ಕ್ರಾಂತಿಯ ಬೀಜಾಂಕುರಕ್ಕಾಗಿ ಮತ್ತೆ ಕಲ್ಯಾಣ

ದಾವಣಗೆರೆ:

    ನಿಂತ ನೀರಾಗಿರುವ ಸಮಾಜದಲ್ಲಿ ಕ್ರಾಂತಿಯ ಬೀಜ ಬಿತ್ತುವುದೇ, ‘ಮತ್ತೆ ಕಲ್ಯಾಣ’ ಆಂದೋಲನದ ಉದ್ದೇಶವಾಗಿದೆ ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

     ಆಗಸ್ಟ್ 1ರಿಂದ 30ರ ವರೆಗೆ ಸಹಮತ ವೇದಿಕೆಯಿಂದ ರಾಜ್ಯಾದ್ಯಂತ ನಡೆಯಲಿರುವ ‘ಮತ್ತೆ ಕಲ್ಯಾಣ’ ಆಂದೋಲನದ ರೂಪುರೇಷೆಯನ್ನು ರೂಪಿಸುವ ಉದ್ದೇಶದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

     ಪ್ರಸ್ತುತ ಸಮಾಜ ನಿಂತ ನೀರಿನಂತೆ ಸ್ಥಾವರವಾಗಿದ್ದು, ಬದಲಾವಣೆ ಗಾಳಿ ಬೀಸಬೇಕೆಂಬ ಹಿನ್ನೆಯಲ್ಲಿ ಕ್ರಾಂತಿಯ ಬೀಜಾಂಕುರ ಮಾಡಲು ‘ಮತ್ತೆ ಕಲ್ಯಾಣ’ ಆಂದೋಲನ ಪ್ರೇರಣೆ ನೀಡಲಿದೆ ಎಂದರು.

     12ನೇ ಶತಮಾನದಲ್ಲಿ ಧರ್ಮ ಕರ್ಮವಾಗಿದ್ದರ ಪರಿಣಾಮವಾಗಿ ಅಂದಿನ ಸಮಾಜ ರೋಗಪೀಡಿತವಾಗಿತ್ತು. ಇದಕ್ಕೆ ಬಸವ ಕಲ್ಯಾಣದಲ್ಲಿ ಬಸವಾದಿ ಶರಣರು ವಚನ ಎಂಬ ಮದ್ದು ಅರಿದರು. ಈ ಮದ್ದನ್ನು ಇಂದು ಜಡಗೊಂಡಿರುವ ಸಮಾಜದ ಇಂದಿನ ಪೀಳಿಗೆಗೆ ತಲುಪಿಸುವುದೇ ಮತ್ತೆ ಕಲ್ಯಾಣ ಎಂದು ಹೇಳಿದರು.

       ಆಗಸ್ಟ್ 1ರಿಂದ 30ರ ವರೆಗೆ `ಮತ್ತೆ ಕಲ್ಯಾಣ’ ಆಂದೋಲನವನ್ನು ರಾಜ್ಯಾದ್ಯಂತ ಆಯೋಜಿಸಿದ್ದು, ಆ.1ರಂದು ತರೀಕೆರೆಯ ಅಕ್ಕ ನಾಗಮ್ಮ ಐಕ್ಯಸ್ಥಳದಿಂದ ಆರಂಭವಾಗಿ, 30ರಂದು ಬಸವಕಲ್ಯಾಣದಲ್ಲಿ ಸಂಪನ್ನಗೊಳ್ಳಲಿದೆ. ಈ ಎರಡು ಸ್ಥಳ ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಯಕ್ರಮ ನಡೆಯಲಿದೆ ಎಂದರು.

     ಈ ಆಂದೋಲನದ ಭಾಗವಾಗಿ ತಿಂಗಳ ಪರ್ಯಾಂತ ಪ್ರತಿದಿನ ಬೆಳಗ್ಗೆ 11 ಗಂಟೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಶರಣರ ವಿಚಾರಧಾರೆ ಕುರಿತ ಸಂವಾದ ನಡೆಯಲಿದೆ.. ಸಂಜೆ ಸೌಹಾರ್ದ ಪಾದಯಾತ್ರೆ, ಸಂಜೆ 6ಕ್ಕೆ ಸಾರ್ವಜನಿಕ ಸಮಾವೇಶ, ರಾತ್ರಿ 8.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ. ಅಂದಿನ ಸಭೆಯ ಅಧ್ಯಕ್ಷರ ಆಯ್ಕೆ ಜವಾಬ್ದಾರಿಯನ್ನು ಸ್ಥಳೀಯ ಸಮಿತಿಗೆ ವಹಿಸಲಾಗಿದೆ. ಬಹುತೇಕ 30 ಜಿಲ್ಲೆಗಳಲ್ಲೂ ಕಾರ್ಯಕ್ರಮದ ಕುರಿತು ಸಿದ್ಧತೆಗಳು ನಡೆಯುತ್ತಿವೆ. ಇದರ ಯಶಸ್ಸಿಗೆ ಒಂದು ರಚನೆ ಮಾಡಿಕೊಂಡು ಇದನ್ನು ಕೇಂದ್ರ ಸಮಿತಿಗೆ ತಿಳಿಸಬೇಕು. ಒಬ್ಬರು ಲಿಂಗಾಯತೇತರ ಪ್ರಗತಿಪರ ಚಿಂತಕರು, ಮತ್ತೊಬ್ಬರು ಯಾರಾನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

     ಕಲ್ಯಾಣ ಎಂದರೆ ಮಂಗಲ, ಅಭ್ಯುದಯ, ಪ್ರಗತಿ ಎಂಬರ್ಥವಾಗಿದೆ. ಇದು ವ್ಯಕ್ತಿ, ದೇಶ, ಸಮಾಜದ ಕಲ್ಯಾಣವಾಗಿರಲಿದೆ. ಬಸವತತ್ವ ಮುಖ್ಯ ವಿಭಿನ್ನ ವಿಚಾರಧಾರೆ, ದೃಷ್ಟಿಕೋನ, ಚಿಂತನೆ ಹೊಂದಿದವರನ್ನು ಒಂದೇ ಕಡೆ ತರುವುದಾಗಿದೆ ಎಂದ ಶ್ರೀಗಳು, ಇದೊಂದು ಮಠದ ಕಾರ್ಯಕ್ರಮವಾಗದೇ ಎಲ್ಲಾ ವ್ಯಕ್ತಿಗಳದ್ದಾಗಿದೆ. ಇದು ಜಾತಿ, ಲಿಂಗ, ಪಂಗಡ, ಪಕ್ಷ, ಮತ ಭೇದ ರಹಿತವಾಗಿದೆ ಎಂದು ಸ್ಪಷ್ಟಪಡಿಸಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಬಹು ದೊಡ್ಡ ಕ್ರಾಂತಿ ನಡೆಯಿತು.

     ಶರಣರು ಕಲ್ಯಾಣದಿಂದ ದೂರ ಹೋದರು. ಆಗ ಪಟ್ಟಭದ್ರರು, ವೈದಿಕ ಪರಂಪರೆಯವರು ಶರಣರನ್ನು ಕೊಲೆ ಮಾಡುವುದಕ್ಕಿಂತ, ಸಮಾನತೆಯ ಸಂದೇಶ ಸಾರುವ ವಚನ ಸಾಹಿತ್ಯ ಸುಟ್ಟು ಹಾಕುವ ಪ್ರಯತ್ನ ನಡೆಸಿದರು. ಆಗ ಈ ಸಾಹಿತ್ಯ ಉಳಿಸಿಕೊಳ್ಳಲು ಅಕ್ಕ ನಾಗಲಾಂಬಿಕೆ, ನೂಲಿಯ ಚಂದಯ್ಯ, ಮಡಿವಾಳ ಮಾಚಯ್ಯ ಅನೇಕರು ವಿವಿಧೆಡೆ ಹರಿದು ಹಂಚಿಹೋದರು. ತರೀಕೆರೆಯ ಕಾಡಿನತ್ತ ಬಂದ ಒಂದು ಗುಂಪಿನಲ್ಲಿದ್ದ ಅಕ್ಕ ನಾಗಲಾಂಬಿಕೆ ಇಲ್ಲಿ ಐಕ್ಯಳಾಗುತ್ತಾಳೆ. ಆದ್ದರಿಂದ ಎಣ್ಣೆಹೊಳೆಯಿಂದ ಮತ್ತೆ ಕಲ್ಯಾಣ ಆಂದೋಲನ ಆರಂಭಿಸಲಾಗುತ್ತಿದೆ ಎಂದರು.

     ಸಭೆಯಲ್ಲಿ ಮಾತನಾಡಿದ ಶಿಕಾರಿಪುರದ ಮಾತೆ ಶಾರದಾಂಬಿಕೆ, ಕಲ್ಯಾಣ ಎಂದರೆ ಮಂಗಲ, ಶುಭ ಕಾರ್ಯಕ್ರಮ ನಡೆಯುವ ಸ್ಥಳವಾಗಿದೆ. ಇಂತಹ ಸಮಾರಂಭ ನಡೆಯುವ ದಾವಣಗೆರೆ ಕಲ್ಯಾಣ ಪಟ್ಟಣ ಇದ್ದಂತೆ. ಇಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಿದರೂ ಯಶಸ್ಸು ಆಗುತ್ತದೆ ಎಂದರು.

     ಲಿಂಗಾಯತ ಸಮಾಜದ ಮುಖಂಡ ಕೆ.ಆರ್.ಜಯದೇವಪ್ಪ ಮಾತನಾಡಿ, ದಾವಣಗೆರೆ ಕರ್ನಾಟಕದ ಕೇಂದ್ರ ಬಿಂದುವಾಗಿದೆ. ಈ ನೆಲ ಅನೇಕ ಸಭೆ, ಸಮಾರಂಭಗಳನ್ನು ಸಾಕ್ಷಿಕರಿಸಿದೆ. ಇಲ್ಲಿಂದ ಆರಂಭವಾದ ಯಾವ ಆಂದೋಲನವೂ ವಿಫಲವಾಗಿಲ್ಲ. ಹೀಗಾಗಿ ಮತ್ತೆ ಕಲ್ಯಾಣ ಆಂದೋಲನವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಕರೆ ನೀಡಿದರು.

     ಕಾರ್ಮಿಕ ಮುಖಂಡ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಮತ್ತೆ ಕಲ್ಯಾಣ ಆಂದೋಲನವು ಮನಸ್ಸು, ಕಣ್ತೆರೆಸುವ ಕಾರ್ಯಕ್ರಮವಾಗಿದೆ. ಜನರ ಜೀವನ, ಚಿಂತನೆ ಬದಲಾಯಿಸಲಿದೆ. ಧರ್ಮ, ಜಾತಿ ಸಂಘರ್ಷ ನಿವಾರಿಸಿ ಮಾನವ ಕುಲ ಒಂದೇ ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದರು.

       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಸದಸ್ಯ ಕೆ.ಎಸ್.ಬಸವಂತಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ತಾ.ಪಂ. ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಆನಂದಪ್ಪ, ಶಿವಗಂಗಾ ಬಸವರಾಜ್, ಧನಂಜಯ ಕಡ್ಲೇಬಾಳು, ದೇವಿಗೆರೆ ವೀರಭದ್ರಪ್ಪ, ಎಂ.ಬಿ.ಸಂಗಮೇಶ್ ಗೌಡ್ರು, ಎಂ.ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಇಪ್ಟಾ ಕಲಾವಿದ ಐರಣಿ ಚಂದ್ರು ಮತ್ತಿತರರು ಜಾಗೃತ ಗೀತೆಗಳನ್ನು ಹಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link