ಹರಪನಹಳ್ಳಿ:
ಪಟ್ಟಣದ ಕೊಟ್ಟೂರು ರಸ್ತೆಯ ಎಪಿಎಂಸಿ ಹಿಂಭಾಗದಲ್ಲಿರುವ ಜಲ ಸಂಗ್ರಹಗಾರಕ್ಕೆ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಇದರಿಂದ ನೀರು ಪೂರೈಕೆಗೆ ತೊಂದರೆ ಉಂಟಾಗುತ್ತಿದೆ.
ಪಟ್ಟಣದ ಮೇಗಳಪೇಟೆ, ಬ್ರೂಸ್ ಪೇಟೆ, ಜೈನರ ಓಣಿ, ಸಾಳೇರ ಓಣಿ ಸೇರಿದಂತೆ ನಾಲ್ಕೈದು ವಾರ್ಡಗಳಿಗೆ ಈ ಜಲ ಜಲ ಸಂಗ್ರಹಗಾರದಿಂದ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ ಈ ಸ್ಥಳ ಕುಡುಕರು ಹಾಗೂ ಪಾರ್ಟಿ ಮಾಡುವವರಿಗೆ ಇದು ನೆಚ್ಚಿನ ತಾಣವಾಗಿ ಪರಿಣಮಿಸಿದೆ.
ಕುಡುಕರು ಮದ್ಯದ ಬಾಟಲಿಗಳನ್ನು ಜಲ ಸಂಗ್ರಹಗಾರದಲ್ಲಿ ಎಸೆತ್ತಿರುವುದರಿಂದ ನೀರು ಸರಬರಾಜು ಆಗುವ ಪೈಪಗಳಿಗೆ ಬ್ಲಾಕ್ ಆಗುತ್ತಿವೆ. ಹೀಗಾಗಿ ಕಳೆದ ಎರಡು ದಿನ ನೀರು ಪೂರೈಕೆ ತೊಂದರೆ ಉಂಟಾಗಿತ್ತು ಎಂದು ನೀರುಗಂಟಿಗಳು ಆರೋಪಿಸಿದ್ದಾರೆ.
ಸಮೀಪದಲ್ಲೇ ಮದ್ಯದಂಗಡಿ ಇರುವುದರಿಂದ ಸಂಜೆ ಆದ ತಕ್ಷಣ ಮದ್ಯಪ್ರಿಯರು ಈ ಸ್ಥಳಕ್ಕೆ ಲಗ್ಗೆ ಇಡುತ್ತಾರೆ. ಸೂಕ್ತ ಭದ್ರತೆ ಇಲ್ಲದೇ ಕಾರಣ ಜಲ ಸಂಗ್ರಹಗಾರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಂಗ್ರಹಗಾರಕ್ಕೆ ಮುಚ್ಚಳ ಹಾಕದೆ ಹಾಗೆಯೇ ಬಿಡಲಾಗಿದೆ. ಇದರಿಂದ ನೀರು ಸೇವಿಸುವ ಜನರ ಆರೋಗ್ಯದ ಮೇಲೆಯೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಸಂಬಂಧಿಸಿದವರು ಜಲ ಸಂಗ್ರಹಗಾರಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
