ಕಾವೇರುತ್ತಿರುವ ಉಪಚುನಾವಣಾ ರಣಕಣ : ಪಕ್ಷಗಳ ಆರೋಪ-ಪ್ರತ್ಯಾರೋಪ

ಬೆಡಸೂರ

       ಚಿಂಚೋಳಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ದಿನ ಸಮೀಪವಾಗುತ್ತಿರುವಂತೆ ರಾಜಕೀಯ ನಾಯಕರ ಆರೋಪ ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಸಚಿವ ವಿ ಸೋಮಣ್ಣ ಹಾಗೂ ಮಾಜಿ ಶಾಸಕ ಉಮೇಶ್ ಜಾಧವ ಕಾಂಗ್ರೆಸ್ ನಾಯಕರುಗಳಿಗೆ ಪ್ರತ್ಯುತ್ತರ ನೀಡಿದರು.

        ಚಿಂಚೋಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆಡಸೂರು ಗ್ರಾಮದಲ್ಲಿ ರೋಡ್ ಶೋ ನಡೆಸಿದ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಮಾತನಾಡಿ, ಉಮೇಶ್ ಜಾಧವ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದನ್ನು ಪ್ರಶ್ನಿಸುವುದಾದರೆ, ಸಿದ್ದರಾಮಯ್ಯ ಅವರೇ ನೀವ್ಯಾಕೆ ಜೆಡಿಎಸ್ ಬಿಟ್ಟು ಬಂದ್ರೀ ಎನ್ನುವುದಕ್ಕೆ ಮೊದಲು ಉತ್ತರಿಸಿ ಎಂದು ಸವಾಲ್ ಹಾಕಿದರು. ಜಾಧವ್ ಅವರು ದೇಶದ ಅಭಿವೃದ್ದಿಗೋಸ್ಕರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನೀವು ನಿಮ್ಮ ಸ್ವಾರ್ಥಕ್ಕೆ ಮುಖ್ಯಮಂತ್ರಿಯಾಗಲು ಜೆಡಿಎಸ್ ಬಿಟ್ಟು ಬಂದ್ರಿ. ನಿಮ್ಮಂತೆ ಜಾಧವ್ ದೃಷ್ಟರಲ್ಲ ಎಂದು ವಾಗ್ದಾಳಿ ನಡೆಸಿದರು. ವೀರಶೈವ ಲಿಂಗಾಯತರ ಮಧ್ಯೆ ಜಗಳ ಹಚ್ಚಿದ್ದು ಸಿದ್ದರಾಮಯ್ಯ, ನೆಂಟರಂತೆ ಬಂದವರನ್ನು ನಂಬಬೇಡಿ. ಜಾಧವ್ ನಿಮ್ಮ ಮನೆಯ ಊರಿನವರು ಇವರಿಗೆ ಬೆಂಬಲಿಸಿ ಎಂದು ಮನವಿ ಮಾಡಿದರು.

       ಜೆಡಿಎಸ್ ಗೆ ಬೆಂಬಲ ನೀಡಿರುವುದು ಕಾಂಗ್ರೆಸ್ ಶಾಸಕರಿಗೆ ಇಷ್ಟವಿಲ್ಲ. ಜೆಡಿಎಸ್ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ 90 ಕ್ಕೂ ಹೆಚ್ಚು ಶಾಸಕರು ಬೇಜಾರಾಗಿದ್ದಾರೆ ಎನ್ನುವ ಭಾವನೆಗೆ ನನ್ನ ಸಹಮತವಿದೆ. ಇದು ಕಳೆದ 10 ತಿಂಗಳಿನಿಂದ ಕುದಿಯುತ್ತಿರುವ ಬೆಂಕಿಯಾಗಿದೆ. ಈ ಬೆಂಕಿ ಲಾವಾರಸ ಆಗಿ ಸ್ಪೋಟಗೊಳ್ಳಲಿದೆ. ಅದಕ್ಕಾಗಿ ಮೇ 23 ನ್ನು ಡೆಡ್ ಲೈನ್ ಆಗಿ ಫಿಕ್ಸ್ ಮಾಡಿದ್ದಾರೆ. ಅದೆ ಡೆಡ್ ಲೈನನ್ನು ಯಡಿಯೂರಪ್ಪ ಹೇಳಿದ್ದಾರೆ. ನಾನು ಸನ್ಯಾಸಿಗಳಲ್ಲ, ರಾಜಕೀಯ ಮಾಡೋಕೇ ಬಂದಿರೋದು. ಈ ಬಂಡಾಯ ತಡೆಗಟ್ಟಲು ಸಿಎಂ ಗೆ ಸಾಧ್ಯವಿಲ್ಲ. ಕಂಡ ಕಂಡ ದೇವರ ಮೊರೆ ಹೊಗುತ್ತಿದ್ದಾರೆ. ಏಕೆಂದರೆ ಜನರಿಂದ ಆಯ್ಕೆಯಾದ ಸಿಎಂ ಅವರು ದೇವರಿಂದ ಆಯ್ಕೆಯಾಗಿದ್ದಾರೆ ಎಂದರು.

      ಮಾಜಿ ಶಾಸಕ ಉಮೇಶ್ ಜಾಧವ್ ಮಾತನಾಡಿ, ಮೇ 23 ರ ನಂತರ ಯಾರು ಬೀದಿಪಾಲಾಗುತ್ತಾರೆ ಎನ್ನುವುದು ಗೊತ್ತಾಗಲಿದೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದರು. ಪಕ್ಷ ಬಿಟ್ಟಿದ್ದು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ. ಮಗನ ಪರೀಕ್ಷೆ ಬಿಡಿಸಿ ಚುನಾವಣೆಗೆ ನಿಲ್ಲಿಸಿದ್ದೇನೆ. ಜನರಿಗಾಗಿ ತ್ಯಾಗ ಮಾಡಲು ಮಗ ರಾಜಕೀಯಕ್ಕೆ ಬಂದಿದ್ದಾನೆ. ಅವಿನಾಶ್ ಗೆ ಟಿಕೆಟ್ ಕೊಟ್ಟರೆ ಗೆಲ್ಲಿಸುತ್ತೇವೆ ಎಂದು ಜನ ಹೇಳಿದ್ದಾರೆ. ಅವರ ಜೊತೆಯಲ್ಲಿ ಇದ್ದರೆ ಬೆಸ್ಟ್ ಎಂ ಎಲ್ ಎ, ಪಕ್ಷ ಬಿಟ್ಟರೆ ಗೋಮುಖ ವ್ಯಾಘ್ರ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಚುನಾವಣೆ ಇರೋ ಎಂದು ದಿನ ಹೇಳ್ತಾರೆ ಅಷ್ಟೇ ಆಮೇಲೆ ಯಾರು ಏನು ಅಂತಾ ಗೊತ್ತಾಗುತ್ತದೆ ಎಂದರು.

       ಮಾಜಿ ಸಚಿವ ವಿ ಸೋಮಣ್ಣ ಮಾತನಾಡಿ, ಈ ಸರಕಾರ ಬಿದ್ದು ಹೋಗಬೇಕು, ಭ್ರಷ್ಟಚಾರದ ಕೂಪಮಂಡೂಕದ ಸರಕಾರ. ಬೀದಿ ಬೀದಿಯಲ್ಲಿ ಕಿತ್ತಾಡುತ್ತಿದ್ದಾರೆ, ಈ ಸರಕಾರವನ್ನು ಕಿತ್ತೊಗೆಯುವ ಸಂಧರ್ಭ ಬಂದಿದೆ. ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯ ರಾಜಕಾರದ ಬದಲಾವಣೆಗೆ ಸಹಕರಿಸಿ ಎಂದು ಮನವಿ ಮಾಡಿದರು.

      ಬೆಡಸೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಗವಂತ ಖೂಬಾ, ಬಸವರಾಜ ಮತಿ ಮೋಡ, ಸೂರ್ಯಕಾಂತ ನಾಗಮರಪಳ್ಳಿ, ರಾಜು ಗೌಡ, ವಿನೋದ್ ಸೇರಿದಂತೆ ಹಲವರು ಭಾಗವಹಿಸಿದ್ದರು.ವಿ ಸೋಮಣ್ಣ ನೇತೃತ್ವದ ತಂಡ ಕಲ್ಲೂರು ರೋಡ್, ಮಿರಿಯಾಣ, ಭೈರಂಪಳ್ಳಿ, ಕೃಷ್ಣಾಪುರ, ಸೋಮಲಿಂಗದಹಳ್ಳಿ, ಚಿಕ್ಕಲಿಂಗದಹಳ್ಳಿ ಸೇರಿದಂತೆ ಹಲವಾರ ಗ್ರಾಮಗಳಲ್ಲಿ ರೋಡ್ ಶೋ ನಡೆಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link