ಡಿ.20ಕ್ಕೆ ಬೆಂಗಳೂರಿಗೆ ಕಾಂಗ್ರೆಸ್ ಕ್ರಾಂತಿಯಾತ್ರೆ

ಚಿತ್ರದುರ್ಗ:

         ದೇಶದ ಪ್ರಧಾನಿ ನರೇಂದ್ರಮೋದಿಯ ದಬ್ಬಾಳಿಕೆ, ದೌರ್ಜನ್ಯ, ಅನ್ಯಾಯ, ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ನಂಬಿಸಿ ವಂಚನೆ ಮಾಡಿರುವುದನ್ನು ದೇಶದ ಜನತೆಗೆ ತಿಳಿಸುವುದಕ್ಕಾಗಿ ಕನ್ಯಾಕುಮಾರಿಯಿಂದ ಹಿಮಾಲಯಕ್ಕೆ ಹೊರಟಿರುವ ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕ್ರಾಂತಿ ಯಾತ್ರೆ ಡಿ.20 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವ ಕಾರ್ಯಕರ್ತರು ಪಾಲ್ಗೊಳ್ಳಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಧುಪಾಲೇಗೌಡ ತಿಳಿಸಿದರು.

        ಯುವ ಕ್ರಾಂತಿ ಯಾತ್ರೆಗೆ ಕರ್ನಾಟಕದ ಉಸ್ತುವಾರಿಯಾಗಿ ನೇಮಕಗೊಂಡಿರುವ ಮಧುಪಾಲೇಗೌಡ ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

        ನರೇಂದ್ರಮೋದಿ ದೇಶದ ಪ್ರಧಾನಿಯಾದಾಗಿನಿಂದಲೂ ಬರಿ ಭಾಷಣದಲ್ಲಿಯೇ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ವಿನಃ ಯಾವುದೂ ಜನರ ಕೈಸೇರಿಲ್ಲ. ಸೂಟುಬೂಟು ಧರಿಸಿ ವಿದೇಶ ಸುತ್ತುವುದಕ್ಕಾಗಿಯೇ ಪ್ರಧಾನಿಯಾಗಿದ್ದಾರೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿ.ಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರ ತರುವಂತೆ ಜನತೆಯನ್ನು ಜಾಗೃತಗೊಳಿಸುವುದಕ್ಕಾಗಿ ಆರಂಭಗೊಂಡಿರುವ ಯುವ ಕ್ರಾಂತಿ ಯಾತ್ರೆಯಲ್ಲಿ ಜಿಲ್ಲೆಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಆರು ತಾಲೂಕು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರುಗಳು ಭಾಗವಹಿಸಿ ಯುವ ಶಕ್ತಿಯನ್ನು ತೋರಿಸುವಂತೆ ಮನವಿ ಮಾಡಿದರು.

         ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಹಸನ್‍ತಾಹೀರ್ ಮಾತನಾಡಿ ಭಾರತ್ ಬಚಾನಹೈ ಮೋದಿಕೋ ಬಗಾನಹೈ ಕಾಂಗ್ರೆಸ್ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿತು. ಈಗ ಬಿಜೆಪಿ.ಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಾದಂತ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ಸಂವಿಧಾನವನ್ನು ಸುಟ್ಟು ಅಂಬೇಡ್ಕರ್ ವಿರುದ್ದ ಘೋಷಣೆ ಕೂಗುವವರ ವಿರುದ್ದ ಈಗಲಾದರೂ ಎಚ್ಚೆತ್ತುಕೊಂಡು ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ.ಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಯೂತ್ ಕಾಂಗ್ರೆಸ್ ಮೇಲಿದೆ ಎಂದು ಹೇಳಿದರು.

        ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮಹಮದ್ ರಫಿ, ಉಪಾಧ್ಯಕ್ಷ ರೆಹಮಾನ್, ಕಾರೇಹಳ್ಳಿ ಉಲ್ಲಾಸ್, ವಸೀಂ, ಆಜಾಂ ಸೇರಿದಂತೆ ವಿವಿಧ ತಾಲೂಕುಗಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link