ಬ್ಯಾಡಗಿ:
ಬಸವಾದಿ ಶರಣರು ಕಳೆದ 12 ನೇ ಶತಮಾನದಲ್ಲೇ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ, ಅಂತಹವರ ಭಾವ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ವಿಧಾನಸೌಧದಲ್ಲಿಯೇ ಶೇ.33 ಸ್ಥಾನಗಳ ಮಹಿಳಾ ಮೀಸಲಾತಿ ನೀಡದೇ ಸಾಂವಿಧಾನಿಕ ಶೋಷಣೆ ನಡೆಯುತ್ತಿದೆ ಎಂದು ಕದಳಿ ಮಹಿಳಾ ವೇದಿಕೆಯ ಸದಸ್ಯೆ ಸುಧಾ ಹೊಸ್ಮನಿ ಆರೋಪಿಸಿದರು.
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ನೆಹರು ಯುವ ಕೇಂದ್ರ ಸಿಂಚನಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಸಾಮಾಜಿಕ ಸೇವೆಯಲ್ಲಿ ಮಹಿಳೆಯರ ಕೊಡುಗೆ ಸಾಕಷ್ಟಿದೆ, ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾಳೆ, ಇತ್ತೀಚಿನ ಯುದ್ಧದಂತಹ ಸ್ಥಿತಿಗತಿಗಳನ್ನು ಎದುರಿಸಲು ರಕ್ಷಣಾ ಸಚಿವೆ ಒಬ್ಬ ಮಹಿಳೆಯಾಗಿದ್ದು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಅದಾಗ್ಯೂ ಸಹ ಚುನಾವಣೆಗಳಲ್ಲಿ ಶೇ.33 ರಷ್ಟು ಮೀಸಲಾತಿ ಕಾನೂನು ವಿಧಾನಸೌಧದಲ್ಲೇ ಧೂಳು ತಿನ್ನುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ನೋಡುವ ದೃಷ್ಟಿಕೋನ ಬದಲಾಗಲಿ: ದ್ರಾಕ್ಷಾಯಿಣಿ ಹರಮಟ್ಟಿ ಮಾತನಾಡಿ, ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾಗಿದೆ, ಕೌಟುಂಬಿಕ ಸಂಕೋಲೆಗಳಿಂದ ಆಕೆಯನ್ನು ಬಿಡುಗಡೆಗೊಳಿಸಲು ಇಂದಿಗೂ ಸಾಧ್ಯವಾಗುತ್ತಿಲ್ಲ ಸ್ವಾತಂತ್ರ್ಯವಾಗಿ ಬದಕಲು ಪುರುಷ ಪ್ರಧಾನ ಸಮಾಜ ಬಿಡುತ್ತಿಲ್ಲ, ಇವೆಲ್ಲವುಗಳನ್ನೂ ಮೀರಿ ಆಕೆ ಬದುಕನ್ನು ಕಟ್ಟಿಕೊಳ್ಳಲು ಹೇಗೆ ಸಾಧ್ಯ, ನಿತ್ಯ ಆಕೆಯ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ ಎಂದರು.
ಎಲ್ಲ ಧರ್ಮಗಳಲ್ಲಿಯೂ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಕರಿದ್ದಾರೆ: ನಾಗರತ್ನ ಹುಲ್ಲತ್ತಿ ಮಾತನಾಡಿ, ಎಲ್ಲ ಧರ್ಮಗಳಲ್ಲಿಯೂ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದಕರಿದ್ದಾರೆ, ಎಂದರೆ ತಪ್ಪಾಗಲಾರದು, ಇದಕ್ಕಾಗಿ ಕೆಲ ಧರ್ಮಗಳಲ್ಲಿ ಶೀತಲ ಸಮರ ಏರ್ಪಟ್ಟಿರುವ ನಿದರ್ಶನಗಳಿವೆ, ಇತ್ತೀಚೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಂತಹ ತ್ರಿವಳಿ ತಲ್ಲಾಖ್ ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಂ ಸಹೋದರಿಯರಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಅವಕಾಶವನ್ನು ಕಲ್ಪಸಿಕೊಟ್ಟಿದ್ದು ತಾಳಿ ಕಟ್ಟಿದ ಗಂಡನೊಂದಿಗೆ ಜೀವನದ ಕೊನೆ ಉಸಿರಿರುವರೆಗೂ ಬದಕಲು ಅವಕಾಶ ಕಲ್ಪಿಸಿದೆ, ಆದರೆ ಪುರುಷ ಪ್ರಧಾನ ಕುಟುಂಬದ ವ್ಯವಸ್ಥೆಯಲ್ಲಿ ಕಾನೂನಿನ ಹಿಂದಿರುವ ಸತ್ಯವನ್ನಾಗಲಿ ಅಥವಾ ಸಂತೋಷವನ್ನಾಗಲಿ ಹಂಚಿಕೊಳ್ಳಲು ಸಹ ಬಿಡದಿರುವುದು ಖೇದದ ಸಂಗತಿ ಎಂದರು.
ಪ್ರತಿ ಹಗರಣದ ಹಿಂದೆ: ಉಪನ್ಯಾಸಕಿ ಡಿ.ಸರಸ್ವತಿ ಮಾತನಾಡಿ, ಸ್ತ್ರೀ ಸ್ವಾತಂತ್ರ್ಯ ಎಂದರೆ ಸ್ವೇಚ್ಚೆಯಾಗಿ ಬದುಕುವುದು ಎಂದರ್ಥವಲ್ಲ, ಪ್ರತಿ ಸಾಧನೆಯ ಹಿಂದೆ ಮಹಿಳೆಯ ಪಾತ್ರವಿರುತ್ತದೆ ಎಂಬ ನುಡಿಯೊಂದಿತ್ತು, ಆದರೆ ಇದೀಗ ಪ್ರತಿ ಹಗರಣದ ಹಿಂದೆ ಮಹಿಳೆಯರ ಹೆಸರು ಕೇಳಿ ಬರುತ್ತಿರುವುದು ವಿಪಾರ್ಯಾಸದ ಸಂಗತಿ ಸ್ವಾತಂತ್ರ್ಯ ನೆಪದಲ್ಲಿ ಯಾರ ಸಂಕೋಲೆಯಲ್ಲಿಯೂ ಬದುಕಲು ಇಚ್ಚಿಸದ ಕೆಲ ಮಹಿಳೆಯರು ನೀಚ ಪ್ರವೃತ್ತಿಗಿಳಿಯುವುದು ಆಕೆಗ ಘನೆತೆಗೆ ತಕ್ಕುದಲ್ಲ ಎಂದರು. ಈ ಸಂದರ್ಭದಲ್ಲಿ ಎಂ.ಎಸ್.ದಂಡಗಿ, ಗಣೇಶ ದೇವರಗುಡ್ಡ, ಕೆ.ವಿ.ಕಮ್ಮಾರ, ಬಿ.ಎಸ್.ಭೀಮಣ್ಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
