ತುಮಕೂರು:
ಅಕ್ಷರ ದಾಸೋಹ ಯೋಜನೆಯಡಿ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು, ಬಿಸಿಯೂಟ ಯೋಜನೆಯ ಖಾಸಗೀಕರಣ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ಅಕ್ಷರ ದಾಸೋಹ ನೌಕರರು,ಬೆಳಗ್ಗೆ 9.30 ರಿಂದ ಸಂಜೆ 4.30ರವರೆಗೆ ನಿರಂತರ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರಿಗೆ ನೀಡುತ್ತಿರುವ ವೇತನ ಅತ್ಯಂತ ಕಡಿಮೆಯಿದ್ದು,
ಬೆಲೆ ಏರಿಕೆಯ ಈ ಯುಗದಲ್ಲಿ ಇಷ್ಟು ಕಡಿಮೆ ವೇತನಕ್ಕೆ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಸರಕಾರವೇ ನಿಗಧಿ ಮಾಡಿರುವ ಕೌಶಲ್ಯ ರಹಿತ ಕಾರ್ಮಿಕರಿಗೆ ನೀಡುವ ಕನಿಷ್ಠವೇತನವನ್ನು ಕೂಡಲೇ ಜಾರಿ ಮಾಡಬೇಕು, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ದುಡಿಯುತ್ತಿರುವ ನೌಕರರನ್ನು ಕಾರ್ಮಿಕ ಕಾಯ್ದೆಯಡಿ ತರುವ ಮೂಲಕ ಅವರು ಸಹ ಸರಕಾರದ ಇತರೆ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು ಎಂಬುದು ಪ್ರಮುಖ ಒತ್ತಾಯವಾಗಿದೆ.
ಸರಕಾರದ ಈ ಯೋಜನೆಯಡಿ ಸುಮಾರು 1.18 ಲಕ್ಷ ನೌಕರರು ದುಡಿಯುತಿದ್ದು, ಯೋಜನೆ ಖಾಸಗೀಕರಣಗೊಂಡರೆ ಇಷ್ಟು ಜನರು ಬೀದಿ ಪಾಲಾಗಲಿದ್ದಾರೆ.ದುಡಿಯುವ ಜನರಿಗೆ ಕೆಲಸ ನೀಡಬೇಕಾದ ಸರಕಾರವೇ ದುಡಿಯುವ ಮಹಿಳೆಯರ ಕೈಯಿಂದ ಕೆಲಸ ಕಿತ್ತುಕೊಂಡಂತಾಗುತ್ತದೆ. ಆದ್ದರಿಂದ ಇಸ್ಕಾನ್ ಸೇರಿದಂತೆ ಯಾವುದೇ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಗೂ ಮುನ್ನ ಇಂದು ನಿಧನರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಗಿರೀಶ್ ಕರ್ನಾಡ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ಗಿರೀಶ್, ಸಿ.ಎಸ್.ಸತ್ಯನಾರಾಯಣ, ಅಶ್ವಥನಾರಾಯಣ್, ಶಶಿಕಾಂತ್,ವನಜಾಕ್ಷಿ, ಮಂಜುಳ, ನಾಗರತ್ನಮ್ಮ, ಪದ್ಮ, ನಳಿನ, ಗಿರಿಜಾ ಇನ್ನು ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
