ತುರುವೇಕೆರೆ:
ಎಲ್ಲಾ ವರ್ಗದ ಕಾರ್ಮಿಕರು ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜ ಮುಖ್ಯವಾಹಿನಿಗೆ ಬರಬೇಕೆಂದು ತುರುವೇಕೆರೆ ಸಿವಿಲ್ ನ್ಯಾಯಾದೀಶರಾದ ಡಿ.ಎನ್.ರಮೇಶ್ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ಪ.ಪಂ ಕಚೇರಿ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗು ಪಟ್ಟಣ ಪಂಚಾಯಿತಿ ಇವುಗಳ ಸಹಯೋಗದೊಂದಿಗೆ ಕಾರ್ಮಿಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ‘ಕಾರ್ಮಿಕರಿಗೆ ಕಾನೂನು ಅರಿವು’ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಿರ್ಧಿಷ್ಟ ಕಾನೂನುಗಳು ರೂಪಿತವಾಗುವ ಮುಂಚೆ ಕಾರ್ಮಿಕರಿಗೆ ಸೂಕ್ತ ನಿಯಮಗಳಿರಲಿಲ್ಲ. ಆ ವೇಳೆ ಕಾರ್ಮಿಕರು ಅನಾರೋಗ್ಯ ಇನ್ನಿತರ ತೊಂದರೆಗಳಿಗೆ ಒಳಗಾಗುತ್ತಿದ್ದರು. ಭಾರತದಲ್ಲಿ 1923ರ ನಂತರಅಧಿಕೃತವಾಗಿಕಾರ್ಮಿಕರಿಗೆ ವಿಶೇಷ ಸೌಲಭ್ಯಗಳು ಸಂವಿಧಾನದ ಮೂಲಕ ದಕ್ಕುತ್ತಾ ಹೋಯಿತು. ಕಾರ್ಮಿಕರು ಮೊದಲು ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಭಾದ್ಯತೆಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ವಕೀಲ ಉಮೇಶ್ ಮಾತನಾಡಿ ಎಲ್ಲಾ ಶ್ರಮಿಕ ವರ್ಗದ ಕಾರ್ಮಿಕರು ಮೊದಲು ಸಂಘದ ಸದಸ್ಯತ್ವ ಪಡೆಯುವ ಮೂಲಕ ಸರ್ಕಾರದಿಂದ ತನಗೆ ಮತ್ತು ತಮ್ಮ ಕುಟುಂಬಕ್ಕೆ ಸಿಗಬಹುದಾದ ಅನುಕೂಲತೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದರಲ್ಲದೆ ಕಾರ್ಮಿಕರ ಹೋರಾಟದ ಬದುಕನ್ನು ಹಾಡಿನ ಮೂಲಕ ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಲೇಬರ್ಇನ್ಸ್ಪೆಕ್ಟರ್ ಅನುಪಮ, ತಾಲ್ಲೂಕು ವಕೀಲ ಸಂಘದ ಅಧ್ಯಕ್ಷ ಸಿದ್ದರಾಜು, ವಕೀಲ ರವಿಚಂದ್ರ ಮತ್ತು ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಗು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/3tvk01-lebar-day.gif)