ಕಷ್ಟದಲ್ಲಿ ಇರುವವರಿಗೆ ನೆರವಾಗುವುದೇ ನಿಜವಾದ ಧರ್ಮ : ಗುದ್ಲೀಶ್ವರ ಸ್ವಾಮೀಜಿ

ತಿಪಟೂರು:

     ಜಾತಿ, ಮತ ನೋಡದೆ ಕಷ್ಟದಲ್ಲಿ ಇರುವವರಿಗೆ ನೆರವಾಗುವುದೇ ನಿಜವಾದ ಧರ್ಮ ಎಂದು ಹೊಸರಿತ್ತಿ ಗುದ್ಲೀಶ್ವರ ಸ್ವಾಮೀಜಿ ತಿಳಿಸಿದರು.ನಗರದಲ್ಲಿ ನಡೆದ ಲಿಂ. ಗುರು ಗುದ್ಲೀಶ್ವರ ಸ್ವಾಮೀಜಿ ಸಂಸ್ಮರಣೆ ಮತ್ತು ಶಿವದೀಕ್ಷೆ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಲಿಂ. ಗುರು ಗುದ್ಲೀಶ್ವರ ಸ್ವಾಮೀಜಿ ಧಾರ್ಮಿಕ ನೆಲೆಯಲ್ಲಿ ಮನಸ್ಸಿನ ಪರಿವರ್ತನೆ ಮಾಡಲು ಶ್ರಮಿಸಿದ್ದಾರೆ. ಶರಣ ಚಿಂತನೆಗಳನ್ನು ಹೊಸ ಕಾಲಕ್ಕೆ ಅನ್ವಯಿಸಲು ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

    ಹಿರಿಯ ಗುದ್ಲೀಶ್ವರ ಸ್ವಾಮೀಜಿ ಈ ನಗರದಲ್ಲಿ ಶಿವೈಕ್ಯರಾಗಿದ್ದು, ಪವಾಡಗಳ ಮೂಲಕ ಅವರು ಈಗಲೂ ಧಾರ್ಮಿಕ ಶ್ರದ್ಧೆಗೆ ಕಾರಣರಾಗಿದ್ದಾರೆ. ದಾಸೋಹದ ಪಾವಿತ್ರ್ಯವನ್ನು ಎತ್ತಿ ಹಿಡಿದ ಅವರು ಭಕ್ತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಸುಧಾರಣೆಯ ಗುರಿ ಇಟ್ಟುಕೊಂಡಿದ್ದರು.

     ದೈವ ಭಕ್ತಿಗೆ ತಾರತ್ಮಯ ಇಲ್ಲ. ಎಲ್ಲರೂ ಸಮಗ್ರವಾಗಿ ಪ್ರಗತಿ ಹೊಂದುವುದೇ ಧರ್ಮ ಎಂದು ತಿಳಿಸಿದರು.ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ಲಿಂ. ಗುರು ಗುದ್ಲೀಶ್ವರ ಸ್ವಾಮೀಜಿ ಐತಿಹಾಸಿಕ ಸಿದ್ಧಿ ಪುರುಷರು. ಅವರು ಸೇವೆ ಮೂಲಕ ಹಲವು ಮಾದರಿಗಳನ್ನು ಸೃಷ್ಟಿಸಿ ಹೋಗಿದ್ದಾರೆ. ಸಮಾಜವನ್ನು ಸಮಗ್ರವಾಗಿ ಪ್ರಗತಿ ಕಡೆ ಕೊಂಡೊಯ್ಯಲು ಮಠಮಾನ್ಯಗಳ ಪಾತ್ರ ಪ್ರಮುಖವಾಗಿದೆ. ಕತ್ತಲಲ್ಲಿ ಇರುವವರನ್ನು ಬೆಳಕಿಗೆ ತರುವುದೇ ನಿಜ ಧರ್ಮ ಎಂದು ತಿಳಿಸಿದರು.

     ಕುಪ್ಪೂರು ಮಠದ ಡಾ. ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂ. ಗುದ್ಲೀಶ್ವರ ಸ್ವಾಮೀಜಿ ಭಕ್ತರ ಮನಃಪರಿವರ್ತನೆಗೆ ಪೀಠಿಕೆ ಹಾಕಿದ್ದಾರೆ. ಭಕ್ತರು ತಮ್ಮ ಆಶಯಗಳನ್ನು ಈಡೇರಿಸಿಕೊಳ್ಳಲು ಸಂಸ್ಕಾರದ ಸಂದೇಶಗಳ ಪಾಲನೆ ಮುಖ್ಯ ಎಂದು ತಿಳಿಸಿದರು.
ಹೊನ್ನವಳ್ಳಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣ ಅವರ ಸಂದೇಶದಂತೆ ದಯೆ ಇಲ್ಲದ ಧರ್ಮ ಇಲ್ಲ. ಸಕಲ ಜೀವಿಗಳಿಗೆ ಲೇಸನ್ನು ಬಯಸುವುದೇ ನಿಜವಾದ ಧರ್ಮ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ