ಬೆಂಗಳೂರು
ಭಾರೀ ಮಳೆಗೆ ನಗರದ ದೊಡ್ಡಬಿದರಕಲ್ಲು ಕೆರೆ ಏರಿ ಹೊಡೆದು ಸುತ್ತಮುತ್ತಲಿನ ಮನೆಗಳು ಜಲಾವೃತಗೊಂಡು ಸಂಕಷ್ಟದಲ್ಲಿ ಸಿಲುಕಿರುವ ನಿವಾಸಿಗಳಿಗೆ ಉಚಿತ ಊಟ ಉಪಹಾರದ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕಬಿದರಕಲ್ಲು, ಭವಾನಿನಗರ, ಅನ್ನಪೂರ್ಣೇಶ್ವರಿ ನಗರ, ದೊಡ್ಡಮುನೇಶ್ವರ ಬಡಾವಣೆ ಸೇರಿದಂತೆ, ಮತ್ತಿತರ ಬಡಾವಣೆಗಳ ಸುಮಾರು ೭೦೦ಕ್ಕೂ ಹೆಚ್ಚು ಮಂದಿಗೆ ಇಂದಿರಾ ಕ್ಯಾಂಟೀನ್ಗಳಿಂದ ಆಹಾರವನ್ನು ವಿತರಿಸಲಾಗಿದೆ. ಕೆರೆಯ ನೀರು ನೇರವಾಗಿ ಮನೆಗಳಿಗೆ ನುಗ್ಗಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಕಳೆದ ರಾತ್ರಿಯಿಂದಲೇ ಬಡಾವಣೆಗಳ ಸುತ್ತಮುತ್ತ ಫಾಗಿಂಗ್, ಡಿಡಿಟಿ ಪೌಡರ್ಗಳನ್ನು ಎಲ್ಲೆಡೆ ಹಾಕುವ ಮೂಲಕ, ಮುನ್ನೆಚ್ಚರಿಕೆ ವಹಿಸಲಾಗಿದೆ.
ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಯಾವುದೇ ಅನಾರೋಗ್ಯ ಹರಡದಂತೆ ಎಚ್ಚರವಹಿಸಿದ್ದು, ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೆರೆ ಕೋಡಿ ಹೊಡೆದ ಪರಿಣಾಮವಾಗಿ ರಸ್ತೆ ಮತ್ತು ಮನೆಯಲ್ಲಿ ನುಗ್ಗಿದ ನೀರನ್ನು ಪಂಪ್ ಸೆಟ್ ಸಹಾಯದಿಂದ ತೆರವುಗೊಳಿಸುವ ಕಾರ್ಯ ಇಂದೂ ಸಹ ಮುಂದುವರೆದಿದೆ . ದೊಡ್ಡ ಬಿದರಕಲ್ಲು ಸುತ್ತಮುತ್ತಲಿನ ಜನರಿಗೆ ಯಾವುದೇ ಅನಾನುಕೂಲವಾಗದಂತೆ, ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಡೆಸುವಂತೆ, ಮೇಯರ್ ಗೌತಮ್ ಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
