ಪಟಾಕಿ ತ್ಯಜಿಸಿ ಪರಿಸರ ಸ್ನೇಹಿಯಾಗಿ ದೀಪಾವಳಿ ಆಚರಿಸಿ..!

ತುಮಕೂರು:

      ದೀಪಾವಳಿ ಎಂದರೆ ಬೆಳಕಿನ ಹಬ್ಬದ ಹೊರತಾಗಿ ಅದೊಂದು ಪಟಾಕಿಯ ಹಬ್ಬವೆಂದೇ ಗುರುತಿಸಲಾಗಿದೆ. ಇದರಿಂದ ಅನಾಹುತಕ್ಕೊಳಗಾದವರಿಗೆ ಈ ಹಬ್ಬ ಒಂದು ರೀತಿಯ ಕರಾಳ ನೆನಪು. ಆದರೆ, ನಗರದಲ್ಲಿ ಈ ಸಲದ ದೀಪಾವಳಿ ಕೊಂಚ ಭಿನ್ನವಾಗಲಿದೆ. ಇದೇ ಮೊದಲ ಬಾರಿ ನಗರದಲ್ಲಿ ಪರಿಸರ ಸ್ನೇಹಿ ಪಟಾಕಿಗಳು ಸದ್ದು ಮಾಡಲಿವೆ.

     ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಪಟಾಕಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಮಳಿಗೆಗಳಲ್ಲಿ ಹಸಿರು ಮತ್ತು ನೀಲಿ ಬಣ್ಣದ ಪರಿಸರ ಸ್ನೇಹಿ ಪಟಾಕಿಗಳ ಮಾರಾಟ ಹೆಚ್ಚಾಗಿದೆ. ಪರಿಸರಕ್ಕೆ ಮಾರಕವಾಗುವ ಪಟಾಕಿಗಳ ಮಾರಾಟದ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ ಬೆನ್ನಲ್ಲೇ ತಯಾರಿಕೆಯೂ ಚುರುಕುಗೊಂಡಿದೆ. ನಗರದ ಬಿಎಚ್ ರಸ್ತೆಯ ಪಕ್ಕದಲ್ಲಿ ಸುಮಾರು ಏಳೆಂಟು ಪಟಾಕಿ ಮಳಿಗೆಗಳಲ್ಲಿ ಹೊಸ ಮಾದರಿಯ ಪರಿಸರ ಸ್ನೇಹಿ ಪಟಾಕಿಗಳು ಲಭ್ಯವಾಗಲಿವೆ.

     ಪಟಾಕಿ ತಯಾರಿಕೆಗೆ ತಮಿಳುನಾಡಿನ ಶಿವಕಾಶಿಯಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭಾರಿ ಅಗ್ನಿ ಅವಘಡ ಮತ್ತು ಕಳೆದ ವರ್ಷ ಸುಪ್ರೀಂಕೋರ್ಟ್ ಅಪಾಯಕಾರಿ ಅಂಶವಿರುವ ಪಟಾಕಿಗಳ ಮೇಲೆ ಹೇರಿದ್ದ ನಿಷೇಧ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಸಾಮಾನ್ಯ ಪಟಾಕಿಗಳ ಹಾವಳಿ ಕ್ಷೀಣಿಸಿದೆ. ಶಿವಕಾಶಿಯಲ್ಲಿ ಪ್ರತಿ ವರ್ಷವೂ ಸುಮಾರು 6 ಸಾವಿರ ಕೋಟಿಗೂ ಹೆಚ್ಚು ವ್ಯವಹಾರ ನಡೆಯುತ್ತದೆ. ಆದರೆ, ಸುಪ್ರೀಂ ಕೋರ್ಟ್ ನಿಷೇಧದ ನಂತರ ವಹಿವಾಟಿನ ಪ್ರಮಾಣ ಭಾರಿ ಕುಸಿದಿದ್ದು, ನಗರದಲ್ಲಿಯೂ ಈ ಬಾರಿ ಬೇಡಿಕೆಗೆ ಪೂರಕವಾಗಿ ಪಟಾಕಿಯ ಆಮದು ಆಗುತ್ತಿಲ್ಲ ಎನ್ನುತ್ತಾರೆ ಪಟಾಕಿ ಮಾರಾಟಗಾರರು.

ಪರಿಸರ ಸ್ನೇಹಿ ಪಟಾಕಿ:

    ಸುರ್‍ಸುರ್ ಬತ್ತಿ, ಅನಕೊಂಡ, ಚಿನಕುರುಳಿನಂತಹ ಕಡಿಮೆ ಹೊಗೆಯನ್ನು ಹೊರ ಸೂಸುವ ಪಟಾಕಿಗಳನ್ನು ಪರಿಸರ ಸ್ನೇಹಿ ಪಟಾಕಿಗಳೆನ್ನಲಾಗುತ್ತದೆ. ವಿಜ್ಞಾನ ಮತ್ತು ಔದ್ಯೋಗಿಕ ಸಂಶೋಧನೆ ಮಂಡಳಿ ಪ್ರಕಾರ ಶೇ.30ರಿಂದ 35ರಷ್ಟು ಕಡಿಮೆ ಪಾರ್ಟಿಕ್ಯುಲೇಟ್ ಮ್ಯಾಟರ್ ವಿಸರ್ಜನೆ ಮಾಡುವ ಹಾಗೂ ಶೇ. 35ರಿಂದ 40ರಷ್ಟು ಕಡಿಮೆ ಎಸ್‍ಒ2 ಹಾಗೂ ನೈಟ್ರೋಜನ್ ಹೊರ ಸೂಸುತ್ತವೆ.

    ಬೇರಿಯಂ, ನೈಟ್ರೋಜನ್ ಹಾಗೂ ಮರ್‍ಕ್ಯೂರಿ ಸೇರಿದಂತೆ ವಿವಿಧ ಅಪಾಯಕಾರಿ ಅಂಶಗಳು ಇರುವ ಪಟಾಕಿಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಪಟಾಕಿ ಪರಿಚಯಿಸಲಾಗಿದೆ. ದೆಹಲಿಯಲ್ಲಿ ಸಮುದಾಯ ಪಟಾಕಿ ಹಬ್ಬ ಆಚರಣೆ ಸಂಪ್ರದಾಯವನ್ನೂ ಪರಿಚಯಿಸಲಾಗಿದೆ. ಇದರಿಂದಲೂ ಪರಿಸರ ಮಾಲಿನ್ಯ ನಿಯಂತ್ರಣವಾಗಲಿದೆ.

    ನಗರದಲ್ಲಿ ಅನಾಹುತಗಳ ಸರಾಸರಿ ಪ್ರಮಾಣ: 2014 ರಿಂದ 18ರ ಸರಾಸರಿಯನ್ನು ಗಮನಿಸಿದಾಗ ಪಟಾಕಿ ಹಾನಿ ಪ್ರಮಾಣ ಶೇ.50ರಷ್ಟಿದ್ದು, ಈ ಪ್ರಸಕ್ತ ವರ್ಷದಲ್ಲಿ ಪಟಾಕಿಯ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಈ ಪ್ರಮಾಣ ಕಡಿಮೆಯಾಗಲಿದೆ ಎನ್ನಲಾಗಿದೆ.

     ಜಿಲ್ಲಾಧಿಕಾರಿಗಳು, ಕಾರ್ಪೊರೇಟ್ ಇಲಾಖೆಗಳು ಹಾಗೂ ನಗರ ಪಾಲಿಕೆಗಳು ಈ ಸಂಬಂಧ ಪರಿಸರ ಸ್ನೇಹಿ ಪಟಾಕಿಗೆ ಹೆಚ್ಚು ಒತ್ತು ನೀಡಿದ್ದು, ನಗರದ ಹಲವೆಡೆಯಲ್ಲಿ ಪರಿಸರ ಸ್ನೇಹಿ ಪಟಾಕಿ ಮಳಿಗೆಗಳಿಗೆ ಅವಕಾಶ ಕೊಡಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಗಾಯಕ್ಕೊಳಗಾದವರಲ್ಲಿ ಬಹುತೇಕರು ನಗರದ ಜಿಲ್ಲಾಸ್ಪತ್ರೆ, ಖಾಸಗಿ ಕಣ್ಣಿನ ಆಸ್ಪತ್ರೆಗಳು ಮುಂತಾದವುಗಳಲ್ಲಿ ಚಿಕಿತ್ಸೆ ಪಡೆದವರಿದ್ದು, ವಯಸ್ಕರಿಗಿಂತ 10 ರಿಂದ 14 ವರ್ಷದ ಮಕ್ಕಳೆ ಹೆಚ್ಚಾಗಿ ದಾಖಲಾಗಿದ್ದಾರೆ. ಇವರಲ್ಲಿ ಶೇ.30 ಮಂದಿ ಒಳರೋಗಿಗಳಾಗಿ ದಾಖಲಾದರೆ, ಶೇ.70 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳುತ್ತಿದ್ದಾರೆ.

      ಶೈಕ್ಷಣಿಕವಾಗಿ ಭೌದ್ಧಿಕತೆಯೊಂದಿಕ ಜನರಲ್ಲಿ ಪಟಾಕಿ ಹೊಡೆಯುವ ಮನಸ್ಥಿತಿ ಕಡಿಮೆಯಾಗುತ್ತಿದೆ ಎಂದಾದರೂ ಪಟಾಕಿಯಿಂದ ಹಾನಿಗಳು ಮಾತ್ರ ನಗರದಲ್ಲಿ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಪ್ರಮಾಣ ಶೇ.40ರಷ್ಟು ಹೆಚ್ಚಾಗಿದ್ದು, ಈ ಪೈಕಿ ಪುಟ್ಟ ಮಕ್ಕಳ ಸಂಖ್ಯೆಯೇ ಅಧಿಕವಾಗಿದೆ. ತೀವ್ರ ವಾಗಿ ಹಾನಿ ಮಾಡಿಕೊಳ್ಳುತ್ತಿರುವವರ ಪ್ರಮಾಣ ಶೇ.50ರಷ್ಟಿದೆ. ಇದರಿಂದ ಹಾನಿಗೆ ಸಂಬಂಧಪಟ್ಟಂತೆ ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸಬೇಕು. ಪರಿಸರ ವಿನಾಶದ ಬಗೆಗೆ ಮನವರಿಕೆ ಮಾಡಬೇಕು. ಈ ವರ್ಷ ಇಂತಹ ಹಾನಿಗಳನ್ನು ತಪ್ಪಿಸಿ ದೀಪಗಳನ್ನು ಹಚ್ಚುವ ಮೂಲಕ ಕುಟುಂಬದೊಂದಿಗೆ ಸಂಭ್ರಮಿಸುವಂತಾಗಬೇಕು.                                                        – ವೀರಭದ್ರಯ್ಯ, ಜಿಲ್ಲಾ ಸರ್ಜನ್

     ನಗರದಲ್ಲಿ ಕಳೆದ ವರ್ಷಕ್ಕಿಂದ ಈ ವರ್ಷದಲ್ಲಿ ಪಟಾಕಿ ಮಳಿಗೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಪರಿಸರ ಸ್ನೇಹಿ ಪಟಾಕಿಗೆ ನಾವು ಸಹಕರಿಸಿದ್ದೇವೆ, ಅಂತೆಯೆ ಜನರ ಬೇಡಿಕೆ ತಕ್ಕ ಪಟಾಕಿಗಳ ಆಮದಾಗುತ್ತಿಲ್ಲ. ಎಲ್ಲಾ ಐಟಂ ಉಳ್ಳ ಒಂದು ಪಟಾಕಿ ಬಾಕ್ಸಿಗೆ 1 ಸಾವಿರದಿಂದ 1,500 ರೂ ನಿಗದಿಯಾಗಿರುತ್ತದೆ. ಹಿಂದಿನ ವರ್ಷದ ವ್ಯಾಪಾರಕ್ಕೆ ಹೋಲಿಸಿದರೆ ಈಗ ವ್ಯಾಪಾರ ಕಡಿಮೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ-ರಾಜು ಪಟಾಕಿ ಮಾರಾಟಗಾರ  

ವಿಶೇಷ ಲೇಖನ: ಯೋಗೇಶ್ ಮಲ್ಲೂರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link