ಆತ್ಮ ಯಾವ ಕುಲ ಎಂದು ಪ್ರಶ್ನಿಸಿದ ಕನಕ ಮಹಾನ್ ಸಂತ

ತುಮಕೂರು

     ಮನುಕುಲದ ಹಿತಕ್ಕಾಗಿ ಲೋಕಚಿಂತನೆ ಮಾಡಿದ ಕನಕದಾಸರು ಹಾಗೂ ಕುವೆಂಪುರನ್ನು ಕೇವಲ ಯಾವುದೋ ಒಂದು ಸಮುದಾಯ ಸಂಘಟನೆಗಳಿಗೆ ಸೀಮಿತ ಮಾಡಬಾರದು ಎಂದು ಸಂಸ್ಕೃ ತಿ ಚಿಂತಕ ಡಾ. ಜಿ.ವಿ.ಆನಂದ ಮೂರ್ತಿ ತಿಳಿಸಿದರು.ನಗರದ ಎಂಪ್ರೆಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಗರಿಕೆ ಮನೆ ಕುಟುಂಬದವರ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಎಸ್.ಕೃಷ್ಣಪ್ಪನವರ ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಸಂಶೋಧನಾ ಕೃತಿ ಕುರಿತ ಅವಲೋಕನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತ ಕಂಡ ಶ್ರೇಷ್ಠ ಸಂತರಲ್ಲಿ ಕನಕದಾಸರೂ ಒಬ್ಬರಾಗಿದ್ದಾರೆ. ಆದರೆ ಅವರನ್ನು ನೋಡುವ ದೃಷ್ಟಿಕೋನ ಬದಲಾಗಬೇಕಿದೆ. ದಾರ್ಶನಿಕ ಸಂತರಲ್ಲಿ ಅನೇಕರು ಕೆಳ ಸಮುದಾಯಗಳಿಂದ ಬಂದವರೆ ಆಗಿದ್ದಾರೆ. ಅವರಲ್ಲಿ ಕನಕರು ಒಬ್ಬರಾಗಿದ್ದಾರೆ. ಶಿಕ್ಷಣ ಪಡೆಯುವುದೆ ಬಹುದೊಡ್ಡ ಸಮಸ್ಯೆಯಾಗಿದ್ದ ಕಾಲದಲ್ಲಿಯೆ ಕನಕದಾಸರು ತಮ್ಮ ಕೀರ್ತನೆಗಳಿಂದ ಜಾತಿ, ಮತಗಳ ಭೇದ ಭಾವ ತೊರೆಯಲು ಲೋಕಹಿತದ ಚಿಂತನೆ ಮಾಡಿದವರಾಗಿದ್ದಾರೆ.

    ಆತ್ಮಕ್ಕೆ ಯಾವ ಕುಲ? ಜೀವಕ್ಕೆ ಯಾವ ಕುಲ? ಜಲವೆ ಸಕಲ ಜೀವರಾಶಿಗಳಿಗೆ ತಾಯಲ್ಲವೆ ಎಂಬ ಮಹತ್ವದ ಸಂದೇಶ ಸಾರಿದ ಮಹಾನ್ ಸಂತ ಕನಕರು ಎಂದು ತಿಳಿಸಿದರು.ಉಡುಪಿಯ ಶ್ರೀ ಕೃಷ್ಣ ಸನ್ನಿಧಾನದಲ್ಲಿ ಕನಕದಾಸರನ್ನು ಕೆಳಜಾತಿ ಎಂದು ಹೇಳಿ ದರ್ಶನ ಮಾಡಲು ಬಿಡದ ಸಮಯದಲ್ಲೆ ಶ್ರೀ ಕೃಷ್ಣನೇ ಕಿಂಡಿಯ ಮೂಲಕ ದರ್ಶನ ನೀಡುತ್ತಾನೆ ಎಂಬ ನಂಬಿಕೆಯಿದೆ. ಆದರೆ ಇಲ್ಲಿ ನಿಜವಾಗಿ ಕನಕದಾಸರು ದೇವಸ್ಥಾನಕ್ಕೆ ಹೋಗಿದ್ದರೋ ಇಲ್ಲವೋ ಎಂಬುದನ್ನು ನಾವ್ಯಾರು ನೋಡಿಲ್ಲ.

    ಆದರೆ 1933 ರಲ್ಲಿ ಉಡುಪಿಗೆ ಭೇಟಿ ನೀಡಿದ್ದ ಗಾಂಧೀಜಿಯನ್ನು ದೇವಸ್ಥಾನಕ್ಕೆ ಆಗಮಿಸುವಂತೆ ಕರೆ ನೀಡಿದಾಗ ಅವರು ಶೂದ್ರರನ್ನು, ಕೆಳಜಾತಿಯವರನ್ನು ದೇವಸ್ಥಾನ ಪ್ರವೇಶ ಮಾಡಿಸುವವರೆಗೆ ನಾನು ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಹೇಳಿ, ಕನಕನ ಕಿಂಡಿ ಮಾತ್ರ ತೋರಿಸಿ ಎಂಬುದಾಗಿ ಹೇಳಿದ್ದರಂತೆ. ಇದು ಇತಿಹಾಸಲ್ಲಿ ಉಲ್ಲೇಖ ಮಾಡಿದ್ದಾರೆ ಎಂದು ತಿಳಿಸಿದರು.

    ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಸಂಶೋಧನಾ ಕೃತಿ ಕುರಿತು ಮಾತನಾಡಿದ ಬೆಂಗಳೂರಿನ ಲೇಖಕ ಡಾ.ಸುರೇಶ್ ನಾಗಲಮಡಿಕೆಯವರು, ರಾಜ್ಯದಲ್ಲಿನ ದಾರ್ಶನಿಕರನ್ನು ಕೇವಲ ಅವರ ಕೃತಿಗಳಿಂದ ಮಾತ್ರ ನೋಡುವುದರ ಬದಲಾಗಿ ಅವರನ್ನು ನೆಪವಾಗಿಟ್ಟುಕೊಂಡು ವಿವಿಧ ಆಯಾಮಗಳನ್ನು ಅಧ್ಯಯನ ಮಾಡಿರುವುದು ಉತ್ತಮವಾಗಿದೆ. ನಮ್ಮ ಪರಂಪರೆಯಲ್ಲಿ ಜುಂಜಪ್ಪ ಪರಂಪರೆ, ಬೀರಪ್ಪ ಪರಂಪರೆ, ಮಂಟೆಸ್ವಾಮಿ, ಮಾದಪ್ಪ ಇವರ ವಚನಗಳನ್ನು ನೋಡುವುದಾದರೆ ಕನಕದಾಸರು ಕುರಿ ಸಾಕಾಣಿಕೆ ಮಾಡದೇ ಇದ್ದರೂ ಅದರ ಅನುಭವ ಪಡೆದುಕೊಂಡಿದ್ದರು. ಅಲ್ಲದೆ ಕನಕದಾಸರ ಕೀರ್ತನೆಗಳು ಸೇರಿದಂತೆ ಅವರನ್ನು ಈಗಿನ ಕಾಲಘಟ್ಟದಲ್ಲಿ ಹೇಗೆ ನೋಡಬೇಕು ಎಂಬುದನ್ನು ಸವಿವಿರವಾಗಿ ಸಂಶೋಧÀನಾ ಕೃತಿಯಲ್ಲಿ ತಿಳಿಸಿದ್ದಾರೆ ಎಂದು ಪುಸ್ತಕದ ವಿವಿಧ ಆಯಾಮಗಳನ್ನು ಬಿಚ್ಚಿಟ್ಟರು.

     ಮುಖ್ಯ ಅತಿಥಿಯಾಗಿದ್ದ ಲೇಖಕ ಡಾ. ಕೆ.ಪಿ.ನಟರಾಜ್ ಮಾತನಾಡಿ, ಕರ್ನಾಟಕದ ವಿವಿಧ ಭಾಗಗಳಲ್ಲಿ ಜಾನಪದ ಕನ್ನಡವನ್ನು ಆಡುತ್ತಾ, ನಾಲ್ಕು ದಿಕ್ಕಿನಲ್ಲಿನ ನಾಲ್ಕು ಜ್ವಲಂತ ಪರಂಪರೆಯನ್ನು ತಿಳಿದುಕೊಳ್ಳುವುದು ಬಹುಮುಖ್ಯವಾಗಿದೆ. ಪಶುಪಾಲನಾ ಪರಂಪರೆಯಲ್ಲಿ ಅನುಕಂಪ, ಕಾರುಣ್ಯ, ಜೀವ ಕಾರುಣ್ಯ ಇವು ಮುಖ್ಯ. ನಾವು ಸಾಕಿ ಸಲಹುವ ಯಾವುದೆ ಪ್ರಾಣಿ, ಪಕ್ಷಿಗಳಿಂದ ನಮ್ಮ ಕೌಟುಂಬಿಕ ಬದುಕು ಬೆಸೆದುಕೊಂಡಿರುತ್ತದೆ. ಇದು ಪಶುಪಾಲನಾ ಪರಂಪರೆಯ ಬಹುಮುಖ್ಯ ಸಂವೇದನಾಶೀಲವಾಗಿದೆ ಎಂದು ತಿಳಿಸಿದರು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಸಿದ್ದಲಿಂಗಪ್ಪ ಮಾತನಾಡಿ, ಕನಕದಾಸರು ಪಶುಪಾಲನೆ ಮಾಡದೆ ಇದ್ದರೂ ಅವರ ತಂದೆ ತಾಯಿಯ ಕಾರ್ಯ ವೈಖರಿಯಿಂದ ಅನುಭವ ಪಡೆಯುತ್ತಾರೆ. ತನ್ನ ಮನಸ್ಸಿನಲ್ಲಿ ಉಂಟಾದ ಬದಲಾವಣೆಗಳಿಂದ ದಾರ್ಶನಿಕರಾಗುತ್ತಾರೆ. ಸಾಮ್ರಾಜ್ಯ ವಿಸ್ತರಣೆ ಮಾಡಬೇಕು ಎಂಬ ಉದ್ದೇಶ ಇದ್ದಂತಹ ವ್ಯಕ್ತಿ ಬದಲಾವಣೆಯಾಗಿ ಕುಲಕುಲವೆಂದು ಹೊಡೆದಾಡದಿರಿ ಎಂದು ಮನುಕುಲದ ಬಗ್ಗೆ ಪ್ರಶ್ನೆ ಮಾಡುವವರಾಗುತ್ತಾರೆ ಎಂದರು.

    ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್.ಕೃಷ್ಣಪ್ಪ ಅವರು, ಸತತ 13 ವರ್ಷಗಳಿಂದ ಗರಿಕೆ ಮನೆತನದ ಸಹಯೋಗದಲ್ಲಿ ಪ್ರತಿ ವರ್ಷ ಫೆ.2ರಂದೆ ಕಾರ್ಯಕ್ರಮ ಮಾಡಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದೇವೆ. ಡಾ.ಜಿ.ವಿ.ಆನಂದಮೂರ್ತಿ ಅವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಕಾರ್ಯಕ್ಕೆ ಸಲ್ಲಿಸಲಾದ ಸಂಶೋಧನಾ ಕೃತಿ ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಎಂಬ ಕೃತಿಯನ್ನು ಕನಕದಾಸರ ಜಯಂತಿಯಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾಂಸರಾದ ಡಾ.ಲಕ್ಷ್ಮಣದಾಸ್ ಮತ್ತು ಸಂಗೀತ ಶಿಕ್ಷಕ ಶಿವಲಿಂಗಶೆಟ್ಟಿ ಹಾಗೂ ತಬಲಾ ವಾದ್ಯ ನುಡಿಸಿದ ಶ್ರೀಧರ್ ಮತ್ತು ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಇದೇ ಸಂದರ್ಭದಲ್ಲಿ ಹಲವರು ಕೃಷ್ಣಪ್ಪ ಅವರನ್ನು ಸನ್ಮಾನಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link