ರಾಣೇಬೆನ್ನೂರು:
‘ಬಂಗಾರ ಕೊಳ್ಳಬಹುದು ಮರಳು ಕೊಳ್ಳಲಾದೀತೆ’ ಎಂಬ ಈ ಮಾತು ಇತ್ತೀಚಿಗೆ ಹೆಚ್ಚು ಪ್ರಚಲಿತದಲ್ಲಿದೆ. ಅದಕ್ಕೆ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಿದಂತೆ ವಸತಿ ಸೌಕರ್ಯವು ಅವಶ್ಯಕವಾಗಿದ್ದು, ಮನೆ, ಮಳಿಗೆಗಳನ್ನು ಕಟ್ಟಲು ಮರಳು ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರೆಯ ನದಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಅಕ್ರಮ ಮರಳು ತುಂಬುವ ದಂಧೆಕೋರರಿಗೆ, ನೀರು ಕಡಿಮೆಯಾಗುತ್ತಿರುವುದರಿಂದ ವರವಾಗಿ ಪರಿಣಮಿಸಿದಂತಾಗಿದೆ. ತಾಲೂಕಿನ ಮಾಕನೂರು, ಹರನಗಿರಿ, ಕೋಣನತಂಬಿಗಿ, ಐರಣಿ, ಹಿರೇಬಿದರಿ, ಬೇಲೂರು, ಹೀಲದಹಳ್ಳಿ ಚಿಕ್ಕಕುರವತ್ತಿ, ಚಂದಾಪುರ, ಚೌಡಯ್ಯನದಾನಪುರ ಸೇರಿದಂತೆ ಅನೇಕ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ತಾಲೂಕಿನ ಕೆಲ ನದಿ ಗ್ರಾಮಗಳಲ್ಲಿ ಪೊಲೀಸರ ಐಶರ್ ವಾಹನಗಳ ಮೂಲಕ ಅಕ್ರಮ ಮರಳು ತುಂಬಿಸಿಕೊಂಡು ಹೋಗುವಲ್ಲಿ ನಿರತರಾಗಿದ್ದಾರೆ ಎಂದು ಗ್ರಾಮಗಳ ಜನತೆಯಿಂದ ಬಲವಾಗಿ ಕೇಳಿ ಬರುತ್ತಿದೆ. ಇನ್ನೂ ಟ್ರ್ಯಾಕ್ಟರ್ ಮೂಲಕ ತುಂಬಿಕೊಂಡು ಹೋಗುವ ದಂಧೆಕೋರರು ಇಡೀ ಪೊಲೀಸ್ ಡಿಪಾರ್ಟ್ಮೆಂಟ್ ತಮ್ಮ ಕೈಯಲ್ಲಿದೆ ಎಂಬಂತೆ ವರ್ತಿಸುತ್ತ ರಾತ್ರಿ 12:00 ಗಂಟೆ ನಂತರ ಸಮಯದಲ್ಲಿ ರಾಜಾರೋಷವಾಗಿ ಅಕ್ರಮ ಮರಳನ್ನು ಸಾಗಿಸುವುದು ಈ ಗ್ರಾಮದಲ್ಲಿ ಕಂಡು ಬರುತ್ತಿದೆ.
ಈ ಎಲ್ಲ ಅಕ್ರಮ ಮರಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ನೆಪಕ್ಕೆ ಮಾತ್ರ ಬಂದು ಹೋಗುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಯಾಕೆಂದರೆ ಪೊಲೀಸರಿಂದ ಹಿಡಿದು ಭೂಗಣಿ ಇಲಾಖೆ, ಲೊಕೋಪಯೋಗಿ ಇಲಾಖೆ ಹೀಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಂಗಳ ಮಾಮೂಲು ಸಿಗುತ್ತದೆ. ಅಲ್ಲದೇ ಈ ದಂಧೆಕೋರರಿಂದ ಕೆಲ ಅಧಿಕಾರಿಗಳಿಗೆ ಬಾಡೂಟ ಸಹ ಏರ್ಪಾಟು ಮಾಡಲಾಗುತ್ತದೆಯಂತೆ.
! ಹಾಗಾಗಿ ಈ ಮರಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ನದಿತೀರದ ಜನರು ಆರೋಪಿಸುತ್ತಾರೆ.ಅಧಿಕಾರಿಗಳು ಬರುವ ಮಾಹಿತಿ ಪೊಲೀಸರಿಂದಲೇ ಗೊತ್ತಾಗುತ್ತದೆ ಎಂದು ಹೆಸರು ಹೇಳದ ಟ್ಟ್ರ್ಯಾಕ್ಟರ್ ಚಾಲಕ ವಿವರಿಸುತ್ತಾನೆ. ಪೊಲೀಸರನ್ನು ಹಾಗೂ ಅಧಿಕಾರಿಗಳನ್ನು ಕಾಯಲು ನದಿ ತೀರದ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಾವಲುಗಾರರನ್ನು ಕೂಲಿಗಾಗಿ ನೇಮಿಸಿ ಪೋನ್ ಮೂಲಕ ಅವರು ಮಾಹಿತಿ ಒದಗಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಧಾಳಿ ಮಾಡಲು ಬಂದಾಗ ಅವರ್ಯಾರೂ ಸಿಗವುದಿಲ್ಲ. ಕ್ಷಣ ಮಾತ್ರದಲ್ಲಿಯೇ ಟ್ಟ್ರ್ಯಾಕ್ಟರ್ಗಳು ಹಾಗೂ ಹಮಾಲರು ಎಲ್ಲರೂ ಮಾಯವಾಗುತ್ತಾರೆ! ಅಪ್ಪಿ ತಪ್ಪಿಯೂ ಬುಟ್ಟಿ ದೋಣಿಗಳು ಮಾತ್ರ ಇವರ ಕಣ್ಣಿಗೆ ಗೋಚರಿಸುತ್ತವೆ. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅವುಗಳನ್ನೇ ನಾಶಮಾಡಿ ಹೋಗುತ್ತಾರೆ.
ಇನ್ನೂ ಕೆಲ ಗ್ರಾಮಗಳಲ್ಲಿ ದೇವರ ಹೆಸರಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಹೌದು ದೇವಸ್ಥಾನಕ್ಕೆ 900 ರೂ ಸಂಬಂಧಪಟ್ಟ ಅಧಿಕಾರಿಗಳಿಗೆ 1000 ರೂ. ಹೀಗೆ ಒಟ್ಟು 1900 ರೂಗಳನ್ನು ಕೊಟ್ಟು ಟ್ಟ್ರ್ಯಾಕ್ಟರ್ ತುಂಬಿಸಿಕೊಂಡು ಹೋಗುವುದು ಸಾಮಾನ್ಯವಾಗಿ ಬಿಟ್ಟಿದೆ.
ತುಂಬಿಕೊಂಡು ಹೋದ ಮರಳನ್ನು ಯಾರಿಗೂ ಗೊತ್ತಾಗದ ಪ್ರದೇಶಗಳಲ್ಲಿ ಅಥವಾ ಜಮೀನುಗಳಲ್ಲಿ ಮರಳನ್ನು ಸಂಗ್ರಹಿಸಿ ಅವಶ್ಯಕನುಗುಣವಾಗಿ ಮಾರಾಟ ಮಾಡುತ್ತಾರೆ. ಆದರೆ ವರ್ಷವಾದರೂ ದೇವಸ್ಥಾನ ಕಟ್ಟಡ ಮುಗಿಯುತ್ತಿಲ್ಲ. ಹೀಗೆ ಇಂತಹ ದಂಧೆಯಲ್ಲಿ ತೊಡಗುವವರು ಗ್ರಾಮದ ಪ್ರತಿಷ್ಠಿತ ವ್ಯಕ್ತಿಗಳಾಗಿರುತ್ತಾರೆ. ಇವರಿಗೆ ದೇವರ ಮೇಲೆ ಭಕ್ತಿ, ಭಯ, ನಂಬಿಕೆ ಅನ್ನೋದಾದರೂ ಇದ್ದರೆ ತಮ್ಮ ಕೈಲಾದಷ್ಟು ಭಕ್ತಿಯ ದೇಣಿಗೆಯ ರೂಪದಲ್ಲಿ ತಾವು ಪ್ರಾಮಾಣಿಕವಾಗಿ ದುಡಿದ ಹಣವನ್ನು ದೇವಸ್ಥಾನದ ಕಟ್ಟಡಕ್ಕೆ ನೀಡಬಹುದಲ್ಲವೇ? ಅಥವಾ ದೇವರುಗಳು ಅಕ್ರಮ ಮರಳಿನ ದುಡ್ಡಿನಿಂದಲೇ ದೇವಸ್ಥಾನವನ್ನು ನಿರ್ಮಿಸಿರಿ ಎಂದು ಹೇಳಿವೇಯೇ? ಇದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
