ನವದೆಹಲಿ:

ಭಾರತೀಯ ವಾಯು ಸೇನೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆಯ ವೇಳೆ ನಮ್ಮ ಮಿಗ್-21 ವಿಮಾನ ಪತನವಾಗಿದೆ. ಈ ವೇಳೆ ಆ ವಿಮಾನದ ಓರ್ವ ಪೈಲಟ್ ನಾಪತ್ತೆಯಾಗಿರುವುದು ಖಚಿತವಾಗಿದೆ.
ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ವಾಯುಸೇನೆ ಮುಖ್ಯಸ್ಥ ಏರ್ ವೈಸ್ ಮಾರ್ಷಲ್ ಆರ್ಜಿಕೆ ಕಪೂರ್ ಅವರು, ಪಾಕ್ ಎಫ್- 16 ವಿಮಾನದ ಮೂಲಕ ಪ್ರತ್ಯುತ್ತರ ನೀಡುವ ಯತ್ನ ಮಾಡಿತ್ತು. ಆದರೆ ಭಾರತೀಯ ಸೇನೆ ಪಾಕಿಸ್ತಾನದ ದಾಳಿಯನ್ನ ಸಮರ್ಥವಾಗಿ ಎದುರಿಸಿದೆ. ಪಾಕಿಸ್ತಾನದ ನೆಲದಲ್ಲಿ ಇಬ್ಬರು ಪೈಲಟ್ಗಳು ಜಿಗಿದಿರುವುದನ್ನು ನಮ್ಮ ಭೂಸೇನೆ ಗಮನಿಸಿದ್ದು, ನಮ್ಮ ಪೈಲಟ್ ಒಬ್ಬರು ನಾಪತ್ತೆಯಾಗಿರುವುದು ಖಚಿತವಾಗಿದೆ ಎಂದಿದ್ದಾರೆ.

ನಾಪತ್ತೆಯಾಗಿರುವ ಪೈಲಟ್ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ವೀಡಿಯೋ ಸಮೇತ ಹೇಳಿಕೊಂಡಿದೆ. ಈ ಬಗ್ಗೆ ನಮಗೆ ಅಧಿಕೃತವಾಗಿ ಸಂದೇಶ ಕಳಿಸಿಲ್ಲ. ಈ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ ಎಂದು ರವೀಶ್ ಕುಮಾರ್ ಹೇಳಿದರು.
ಐಎಎಫ್ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕ ಬಳಿಕ ಭಾರತ ಯಾವ ರೀತಿ ರಾಜತಾಂತ್ರಿಕ ನಡೆ ಇಡಲಿದೆ ಕಾದುನೋಡಬೇಕಿದೆ. ವಿಶ್ವಸಂಸ್ಥೆಗೆ ಈ ಬಗ್ಗೆ ತಿಳಿಸಿ, ಪೈಲಟ್ ಬಿಡುಗಡೆಗೆ ಮನವಿ ಸಲ್ಲಿಸಬಹುದು ಎಂದು ರಕ್ಷಣಾ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
