ಬೆಂಗಳೂರು
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಉಸಿರುಗಟ್ಟಿಸಿ, ಕೊಲೆ ಮಾಡಿ, ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ ಕೆಎಸ್ಆರ್ಟಿಸಿಯ ಚಾಲಕ ಕಂ ನಿರ್ವಾಹಕನೊಬ್ಬನನ್ನು ಸಂಜಯ ನಗರದ ಪೊಲೀಸರು ಬಂಧಿಸಿದ್ದಾರೆ.
ಬಾಗೇಪಲ್ಲಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾರಾಯಣ (38) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ನಗರದಲ್ಲಿ ಕೆಲಸ ಮಾಡುವ ವೇಳೆ ಬಸ್ನಲ್ಲಿ ಬರುತ್ತಿದ್ದ ಗೆದ್ದಲಹಳ್ಳಿಯ ಗೌರಮ್ಮ (40) ಎಂಬ ಮಹಿಳೆಯನ್ನು ಪರಿಚಯಮಾಡಿಕೊಂಡಿದ್ದ.ಪರಿಚಯ ಸ್ನೇಹಕ್ಕೆ ತಿರುಗಿತ್ತು, ಗೌರಮ್ಮ, ಪತಿಯನ್ನು ಬಿಟ್ಟು ಮನೆಕೆಲಸ ಮಾಡಿಕೊಂಡು ಗೆದ್ದಲಹಳ್ಳಿಯಲ್ಲಿ ವಾಸಿಸುತ್ತಿದ್ದು, ಅವರ ಮಗ ಬೇರೆ ಕಡೆ ಓದುತ್ತಿದ್ದ. ಆಗಾಗ ಲಕ್ಷ್ಮಿನಾರಾಯಣ, ಗೌರಮ್ಮನ ಮನೆಗೆ ಬಂದುಹೋಗುತ್ತಿದ್ದ. ಕಳೆದ ಅಕ್ಟೋಬರ್ 1 ರಂದು ಬಂದಿದ್ದು, ಇಬ್ಬರ ನಡುವೆ ರಾತ್ರಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಲಕ್ಷ್ಮಿನಾರಾಯಣ, ಗೌರಮ್ಮಳ ಕತ್ತುಹಿಸುಕಿ ಕೊಲೆ ಮಾಡಿ, ಮುಂಬಾಗಿಲಿಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದ.
ಮನೆಯಿಂದ 3 – 4 ದಿನಗಳ ನಂತರ, ಕೊಳೆತ ವಾಸನೆ ಬರುತ್ತಿರುವುದರಿಂದ ಅಕ್ಕ-ಪಕ್ಕದ ಮನೆಯವರು ಗಮನಿಸಿ, ಸಂಜಯ ನಗರದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು, ಬಾಗಿಲು ಒಡೆದು ಒಳಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಗೌರಮ್ಮಳ ಮೃತದೇಹ ಪತ್ತೆಯಾಗಿತ್ತು.ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯಲ್ಲಿ ಕತ್ತುಹಿಸುಕಿ ಕೊಲೆಮಾಡಿರುವುದು ಕಂಡುಬಂದಿದೆ.
ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಆರೋಪಿ ಲಕ್ಷ್ಮಿನಾರಾಯಣನನ್ನು ಬಂಧಿಸಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.ಆರೋಪಿ ಲಕ್ಷ್ಮಿನಾರಾಯಣನಿಗೆ ಮೊದಲೇ ವಿವಾಹವಾಗಿದ್ದು, ಬಸ್ ಚಲಾಯಿಸುವ ವೇಳೆ ಪರಿಚಯವಾಗಿದ್ದ ಗೌರಮ್ಮಳ ಜೊತೆ ಅನೈತಿಕ ಸಂಬಂಧ ಹೊಂದಿ ಆಕೆಯ ಮನೆಗೆ ಬಂದು-ಹೋಗುತ್ತಿರುವುದು ಪತ್ತೆಯಾಗಿದೆ. ಗೌರಮ್ಮಳ ಜೊತೆ ಜಗಳದಿಂದ ಆಕ್ರೋಶಗೊಂಡು, ಕೊಲೆ ಮಾಡಿರುವುದನ್ನು ಲಕ್ಷ್ಮಿನಾರಾಯಣ ಒಪ್ಪಿಕೊಂಡಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








