು ಬೇಕು, ನಮಗೆ ಮೀಸಲಾತಿ ಬೇಕು ಎಂದು ಕೇಳುವುದಿಲ್ಲ. ಆ ಅವಶ್ಯಕತೆಯೂ ನಮ್ಮ ಸಮಾಜಕ್ಕೆ ಇಲ್ಲ. ಆದರೆ ಇಂದು ಬ್ರಾಹ್ಮಣ್ಯೇತರ ಸಮಾಜದ ವೈಭವೀಕರಣ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದ ರಾಜಧಾನಿಯಲ್ಲಿ ಯಾವೊಂದು ರಸ್ತೆಗಾಗಲಿ, ನಿಲ್ದಾಣಗಳಿಗಾಗಲಿ ಬ್ರಾಹ್ಮಣರ ಹೆಸರುಗಳನ್ನು ನಾಮಕರಣ ಮಾಡಿಲ್ಲ. ಸಾಹಿತ್ಯ, ಸಂಸ್ಕತಿ, ಕಲಾ ಕ್ಷೇತ್ರಗಳಲ್ಲಿ ನಮ್ಮ ತುಮಕೂರಿನ ಅನೇಕ ಮಂದಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಅಂತವರ ಹೆಸರನ್ನು ನಾಮಕರಣ ಮಾಡಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು ಎಂದರು.
ಚಂದನ ವಾಹಿನಿಯ ನಿರೂಪಕರಾದ ಮುಳಕುಂಟೆ ಎನ್ ಪ್ರಕಾಶ್ ಮಾತನಾಡಿ, ಬ್ರಾಹ್ಮಣ ಸಮಾಜದವರು ಬಹಳ ಬುದ್ದವಂತರು ಆಗಿದ್ದು, ಇಂದು ಪ್ರತಿಯೊಂದು ಕುಟುಂಬದಲ್ಲೂ ಎಂಜಿನಿಯರ್, ಡಾಕ್ಟರ್, ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರಿದ್ದಾರೆ. ಆದರೆ ಇಂದಿನ ದೈನಂದಿನ ಆಹಾರ ಪದ್ಧತಿ ಬದಲಾವಣೆ ಆಗಿದ್ದು ಕೇವಲ ದೊಡ್ಡ ಕಂಪನಿಗಳಲ್ಲಿ ಶ್ರಮ ವಹಿಸದೆ ಕೇವಲ ಕೂತಲ್ಲಿಯೇ ಕೆಲಸ ಮಾಡುವವರಿಗೆ ಹೆಚ್ಚು ಕಾಯಿಲೆಗಳು ಕಂಡು ಬಂದು ಆಸ್ಪತ್ರೆ ಪಾಲಾಗಿದ್ದಾರೆ. ಹಿರಿಯ ತಲೆಮಾರಿನವರು ಸಾಂಸ್ಕತಿಕ ಆಹಾರ ತಿನ್ನುವ ಮೂಲಕ ಇಂದಿಗೂ ಗಟ್ಟಿಮುಟ್ಟಾಗಿ ಇದ್ದಾರೆ. ಹಾಗಾಗಿ ನಮ್ಮ ದೇಶೀಯ ಸಾಂಸ್ಕತಿಕ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯರಾಗಿರಬೇಕು ಎಂದರು.
ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲಿ ಪ್ರತಿ ವಾರ ಒಂದಲ್ಲಾ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಎಲ್ಲಾ ಕಾರ್ಯಕ್ರಮಗಳಲ್ಲಿ ಕೇವಲ ಹಿರಿಯರು ಮಾತ್ರ ಕಾಣುತ್ತಾರೆ ಹೊರತು ಯುವಕರು ಕಾಣುವುದಿಲ್ಲ. ಇದಕ್ಕೆ ಮೂಲ ಕಾರಣ ನಾವು ನಮ್ಮ ಮಕ್ಕಳಿಗೆ ಸಮಾಜದ ಬಗ್ಗೆ ಸಂಘಟಿತರಾಗುವುದರ ಬಗ್ಗೆ ಹೇಳುವುದಿಲ್ಲ. ಸಮಾಜ, ಸಂಘಟನೆ, ಸಂಸ್ಕತಿ ಬಗ್ಗೆ ಮಕ್ಕಳಿಗೆ ಅರ್ಥೈಸುವ ಕೆಲಸ ಪೋಷಕರದ್ದಾಗಿದೆ ಎಂದರಲ್ಲದೆ, ದಕ್ಷಿಣ ಭಾಗದಲ್ಲಿ ಸಮಾಜದ ಭಾಗಶಃ ಮಂದಿ ಆರ್ಥಿಕವಾಗಿ ಬಲವಂತರಾಗಿದ್ದೇವೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಬ್ರಾಹ್ಮಣರ ಸ್ಥಿತಿ ಶೋಚನೀಯವಾಗಿದೆ. ಇದಕ್ಕೆ ಅಧಿಕಾರಿಗಳ, ಜನಪ್ರತಿನಿಧಿಗಳ ಸಹಾಯ ದೊರೆಯದೆ ಅನೇಕ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಅಂತಹವರ ಜೊತೆಗೆ ನಾವು ಸೇರಿಕೊಂಡು ಅಭಿವೃದ್ಧಿಯಾಗಲು ಸಹಾಯ ಮಾಡಬೇಕು. ನಮ್ಮ ಮೇಲೆ ದೌರ್ಜನ್ಯವಾದಾಗ ಯಾರೂ ಅದರ ವಿರುದ್ಧ ಹೋರಾಡಲು ಮುಂದೆ ಬರುವುದಿಲ್ಲ. ಹಾಗಾಗಿ ಮೊದಲು ಸಂಘಟಿತರಾಗುವುದು ಬಹಳ ಮುಖ್ಯವಾಗಿದ್ದು, ಎಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಭಾಗವಾಗಿ 80 ವರ್ಷ ಮೇಲ್ಪಟ್ಟ ಹಿರಿಯ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೂ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಹೊಯ್ಸಳ ಒಕ್ಕೂಟದ ಅಧ್ಯಕ್ಷ ಡಿ.ಎನ್.ವೆಂಕಟೇಶ್ಮೂರ್ತಿ, ತುಮಕೂರು ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಎನ್.ಆರ್.ನಾಗರಾಜ್ರಾವ್, ಹೊಯ್ಸಳ ಸಂಘದ ಜಿಲ್ಲಾಧ್ಯಕ್ಷ ಎನ್.ಸತ್ಯನಾರಾಯಣ, ಕಾರ್ಯದರ್ಶಿ ಹಿರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
