ಜೀವನದ ಪರೀಕ್ಷೆಯಲ್ಲಿ ಪಾಸಾಗಲು ಸದ್ಗುಣ ಬೆಳೆಸಿಕೊಳ್ಳಿ

ದಾವಣಗೆರೆ:

    ಜೀವನ ಎಂಬ ಪರೀಕ್ಷೆಯಲ್ಲಿ ಪಾಸಾಗಲು, ದುರ್ಗಣಗಳಿಂದ ದೂರ ಉಳಿದು, ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

     ನಗರದ ಮಹಿಳಾ ಸೇವಾ ಸಮಾಜದ ಆವರಣದಲ್ಲಿ ಗುರುವಾರ ನಡೆದ ಮಹಿಳಾ ಸೇವಾ ಸಮಾಜದ 88ನೇ ವಾರ್ಷಿಕೋತ್ಸವ, ಶಿಶು ವಿಹಾರ, ಪ್ರಾಥಮಿಕ, ಪ್ರೌಢ ಶಾಲೆಯ ರಜತ ಸಂಭ್ರಮ, ಶ್ರೀಮತಿ ಚನ್ನಮ್ಮ ಮಹೇಶ್ವರಯ್ಯ ಪದವಿ ಪೂರ್ವ ಕಾಲೇಜಿನ ದಶಮಾನೋತ್ಸವ ಹಾಗೂ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

     ಶೈಕ್ಷಣಿಕವಾಗಿ ಪಾಸಾಗಲು 100 ಅಂಕಗಳು ಮಾತ್ರ ಇರುತ್ತವೆ. ಆದರೆ, ಜೀವನ ಎಂಬ ಪರೀಕ್ಷೆಯಲ್ಲಿ ಪಾಸಾಗಲು ಸದ್ಗುಣ ಹಾಗೂ ದುರ್ಗುಣ ಎಂಬ ಎರಡು ಗುಣಗಳಿರುತ್ತವೆ. ಆದ್ದರಿಂದ ಜೀವನ ಎಂಬ ಪರೀಕ್ಷೆಯಲ್ಲಿ ಪಾಸಾಗಲು ದುರ್ಗುಣದಿಂದ ಅಂತರ ಕಾಯ್ದುಕೊಂಡು, ಸದ್ಗುಣಗಳನ್ನು ಬೆಳೆಸಿಕೊಂಡು ಕೀರ್ತಿವಂತರಾಗಬೇಕೆಂದು ಕಿವಿಮಾತು ಹೇಳಿದರು.

     ಇಂದು ಸಮಾಜದಲ್ಲಿ ಸಾಕ್ಷರಸ್ಥರ ಪ್ರಮಣ ಸಾಕಷ್ಟಿದೆ. ಆದರೆ, ಸದ್ಗುಣವುಳ್ಳ ಸಾಕ್ಷರರ ಸಂಖ್ಯೆಯೇ ಹೆಚ್ಚಾಗಿ, ಹೃದಯವಂತರ ಕೊರತೆ ಎದ್ದು ಕಾಣುತ್ತಿದೆ. ಆಸ್ತಿ ಹಾಗೂ ಹಣದ ಆಸೆಗೆ ಒಳಗಾಗಿ ರಕ್ತಸಂಬಂಧಿಗಳನ್ನೇ ಕೊಲ್ಲುವಂತಹ ದುರಳರಿದ್ದು, ಹಣಕ್ಕಾಗಿ ಸಮಾಜದಲ್ಲಿ ಹೆಚ್ಚಿನ ಕೌರ್ಯ, ದೌರ್ಜನ್ಯ ನಡೆಯುತ್ತಿದೆ. ಎಂದು ವಿಷಾದ ಪಡಿಸಿದ ಅವರು, ಹಣದ ಬದಲು ಮನುಷ್ಯ ಸದ್ಗುಣಗಳಿಗೆ ಬೆಲೆ ನೀಡಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.

     ಕ್ರೌರ್ಯವೇ ತುಂಬಿರುವ ಈ ಸಮಾಜಕ್ಕೆ ಮೌಲ್ಯಯುತ ವ್ಯಕ್ತಿಗಳ ಅವಶ್ಯಕತೆ ಇದೆ. ಆದ್ದರಿಂದ ಪಾಠದ ಜತೆಗೆ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಇಂದಿನ ತುರ್ತಾಗಿದೆ ಎಂದ ಅವರು, ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನ ದೊರೆಯಬೇಕು. ಅವರು ಸಹ ಸ್ವತಂತ್ರರಾಗಿ ಬಾಳಬೇಕು.

      ಅಭಿವೃದ್ಧಿ ಹೊಂದಬೇಕೆಂಬ ಮಹದಾಸೆಯೊಂದಿಗೆ ಕಳೆದ 88 ವರ್ಷಗಳ ಹಿಂದೆಯೇ ಬಳ್ಳಾರಿ ಸಿದ್ದಮ್ಮ ಹಾಗೂ ಮತ್ತಿತರೆ ಮಹಿಳೆಯರಿಂದ ಪ್ರಾರಂಭವಾದ ಈ ಕೇಂದ್ರದ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     ಖಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಭಾರತವು ತನ್ನದೇಯಾದ ಸಂಸ್ಕತಿ, ಇತಿಹಾಸ ಹೊಂದಿದ್ದು, ಇದು ಜಗತ್ತಿಗೆ ಮಾದರಿಯಾಗಿದೆ. ಇಲ್ಲಿಯ ಶಿಕ್ಷಣ ಪರಂಪರೆ ಬೆಳೆದುಕೊಂಡು ಬಂದಿದ್ದು ಗುರುಕುಲ ಹಾಗೂ ಮಠಮಾನ್ಯಗಳಿಂದ. ಆದರೆ, ವ್ಯಾಪಾರದ ಉದ್ದೇಶಕ್ಕೆ ಭಾರತಕ್ಕೆ ಆಗಮಿಸಿದ ಬ್ರಿಟೀಷರು ನಮ್ಮನ್ನು ಆಳಲು ಆರಂಭಿಸಿ, ಅವರಿಗೆ ಬೇಕಾಗಿದ್ದ ಗುಮಾಸ್ತರನ್ನು ಸೃಷ್ಟಿಸುವ ಉದ್ದೇಶದಿಂದ ನಮ್ಮ ಶಿಕ್ಷಣ ನೀತಿಯನ್ನೇ ಬದಲಾಯಿಸಿದರು. ಇಂದು ಸಹ ಆ ಶಿಕ್ಷಣ ನೀತಿಯೇ ಮುಂದುವರೆದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ ಎಂದು ವಿಷಾದಿಸಿದರು.

       ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಮಾತನಾಡಿ, ಶಿಕ್ಷಕರುಕೇವಲ ಪಠ್ಯಕ್ಕೆ ಸೀಮಿತರಾಗಿ, ಪಾಠ-ಪ್ರವಚನ ಮಾಡಿದರೆ ಸಾಲದು. ಪಠ್ಯದ ಜತೆಗೆ ಮಕ್ಕಳ ಮನೋವಿಜ್ಞಾನ ಅರಿಯುವ ಮೂಲಕ ಮನ ಮುಟ್ಟುವಂತೆ ಪಾಠ ಮಾಡಿ, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕೆಂದು ಕರೆ ನೀಡಿದರು.

       ಕಾರ್ಯಕ್ರಮವನ್ನು ದಿ.ದಾವಣಗೆರೆ ಕೋ ಆಪ್‍ರೇಟಿವ್ ಬ್ಯಾಂಕ್‍ನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಉದ್ಘಾಟಿಸಿದರು. ವೇದಿಕೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಸಾವಿತ್ರಮ್ಮ, ಮಹಿಳಾ ಸಮಾಜದ ಐ.ಜಯಶೀಲಮ್ಮ, ಪುಟ್ಟಮ್ಮ ಮಹಾರುದ್ರಯ್ಯ, ಡಾ.ಭಾರತಿ, ಶಿಕ್ಷಕಿ ನಿರ್ಮಲ, ಶೋಭಾ, ವೀಣಾ, ಹಾಲಪ್ಪ, ಎಂ.ಬಿ.ಜಗದೀಶ ಮತ್ತಿತರರು ಉಪಸ್ಥಿತರಿದ್ದರು. ಐ. ವಸಂತಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯನಿ ದಾಕ್ಷಾಯಣಿ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link