ಬಳ್ಳಾರಿ
ಕಾಸಿಗಾಗಿ ಸುದ್ದಿಗಳ ಮೇಲೆ ತೀವ್ರ ನೀಗಾ ವಹಿಸಿ; ಆ ರೀತಿ ಏನಾದರೂ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಿ ಎಂದು ಚುನಾವಣಾ ಆಯೋಗದಿಂದ ನಿಯೋಜಿತರಾಗಿ ಆಗಮಿಸಿದ ಸಾಮಾನ್ಯ ವೀಕ್ಷಕ ಡಾ.ಎನ್.ಸುಬ್ಬಯ್ಯನ್ ಅವರು ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಹಾಗೂ ಮಾಧ್ಯಮ ಪ್ರಮಾಣೀಕರಣ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸೂಚನೆ ನೀಡಿದರು.
ಪೇಯ್ಡ್ ನ್ಯೂಸ್ ಎನ್ನುವುದು ದೊಡ್ಡ ಮಹಾರೋಗವಿದ್ದಂತೆ; ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ನಡೆಸುವ ದೃಷ್ಟಿಯಿಂದ ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ ಅವರು, ವಿದ್ಯುನ್ಮಾನ ವಾಹಿನಿಗಳ ಜತೆಗೆ ಕೇಬಲ್ಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳು ಮತ್ತು ಸುದ್ದಿಗಳ ಮೇಲೆಯೂ ಕಣ್ಣಿಡಬೇಕು ಎಂದರು.
ಪತ್ರಿಕಾ ತುಣುಕುಗಳ ಬುಕ್ಲೇಟ್, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಳ್ಳಾರಿ ಜಿಲ್ಲೆಯ ಸುದ್ದಿಗಳು ಬಂದಾಗ ರಿಕಾರ್ಡಿಂಗ್ ಮಾಡುವ ವ್ಯವಸ್ಥೆ, ಸೋಶಿಯಲ್ ಮಿಡಿಯಾ ಕಾರ್ಯವೈಖರಿ, ಮಾಧ್ಯಮಗಳಿಗೆ ಜಾಹೀರಾತು ಅನುಮತಿ ನೀಡುವ ವ್ಯವಸ್ಥೆ, ವಿವಿಧ ಚರ್ಚಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದರ ಬಗೆಯನ್ನು ಈ ಸಂದರ್ಭದಲ್ಲಿ ತಿಳಿದುಕೊಂಡರು.ಪತ್ರಿಕೆಗಳು, ಟಿವಿ, ರೇಡಿಯೋ ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಚುನಾವಣಾ ಜಾಹೀರಾತುಗಳ ಮೇಲೆ ನಿಗಾವಹಿಸುವಂತೆ ವೀಕ್ಷಕರು ಈ ಸಂದರ್ಭದಲ್ಲಿ ಸೂಚಿಸಿದರು.
ನಂತರ ಅವರು ಸಣ್ಣ ಉಳಿತಾಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ದೂರು ನಿರ್ವಹಣಾ ಕೋಶ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಸಾಮಾನ್ಯ ವೀಕ್ಷಕರ ಮೇಲ್ವಿಚಾರಣಾಧಿಕಾರಿ ಮಂಜುನಾಥ ಗೌಡ ಹಾಗೂ ಎಂಸಿಎಂಸಿ ಸಮಿತಿ ಸದಸ್ಯರಾದ ರವಿ ರಾಠೋಡ, ಹೊನ್ನುರಪ್ಪ, ಶಿವಕುಮಾರ ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








