ಬೆಂಗಳೂರು
ಭಾರತ ಧರ್ಮಗಳ ನೆಲೆಗಟ್ಟಿನಲ್ಲಿ ಸ್ಥಾಪಿತವಾಗಿರುವ ದೇಶ. ದೇಶದಲ್ಲಿ ಹಲವು ಧರ್ಮಗಳಿದ್ದರು ವೀರಶೈವ ಲಿಂಗಾಯಿತ ಧರ್ಮ ಈ ನಾಡಿಗೆ ಶಿಕ್ಷಣ, ದಾಸೋಹ, ಆರೋಗ್ಯ ಸೇರಿದಂತೆ ಎಲ್ಲಾ ರೀತಿಯ ಕೊಡುಗೆಗಳನ್ನು ನೀಡಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಬಣ್ಣಿಸಿದರು.
ಅರಮನೆ ಮೈದಾನದಲ್ಲಿ ವೀರಶೈವ ಲಿಂಗಾಯಿತ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀಮದ್ರಂಭಾಪುರಿ ವೀರ ಸಿಂಹಸನಾಧೀಶ್ವರ, ಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜಾ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮ್ಮೇಳನದಲ್ಲಿ ಪಾಲ್ಗಂಡು ಮಾತನಾಡಿದರು.
ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ನೂರಾರು ವರ್ಷಗಳಿಂದ ಹಲವು ಕಾರ್ಯಗಳನ್ನು ವೀರಶೈವ ಲಿಂಗಾಯಿತ ಧರ್ಮ ಮಾಡುತ್ತ ಬಂದಿದೆ ಎಂದು ಹೇಳಿದರು.
ರಾಜ್ಯದಲ್ಲಿ ವೀರಶೈವ ಲಿಂಗಾಯಿತ ಪರಂಪರೆ ಐತಿಹಾಸಿಕವಾಗಿದ್ದು, ರಾಜ್ಯದ ಅಭಿವೃದ್ದಿಗೆ, ಸಮಾಜದ ಏಳ್ಗೆಗೆ ಮಠಾಧಿಪತಿಗಳು ನೀಡಿರುವ ಕೊಡುಗೆ ಅನನ್ಯ. ದಿ. ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ, ಶ್ರೀ ರೇಣುಕಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವಾರು ಮಠಾಧೀಶರ ಸೇವೆ ಸ್ಮರಣೀಯವಾದುದು ಎಂದರು.
ಧರ್ಮವನ್ನು ರಕ್ಷಿಸಿದರೆ, ಧರ್ಮ ಸದಾಕಾಲ ನಮ್ಮನ್ನು ರಕ್ಷಿಸುತ್ತದೆ. ಈ ಜಗತ್ತಿನಲ್ಲಿ ನಾವೆಲ್ಲರು ಶಾಂತಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದರೆ ಅದು ಧರ್ಮಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಧರ್ಮಜಾಗೃತಿ ಸಮ್ಮೇಳನದ ಅಧ್ಯಕ್ಷತೆಯನ್ನು ಮೇಯರ್ ಗಂಗಾಂಬಿಕೆ ವಹಿಸಿದ್ದರು. ಜಗದ್ಗುರು ಶ್ರೀ ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜನಾರ್ಧನ ರೆಡ್ಡಿ, ವೀರಶೈವ ಮುಖಂಡ ಪರಮಶಿವಯ್ಯ ಸೇರಿದಂತೆ ನೂರಾರು ಮಠಾಧಿಪತಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








