ಮನುಷ್ಯತ್ವದ ಗಡಿ ಗುರಿತಿಸಿದ ಕುವೆಂಪು

ದಾವಣಗೆರೆ 

         ರಾಷ್ಟ್ರಕವಿ ಕುವೆಂಪು ಅವರು ಧರ್ಮದ ಗಡಿ ದಾಟಿ, ಮನುಷ್ಯತ್ವದ ಗಡಿ ಗುರಿತಿಸಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನಿವಿಲೇಹಾಳ್ ತಿಳಿಸಿದರು.

          ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

          ಭೂಮಿಯ ಮೇಲಿರುವ ಯಾರಿಗೂ ಧಾರ್ಮಿಕ ಗುರುಗಳಾಗುವ ಶಕ್ತಿ ಇಲ್ಲ ಎಂಬುದನ್ನು ಅರಿತಿದ್ದ ಕುವೆಂಪುರವರಿಗೆ ಧಾರ್ಮಿಕ ಗುರುಗಳ ಬಗ್ಗೆ ವಿರೋಧವಿತ್ತು. “ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ, ಬಡತನವ ಬುಡಮಟ್ಟ ಕೀಳಬನ್ನಿ”, “ನೂರು ದೇವರನೆಲ್ಲಾ ನೂಕಾಚೆ ದೂರ, ಭಾರತಾಂಬೆಯೇ ತಾಯಿನಮಗಿನ್ನೂ ಪೂಜಿಸುವ ಬಾರ” ಎನ್ನುವ ಮೂಲಕ ವೈಚಾರಿಕ ಜಾಗೃತಿ ಮೂಡಿಸಿದ ಅವರಲ್ಲಿ ಅಕ್ಷರ ಸ್ವರೂಪದ ದೇಶಭಕ್ತಿ ಅಡಗಿತ್ತು. ಆದರೆ, ಇಂದು ದೇಶ ಭಕ್ತಿ ಎನ್ನುವುದೇ ಬಂಡವಾಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

           ಇಂದಿನ ವಿಶ್ವ ವಿದ್ಯಾನಿಲಯಗಳ ಉಪ ಕುಲಪತಿಗಳು ಸಿಕ್ಕ, ಸಿಕ್ಕವರ ಕಾಲಿಗೆ ಬಿಳ್ತಾರೆ. ಆದರೆ, ಮಹಾರಾಜ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಅದೇ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕೊನೆಗೆ ಮೈಸೂರು ವಿವಿಯ ಉಪ ಕುಲಪತಿಗಳಾಗಿದ್ದ ಕುವೆಂಪು ಅವರು ವಿವಿಗೆ ಮೂಲಭೂತ ಸೌಕರ್ಯ ಪಡೆಯಲು ಸರ್ಕಾರವನ್ನೇ ತಮ್ಮ ಬಳಿಗೆ ಕರೆದುಕೊಳ್ಳುವ ದಿಟ್ಟತನ ಹೊಂದಿದ್ದರು ಎಂದರು.

           ಕುವೆಂಪು ಉಪನ್ಯಾಸಕರಾಗಿದ್ದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ಯುವರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರನ್ನು ಫೇಲ್ ಮಾಡಿದ ಕಾರಣಕ್ಕೆ, ಮಹಾರಾಜರಿದಂದ ಕಾಲೇಜಿಗೆ ಪಾಸ್ ಮಾಡುವ ಆದೇಶ ಬಂದಾಗ ತಬ್ಬಿಬ್ಬಾದ ಪ್ರಾಂಶುಪಾಲ ಕುವೆಂಪು ಅವರನ್ನು ಕರೆದು ಪಾಸ್ ಮಾಡುವಂತೆ ಸೂಚಿಸಿದಾಗ, “ಆತ ಫೇಲಾಗಲು ಮಾತ್ರ ಯೋಗ್ಯತೆ ಪಡೆದಿದ್ದಾನೆ” ಎಂಬುದಾಗಿ ಹೇಳುವ ಮೂಲಕ ನಿಷ್ಠುರತನವನ್ನು ಮೆರೆದಿದ್ದರು. ಇದೇ ನಿಷ್ಠುರತೆ ನನ್ನನ್ನು ಸೇರಿ ಎಲ್ಲಾ ಉಪನ್ಯಾಸಕರಲ್ಲಿದ್ದಿದ್ದರೆ, ಇಂದಿನ ರಾಜಕಾರಣಿಗಳ ಮಕ್ಕಳು ಏನೇನೊ ಆಗಿರುತ್ತಿದ್ದರು ಎಂದು ಸೂಚ್ಯವಾಗಿ ನುಡಿದರು.

            ಕುವೆಂಪು ಮಾತಾಡಿದ್ರು, ಬೈದ್ರು ಕವಿತೆ ಆಗಿರುತ್ತಿದ್ದವು. ಅವರು ಬದುಕಿದ್ದ ಕಾಲಘಟ್ಟ 2 ಮಹಾ ಯುದ್ಧವನ್ನು ಕಂಡ ಹಾಗೂ ಸ್ವಾತಂತ್ರ್ಯ ಸಂಗ್ರಾಮ ಮತ್ತು ಕರ್ನಾಟಕ ಏಕೀಕರಣ ಚಳವಳಿ ನಡೆಯುತ್ತಿದ್ದ ಕಾಲವದು. ಅವರ ಗುರುಗಳಾದ ಬಿ.ಎಂ.ಶ್ರೀ ಸಾಹಿತ್ಯದ ಹುತ್ತಾ ಮಾಡಿಕೊಂಡು ಕೂರುವ ಬದಲು ಏಕೀಕರಣ ಚಳುವಳಿಗೆ ಬಂದ ಸಂದರ್ಭದಲ್ಲಿ ನಿಮ್ಮ ಧರ್ಮ ನಿಮಗೆ, ನನ್ನ ಧರ್ಮ ನನಗೆ ಎಂದು ನಯವಾಗಿ ವಿರೋಧಿಸುವ ಮೂಲಕ ಕಾವ್ಯದ ಮೂಲಕ ಏಕೀಕರಣಕ್ಕಾಗಿ ಜಾಗೃತಿ ಮೂಡಿಸಿದ್ದರು ಎಂದು ಸ್ಮರಿಸಿದರು.

          ಇಂಗ್ಲೀಷ್ ಶಿಕ್ಷಣ ಪಡೆಯುತ್ತಿದ್ದ ಕೆ.ವಿ.ಪುಟ್ಟಪ್ಪ ಆರಂಭದಲ್ಲಿ ಇಂಗ್ಲಿಷ್‍ನಲ್ಲಿ ಮೊದಲು ಕಾವ್ಯ ರಚಿಸಿ ಖ್ಯಾತ ಆಂಗ್ಲ ಕವಿ ಜಿ.ಹೆಚ್.ಕಜಿನ್ಸ್‍ರವರಿಗೆ ತೋರಿಸಿದಾಗ, ನಿನ್ನ ಭಾಷೆಯಲ್ಲಿ ಸಾಹಿತ್ಯ ಬರಿ ಎಂದು ಎಚ್ಚರಿಸಿದರ ಪರಿಣಾಮ ನಮಗೆ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಸಿಗುವಂತಾಗಿದೆ. ಆದ್ದರಿಂದ ಕಜಿನ್ಸ ಅವರನ್ನು ನಾವು ನೆನೆಯಲೆಬೇಕಾಗಿದೆ ಎಂದ ಅವರು, ಪುರೋಹಿತ ಶಾಹಿ ಹಾಗೂ ವ್ಯವಸ್ಥೆಯ ವಿರುದ್ಧ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದಾಗ, ಆಡಳಿತಗಾರರಿಗೆ ಕಣ್ಣು ಕುಕ್ಕುತ್ತಿದ್ದ ಕಾರಣ ಕುವೆಂಪು ಅವರಿಗೆ ನೀಡುತ್ತಿದ್ದ ನೋಟೀಸ್‍ಗಳಿಗೆ ಅಖಂಡ ಕರ್ನಾಟಕ ಕಾವ್ಯದ ಮೂಲಕ ಉತ್ತರ ಕೊಡುತ್ತಿದ್ದರು. ಇಂತಹ ಕುವೆಂಪು ಅವರ ಸಾಹಿತ್ಯವನ್ನು ಎಲ್ಲರೂ ಓದಿ, ವಿವೇಕವಂತರಾಗಬೇಕೆಂದು ಕಿವಿಮಾತು ಹೇಳಿದರು.

           ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾತನಾಡಿ, ಇಡೀ ಜೀವನವನ್ನು ನಾಡು-ನುಡಿಗೆ ಅರ್ಪಣೆ ಮಾಡಿದ ಕುವೆಂಪು ಅವರ ಜನ್ಮ ದಿನವನ್ನು ನಾವು ಸಂತೋಷ ಮತ್ತು ಸಡಗರದಿಂದ ಆಚರಿಸಬೇಕಾಗಿದೆ. ಶ್ರೀರಾಮಾಯಣ ದರ್ಶನಂ ಕಾವ್ಯ ರಚಿಸಿ ಜ್ಞಾನಪೀಠ ಪ್ರಶಸ್ತಿ ಪಡೆದ ಮಹಾಚೇತನರಾಗಿದ್ದಾರೆ ಎಂದರು.

            ಪ್ರತಿಯೊಬ್ಬ ಮಗುವು ಹುಟ್ಟುತ್ತಾ ವಿಶ್ವಮಾನವನಾಗಿ ಹುಟ್ಟುತ್ತದೆ. ಆದರೆ, ನಾವು ಆ ಮಗುವನ್ನು ಕಾಲ ಕ್ರಮೇಣ ಅಲ್ಪಮಾನವನನ್ನಾಗಿ ಮಾಡುತ್ತಿದ್ದೇವೆ. ಮತ್ತೆ ಆತ ವಿಶ್ವಮಾನವನಾಗಬೇಕಾದರೆ, ಶಿಕ್ಷಣದ ಅವಶ್ಯಕತೆ ಇದೆ. ಆದ್ದರಿಂದ ಕತ್ತಲೆಯಿಂದ ಬೆಳಕಿನೆಡೆಗೆ ತರುವ ಶಿಕ್ಷಣಕ್ಕೆ ಎಲ್ಲರೂ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link