ದಾವಣಗೆರೆ :
ಜವಳಿ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಆವಿಷ್ಕಾರಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಶಾಹಿ ಎಕ್ಸ್ಪೋಟ್ರ್ನ ಪ್ರಬಂಧಕಿ ಷಗುಪ್ಥಾ ಪರವೀನ್ ಅಭಿಪ್ರಾಯಪಟ್ಟರು.ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಜವಳಿ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಟೆಕ್ಸ್ಕ್ರಿಯೇಟಿವ್ 2019 ಹಾಗೂ ಟೆಕ್ಸ್ಎಕ್ಸ್ಪೋ ಜವಳಿ ತಂತ್ರಜ್ಞಾನ ಕ್ಷೇತ್ರದ ವಿದ್ಯಾರ್ಥಿಗಳ 19ನೇ ರಾಷ್ಟ್ರಮಟ್ಟದ ಸಿಂಪೋಸಿಯಂ ಹಾಗೂ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಜ್ಯ ಬಳಸಿ ಜವಳಿ ತಯಾರಿಸುವ ಪರಿಸರ ಸ್ನೇಹಿ ಅವಿಷ್ಕಾರಗಳು ಇಂದಿನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಟೆಕ್ಸ್ಟೈಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಸಂಶೋಧನೆಗೆ ಮುಂದಾಗಬೇಕೆಂದು ಕಿವಿಮಾತು ಹೇಳಿದರು.
ವಾರ್ಷಿಕ 250 ಬಿಲಿಯನ್ ಡಾಲರ್ ಗಳಷ್ಟು ಜಾಗತಿಕ ಮಾರುಕಟ್ಟೆಯೊಂದಿಗೆ 45 ಮಿಲಿಯನ್ಗೂ ಹೆಚ್ಚು ಜನಕ್ಕೆ ಉದ್ಯೋಗ ಕೊಟ್ಟಿರುವ ಜವಳಿ ಉದ್ಯಮದ ಜ್ಞಾನವನ್ನು ಜವಳಿ ತಾಂತ್ರಿಕ ಶಿಕ್ಷಣ ವಿದ್ಯಾರ್ಥಿಗಳು ಕಾಲೇಜು ಜೀವನದಲ್ಲೇ ಪಡೆಯಬೇಕು ಹಾಗೂ ಕಂಪನಿಗಳ ಪ್ರಾಯೋಗಿಕ ಜ್ಞಾನವೂ ಬೇಕು ಇದಕ್ಕಾಗಿ ಇಂತಹ ವಾದಾನುವಾದಗಳು ಅತ್ಯವಶ್ಯಕವಾಗಿದೆ ಎಂದರು.
ಬಾಂಗ್ಲಾ, ವಿಯಟ್ನಾಂ ಸೇರಿದಂತೆ ಅನೇಕ ದೇಶಗಳು ಜವಳಿ ಕ್ಷೇತ್ರದಲ್ಲಿ ಭಾರತದ ತಾಂತ್ರಿಕ ನಿಪುಣರನ್ನು ಬಯಸುತ್ತಿವೆ. ಉಪನ್ಯಾಸಕರು ತಾಂತ್ರಿಕ ಜ್ಞಾನ ನೀಡಬಹುದು. ಆದರೆ, ಕಂಪನಿಗಳ ಪ್ರಾಯೋಗಿಕ ಜ್ಞಾನವು ನಿಮ್ಮ ಆಸಕ್ತಿದಾಯಕ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಪದವಿ ಪಡೆದ ನಂತರ ಗಾರ್ಮೆಂಟ್ ಇಂಡಸ್ಟ್ರೀಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದೊಂದೇ ಗುರಿಯಾಗಬಾರದು. ಅದರ ಹೊರತಾಗಿಯೂ ಸಾಕಷ್ಟು ಅವಕಾಶಗಳಿವೆ. ಪದವಿ ಪಡೆದು ಕಾಲೇಜಿನಿಂದ ಹೊರ ಹೋಗುವಾಗ ಆರಾಮದಾಯಕ ಉದ್ಯೋಗ ಕೊಡುವ ಸಂಸ್ಥೆಗೆ ಸೇರಬೇಕೆಂದು ಬಯಸಿದರೆ ನಿಮಗೆ ನಿರಾಸೆಯಾಗಬಹುದು. ಆದ್ದರಿಂದ ಸಂಸ್ಥೆಗಳಲ್ಲಿ ಕನಿಷ್ಟ 2 ರಿಂದ 3 ವರ್ಷ ಶ್ರಮಿಸಿದರೆ, ಯಶಸ್ಸು ಕಟ್ಟಿಟ್ಟ ಬುತ್ತಿಯಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಸಾರಾ ಅಪೆರಲ್ಸ್ನ ಪ್ರಧಾನ ವ್ಯವಸ್ಥಾಪಕಿ ರೇವತಿ ರಮಣ್ ಮಾತನಾಡಿ, ವಿದ್ಯಾರ್ಥಿಗಳು ಜವಳಿ ಕ್ಷೇತ್ರಕ್ಕೆ ಹೊಸ ಆವಿಷ್ಕಾರಗಳನ್ನು ನೀಡಬೇಕೆಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ್, ಕ್ರಿಯಾ ಶೀಲ ಚಿಂತನೆಗಳಿಲ್ಲದೆ ರಚನಾತ್ಮಕತೆ ಸಾಧ್ಯವಿಲ್ಲ. ರಚನಾತ್ಮಕತೆ ಇಲ್ಲದೇ ಉತ್ಪಾದನೆ ಸಾಧ್ಯವಿಲ್ಲ.
ಇಂತಹ ವಾದಾನುವಾದಗಳಿಂದ ಶಿಕ್ಷಣ ಮತ್ತು ಉದ್ಯಮ ರಂಗದ ನಡುವಿನ ಅಂತರ ಕಡಿಮೆಯಾಗುತ್ತದೆ ಎಂದು ಪ್ರತಿಪಾದಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ಜವಳಿ ವಿಭಾಗದ ಮುಖ್ಯಸ್ಥ ಡಾ.ಕೆ.ಮುರುಗೇಶ್ ಬಾಬು, ಇಲ್ಲಿನ ಜವಳಿ ವಿಭಾಗದ ನಾಲ್ಕು ಜನ ಉಪನ್ಯಾಸಕರು ಡಾಕ್ಟರೇಟ್ ಪದವಿ ಪಡೆದಿರುವುದು ಸಂತಸದ ವಿಚಾರವಾಗಿದೆ. ಇಂದಿನ ರಾಷ್ಟ್ರಮಟ್ಟದ ಸಿಂಪೋಲಿಯಂನಲ್ಲಿ ವಿವಿಧ ರಾಜ್ಯಗಳ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರೌಢ ಪ್ರಬಂಧಗಳನ್ನು ಮಂಡಿಸಲಿದ್ದಾರೆ ಎಂದರು.
ವಿಭಾಗದ ಡಾ.ರಮೇಶ್, ಡಾ.ರವೀಂದ್ರ, ಡಾ.ದಿನೇಶ್, ಡಾ.ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು. ನಮ್ರತಾ ನಿರೂಪಿಸಿದರು. ದೀಪಿಕಾ ಸಂಗಡಿಗರು ಪ್ರಾರ್ಥಿಸಿದರುತ. ಐಶ್ವರ್ಯ, ಸರಳಾ, ಜಯಂತ್ ಅತಿಥಿಗಳನ್ನು ಪರಿಚಯಿಸಿದರು. ರಮ್ಯಾ ಸ್ವಾಗತಿಸಿದರು. ಸಫಾಕಾನ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
