ಸ್ವಾರ್ಥದ ಜಪ ಬಿಟ್ಟು ಸೇವೆಯ ಜಪ ಮಾಡಿ

ಚಿತ್ರದುರ್ಗ :

       ನಿರಾಸಕ್ತಿ ಮತ್ತು ಹಿತಾಸಕ್ತಿಯು ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ. ಧನದಾಹವು ವ್ಯಕ್ತಿಯನ್ನು ಒಂದಿಲ್ಲೊಂದು ಅಕ್ರಮ ಎಸಗಲು ಪ್ರಚೋದನೆ ಮಾಡುತ್ತದೆ. ಸೇವಾ ಭಾವನೆಯು ಮಾನವನ ಎಲ್ಲ ದಾಹಕ್ಕೆ ಕಡಿವಾಣ ಹಾಕಬಲ್ಲದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

        ನಗರದ ಎಸ್.ಜೆ.ಎಂ. ಕ್ಯಾಂಪಸ್‍ನಲ್ಲಿ (ಜೆಎಂಐಟಿ) ನಡೆದ 70ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶ್ರೀಗಳು, ಗಣರಾಜ್ಯೋತ್ಸವ ಇದೊಂದು ಅತ್ಯಾಕರ್ಷಕವಾಗಿರುವ ಸಂದರ್ಭ. ರಾಷ್ಟ್ರೀಯ ಹಬ್ಬ. ಇಲ್ಲಿ ಶಿಸ್ತು ಸಂಯಮ ಮುಖ್ಯ.

          ಇದು ಇಂದಿಗೆ ಮಾತ್ರ ಸೀಮಿತವಾಗಬಾರದು. ಇದನ್ನು ಮುಂದುವರೆಸಿಕೊಂಡು ಹೋದವರು ರಾಷ್ಟ್ರದ ಸತ್ಪ್ರಜೆಗಳಾಗುತ್ತಾರೆ.
ಮಾನವ ಬದುಕನ್ನು ಆಗಾಗ ನಿರಾಸಕ್ತಿಯು ಸತಾಯಿಸುತ್ತದೆ. ನಿರಾಸಕ್ತಿಗೆ ಒಳಗಾದ ವ್ಯಕ್ತಿಯು ಸಂದು ಬಡಿದವನಂತೆ ತೋರುತ್ತಾನೆ. ಯಾವ ಲವಲವಿಕೆಯು ಕಂಡು ಬರುವುದಿಲ್ಲ. ಒಂದು ಹಂತದಲ್ಲಿ ಜಡವಾದ ಜೀವನ. ಜಡತ್ವವು ಜೀವನದ ಸಂತಸವನ್ನು ಕಸಿಯುತ್ತದೆ. ಕಾರಣ ಅದರಿಂದ ಬಿಡಿಸಿಕೊಳ್ಳಬೇಕಾಗುತ್ತದೆ. ಜಡತ್ವವು ಜೀವನದ ಸತ್ವವನ್ನು ಹಾಳು ಮಾಡುತ್ತದೆ. ಆದ್ದರಿಂದ ಜೀವನೋತ್ಸಾಹ ಅತಿಮುಖ್ಯ. ಏನನ್ನು ಕಳೆದುಕೊಂಡರೂ ಉತ್ಸಾಹವನ್ನು ಕಳೆದುಕೊಳ್ಳಬಾರದು ಎಂದರು ಸಮಾಜದಲ್ಲಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಇಂದು ಎಲ್ಲ ಕಡೆ ಸಮಸ್ಯಾತ್ಮಕ ಜನಗಳಿರುತ್ತಾರೆ. ಅಂತವರನ್ನು ಸರಿ ದಾರಿಗೆ ತರುವಂತಹ ಪ್ರಯತ್ನಗಳಾಗಬೇಕು. ಬಸವಣ್ಣ ಮತ್ತು ಇತರ ಶರಣರು ಸಮಾಜದಲ್ಲಿ ಅಸಮಾನತೆ ವಿರುದ್ಧ ಹೋರಾಡಿದರು. ಅಸ್ಪಶ್ಯತೆಯನ್ನು ನಿವಾರಿಸುವಲು ಪ್ರಯತ್ನಿಸಿದರು. ಅವರ ತತ್ತ್ವ ಸಿದ್ಧಾಂತಗಳು ನಮಗೆ ಬಹಳ ಮುಖ್ಯ ಎಂದು ಶರಣರು ನುಡಿದರು

       ಸೇವಾಸಕ್ತಿ : ಸೇವೆಯು ಪೂಜೆಯಷ್ಟೇ ಶ್ರೇಷ್ಠವಾದುದು. ಪೂಜೆಯಲ್ಲಿ ವೈಯುಕ್ತಿಕ ಸುಖವು ದೊರೆತರೆ, ಸೇವೆಯಲ್ಲಿ ಇಡೀ ಸಮುದಾಯದ ಪ್ರಗತಿಯು ಸಾಧ್ಯವಿದೆ. ನಾವು ಸಮಾಜಕ್ಕೆ ಸದಾ ಸೇವಕರಾಗಿರಬೇಕು. ಅಧಿಕಾರದ ದರ್ಪ ಇರಬಾರದು. ಸ್ವಾರ್ಥದ ಬದುಕಿಗೆ ಕಡಿವಾಣ ಹಾಕಿ ನಿಸ್ವಾರ್ಥದ ಜೊತೆ ಸಾಗುತ್ತ ಸಮಾಜದಲ್ಲಿ ಎಲ್ಲರೂ ಸಂತೃಪ್ತ ವ್ಯಕ್ತಿಗಳಾಗಬೇಕು. `ಸ್ವಾರ್ಥದ ಜಪ ಸಾಕು; ಸೇವೆಯ ಜಪ ಬೇಕು’ ಎಂದು ನುಡಿದರು.

        ವೇದಿಕೆಯಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಆಡಳಿತ ಮಂಡಳಿ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಶಿವರಾಂ, ಶ್ರೀಮತಿ ರುದ್ರಾಣಿ ಗಂಗಾಧರ್, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಹಾಗು ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

         ಇದೇ ಸಂದರ್ಭದಲ್ಲಿ ವಿಕಾಸ್‍ಕುಮಾರ್  ಎಸ್.ಜೆ.ಎಂ. ಪದವಿ ಕಾಲೇಜು ಚಂದ್ರವಳ್ಳಿ, ಭರತಮ್ಮ  ಎಸ್.ಜೆ.ಎಂ. ಮಹಿಳಾ ಕಾಲೇಜು ಸೇರಿದಂತೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರಿಗೆ, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಮತ್ತು ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಸನ್ಮಾನ ಮಾಡಲಾಯಿತು.
ಎಸ್‍ಜೆಎಂ ವಿದ್ಯಾಸಂಸ್ಥೆಯ ಶಾಲಾಕಾಲೇಜುಗಳ 30ಕ್ಕು ಹೆಚ್ಚು ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಕೊನೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link