ತಿಪಟೂರು:
ಅಭಿವೃದ್ಧಿಯ ಹರಿಕಾರರಾಗಿ ಮತ್ತು ಸಮಾಜ ಸುಧಾರಕರಾಗಿ ಕೆಂಪೇಗೌಡ ಅವರ ಹೆಸರು ಅಜರಾಮರವಾಗಿದೆ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ತಿಳಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕೆಂಪೇಗೌಡ ಅವರು ಕೇವಲ ಭೌತಿಕ ಅಭಿವೃದ್ಧಿಗೆ ಒತ್ತು ಕೊಡಲಿಲ್ಲ. ಸಾಂಸ್ಕತಿಕವಾಗಿ ಕೂಡ ಸಮಾಜ ಸುಂದರವಾಗಿರಬೇಕೆಂಬ ದೂರದೃಷ್ಟಿಯಿಂದ ಅಪಾರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅಭಿವೃದ್ಧಿ ಮಾದರಿಗೆ ಅವರು ಇಂದಿಗೂ ಮಾರ್ಗಸೂಚಕರಂತೆ ಕಾಣುತ್ತಾರೆ. ಕೆರೆ, ಕಟ್ಟೆಗಳ ಉಳಿವಿನ ಜತೆಗೆ ಕೃಷಿಗೂ ಕೂಡ ಪೂರಕವಾದ ಹಲವಾರು ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಅವರ ಆಡಳಿತ ಇಂದಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಬಸವರಾಜು ಮಾನತಾಡಿ, ಕೆಂಪೇಗೌಡ ಅವರು ಸಾಹಿತ್ಯ, ಸಂಗೀತ, ಕಲೆ, ಸಾಮಾಜಿಕ ಕ್ಷೇತ್ರಕ್ಕೆ ಪ್ರೇರಣೆ ತುಂಬಿದ್ದರು. ಶಿಕ್ಷಣಕ್ಕೆ ಕೂಡ ಅವರು ಉತ್ತಮ ವಾತಾವರಣ ಸೃಷ್ಟಿಸಿದ್ದರು. ಅಭಿವೃದ್ಧಿ ಎಂದರೆ ಕೇವಲ ಕಟ್ಟಡ, ರಸ್ತೆಗಳಲ್ಲ ಎಂಬುದನ್ನು ಅರಿತು ವಿಕಾಸದ ಮಾದರಿಯನ್ನು ಅವರು ಅನುಸರಿಸಿದ್ದರು ಎಂದು ತಿಳಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಬಾಲಕೃಷ್ಣ, ಖ್ಯಾತ ವೈದ್ಯ ಡಾ. ವಿವೇಚನ್ ಮತ್ತು ಸಂಘದ ಪದಾಧಿಕಾರಿಗಳು ಇದ್ದರು.