ಚಿತ್ರದುರ್ಗ,
ದಿನ ನಿತ್ಯದ ತಮ್ಮ ಬದುಕಿನ ಒತ್ತಡ ನಿವಾರಣೆಗೆ ಕ್ರೀಡೆ ಮತ್ತು ಸಾಂಸ್ಕತಿಕ ಚಟುವಟಿಕೆಗಳು ಸಹಾಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸೌಭಾಗ್ಯ ಬಸವರಾಜನ್ ಅಭಿಪ್ರಾಯಪಟ್ಟಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಚಿತ್ರದುರ್ಗ ಸಹಯೋಗದಲ್ಲಿ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಇಂದಿನಿಂದ ಪ್ರಾರಂಭವಾದ ಎರಡು ದಿನದ ಚಿತ್ರದುರ್ಗ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಈ ರೀತಿಯಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಸರ್ಕಾರಿ ನೌಕರರಾದ ನಿಮ್ಮಲ್ಲಿ ಸ್ನೇಹ, ಆತ್ಮೀಯತೆ ಬೆಳೆಯವುದಲ್ಲದೆ ಇಲಾಖೆವಾರು ಸಂಬಂಧಗಳು ತಿಳಿಯುತ್ತದೆ ಇದರಿಂದ ಮುಂದೆ ಅನುಕೂಲವಾಗಲಿದೆ, ಕ್ರೀಡೆಯಾಗಲೀ ಸಾಂಸ್ಕøತಿಕ ಚಟುವಟಿಕೆಯಾಗಲಿ ಬರೀ ಪಂದ್ಯಾವಳಿಗಳಿಗೆ ಮಾತ್ರವೇ ಮೀಸಲಾಗದೆ ಇದು ನಿರಂತರವಾಗಿ ನಡೆಯಬೇಕಿದೆ ಇದರಿಂದ ನಿಮ್ಮ ಆರೋಗ್ಯವೂ ಸಹಾ ಸುಧಾರಣೆ ಕಂಡು ಬರುತ್ತದೆ ಎಂದು ಕಿವಿ ಮಾತು ಹೇಳೀದರು.
ಚಿತ್ರದುರ್ಗ ಜಿಲ್ಲೆ ಬರ ಪೀಡತ ಪ್ರದೇಶವಾಗಿದ್ದು, ಇಲಾಖೆಗಳಲ್ಲಿ ಹುದ್ದುಗಳು ಖಾಲಿ ಇದ್ದರೂ ಸಹಾ ಒತ್ತಡದಲ್ಲಿ ಅವರ ಕೆಲಸವನ್ನು ಮಾಡಬೇಕಿದೆ ಇದರ ನಿವಾರಣೆಗೆ ಈ ರೀತಿಯಾದ ಕಾರ್ಯಕ್ರಮಗಳು ವೇದಿಕೆಯಾಗುವುದರಲ್ಲದೆ ನಿಮ್ಮಲ್ಲಿನ ಪ್ರತಿಭೆಯನ್ನು ಹೊರಗಡೆ ತೆಗೆಯಲು ಸಹಾ ನೆರವಾಗಲಿದೆ ಎಂದು ಜಿ.ಪಂ.ಅಧ್ಯಕ್ಷರು ತಿಳಿಸಿ ರೇಷ್ಮೆ ಮತ್ತು ಕಾರ್ಮಿಕ ಇಲಾಖೆಯಲ್ಲಿ ಅಧಿಕಾರಿಗಳು ನೌಕರರೆ ಇಲ್ಲ. ಎಲ್ಲಿ ಸಿಬ್ಬಂದಿಗಳ ಕೊರತೆಯಿರುತ್ತದೋ ಅಲ್ಲಿ ಸಹಜವಾಗಿ ಕೆಲಸ ಒತ್ತಡ ನೌಕರರಿಗೆ ಇದ್ದೇ ಇರುತ್ತದೆ. ಪ್ರತಿವರ್ಷವೂ ಕ್ರೀಡಾಕೂಟಗಳಲ್ಲಿ ನೌಕರರು ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಬಹುದೆಂದು ಹೇಳಿದರು.
ಜಿಲ್ಲಾಧಿಕಾರಿ ಶ್ರೀಮತಿ ಮಿನುತ್ ಪ್ರಿಯ ಮಾತನಾಡಿ, ಸರ್ಕಾರಿ ಕೆಲಸ ಎಂದರೆ ಕೆಲವೊಮ್ಮೆ ಒತ್ತಡ ಬರುತ್ತದೆ ಅದನ್ನು ನಿವಾರಣೆ ಮಾಡಲು ಈ ರೀತಿಯಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಅವರ ನಿವಾರಣೆಗೆ ಮುಂದಾಗಬಹುದಾಗಿದೆ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿರುವುದರಿಂದ ಒತ್ತಡ ಜಾಸ್ತಿಯಾಗುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಿರುವುದು ನಿಜ. ಮಾನವ ಶಕ್ತಿಯಿಂದ ಯಂತ್ರಗಳ ಶಕ್ತಿಯನ್ನು ಹೆಚ್ಚು ಬಳಕೆ ಮಾಡುತ್ತಿರುವುದು ಕೂಡ ಒಂದು ರೀತಿಯ ಸಮಸ್ಯೆಗೆ ಕಾರಣವಾಗಬಹುದು. ಅದಕ್ಕಾಗಿ ದಿನಿನಿತ್ಯವೂ ಜಾಗಿಂಗ್, ವಾಕಿಂಗ್, ಧ್ಯಾನ, ವ್ಯಾಯಾಮಗಳನ್ನು ಮಾಡುವುದರಿಂದ ಸರ್ಕಾರಿ ನೌಕರರು ಒತ್ತಡದಿಂದ ಹೊರಬರಬಹುದು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ ಇದೇ ತಿಂಗಳ ಕೊನೆಯಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಮೈಸೂರಿನಲ್ಲಿ ನಡೆಯಲಿದೆ. ಹಾಗಾಗಿ ಇಲ್ಲಿ ಭಾಗವಹಿಸುವ ಸರ್ಕಾರಿ ನೌಕರರು ಶಿಸ್ತಿನಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಎಲ್ಲರೂ ಬಹುಮಾನ ಗೆಲ್ಲುವ ಪ್ರಯತ್ನ ಮಾಡಿ ರಾಜ್ಯ ಮಟ್ಟದಲ್ಲಿ ಆಡಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.
ರಾಜ್ಯದಲ್ಲಿ ಒಂದು ಲಕ್ಷ 78 ಸಾವಿರ ಹುದ್ದೆ ಖಾಲಿಯಿದೆ. ಇನ್ನೆರಡು ತಿಂಗಳಲ್ಲಿ ಇಪ್ಪತ್ತು ಸಾವಿರ ನೌಕರರು ನಿವೃತ್ತಿಯಾಗಲಿದ್ದಾರೆ. ಇದರಿಂದ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗುವುದರಿಂದ ಮೂರ್ನಾಲ್ಕು ನೌಕರರು ಮಾಡುವ ಕೆಲಸವನ್ನು ಒಬ್ಬರೆ ಮಾಡುವುದರಿಂದ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಸರ್ಕಾರಿ ನೌಕರರೆಂದರೆ ಬೇರೆ ಯಾರು ಅಲ್ಲ. ಸಾರ್ವಜನಿಕರಿದ್ದಂತೆ. ನಾವು ಆರೋಗ್ಯವಾಗಿದ್ದರೆ ಕೆಲಸ ಸುಗಮವಾಗುತ್ತದೆ. ಇವೆಲ್ಲವನ್ನು ಮನದಲ್ಲಿಟ್ಟುಕೊಂಡು ಸರ್ಕಾರ ಖಾಲಿ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕೆಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್ ಮಾತನಾಡಿ ಶಿಕ್ಷಕರೆಂದರೆ ಶಿಸ್ತು, ಸಮಾಜವನ್ನು ತಿದ್ದುತೀಡುವ ಬುದ್ದಿಜೀವಿಗಳೆಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರವಹಿಸಿ ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆಯಾಗಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸಿ. ಇತ್ತೀಚಿನ ದಿನಗಳಲ್ಲಿ ದೇಸಿ ಕ್ರೀಡೆಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ. ಹಿಂದಿನ ಕಾಲದಲ್ಲಿ ಬೆಳಿಗ್ಗೆಯೇ ಎದ್ದು ಜನ ದೇಹ ದಂಡಿಸಿ ಕೆಲಸ ಮಾಡುತ್ತಿದ್ದರಿಂದ ಒತ್ತಡ ಅನಾರೋಗ್ಯದ ಸಮಸ್ಯೆ ಕಾಡುತ್ತಿರಲಿಲ್ಲ. ಈಗ ಪ್ರತಿಯೊಬ್ಬರದು ಅವಸರದ ಜೀವನವಾಗಿರುವುದರಿಂದ ಎಲ್ಲರೂ ಒತ್ತಡಕ್ಕೆ ಸಿಲುಕಿ ಬಳಲುತ್ತಿದ್ದಾರೆ. ಮನಸ್ಸನ್ನು ಸೀಮಿತವಾಗಿಟ್ಟುಕೊಂಡರೆ ಒತ್ತಡ ಹೆಚ್ಚಾಗಿ ಯಾರನ್ನು ಕಾಡುವುದಿಲ್ಲ. ಅನೇಕ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿದೆ. ಖಾಲಿಯಿರುವ ಹುದ್ದೆಗಳನ್ನು ತುಂಬುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಸರ್ಕಾರಿ ನೌಕರರಿಗೆ ಭರವಸೆ ನೀಡಿದರು.
ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ರವಿಕುಮಾರ್, ಪದಾಧಿಕಾರಿಗಳಾದ ರೇವಣಸಿದ್ದಪ್ಪ, ಸುಧಾ, ಮಹಂತೇಶ್, ಬಿ.ಕೃಷ್ಣಪ್ಪ, ಪಾಂಡುರಂಗಪ್ಪ, ಎಸ್.ಬಿ.ಪೂಜಾರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
