ಹೊಸಪೇಟೆ :
ತಾಲೂಕಿನ ಮಲಪನಗುಡಿಯಲ್ಲಿ ಬುಧವಾರ ಸಂಜೆ ತಾಲೂಕು ಕಾನೂನು ಸೇವಾ ಸಮಿತಿ, ಹಾಗು ವಕೀಲರ ಸಂಘ ಹೊಸಪೇಟೆ. ಇವರ ವತಿಯಿಂದ ‘ಕಾನೂನು ಸಾಕ್ಷರತಾ ರಥಯಾತ್ರೆ’ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂರ್ಣಿಮಾ ಕೆ.ಯಾದವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾರ್ವಜನಿಕರು ಸಣ್ಣಪುಟ್ಟ ಸಮಸ್ಯೆಗಳನ್ನು ಮನೆಯಲ್ಲಿಯೇ ಮುಕ್ತವಾಗಿ ಚರ್ಚಿಸಿ, ಅಲ್ಲಿಯೇ ಬಗೆಹರಿಸಿಕೊಳ್ಳಬೇಕು. ಇದಕ್ಕಾಗಿ ಕಾನೂನು ಇಲಾಖೆಯಿಂದ ಸಾರ್ವಜನಿಕರಿಗಾಗಿ ಉಚಿತ ಕಾನೂನು ನೆರವಿನ ಸೌಲಭ್ಯವಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಎಷ್ಟೋ ಪ್ರಕರಣಗಳಲ್ಲಿ ಸಾರ್ವಜನಿಕರು ದೂರನ್ನು ದಾಖಲಿಸಿ ವಿಚಾರಣೆಗೆ ಹಾಜರಾಗದೇ ಇದ್ದರೆ ವ್ಯಾಜ್ಯಗಳು ತ್ವರಿತವಾಗಿ ಇತ್ಯರ್ಥವಾಗದೇ, ಬಾಕಿ ಉಳಿಯುತ್ತಾ ಹೋಗುತ್ತವೆ. ಇದರಿಂದ ವ್ಯರ್ಥ ಕಾಲಹರಣವಾಗುತ್ತದೆ ಎಂದರು.
ಪ್ರಧಾನ ಹಿರಿಯ ನ್ಯಾಯಾಧೀಶ ಆನಂದ ಚೌಹಾಣ್ರವರು ಮಾತನಾಡಿ, ಪ್ರತಿಯೊಬ್ಬರೂ ಈ ನೆಲದ ಕಾನೂನನ್ನು ಗೌರವಿಸಬೇಕು. ಯಾವುದೇ ಸಂಧರ್ಭದಲ್ಲಿ ಸಾರ್ವಜನಿಕರು ತಮಗೆ ಅನ್ಯಾಯವಾಗಿದೆ ಎಂದು ಭಾಸವಾದಲ್ಲಿ ನ್ಯಾಯಾಲಯದ ಬಾಗಿಲು ಸದಾ ತೆರೆದಿರುತ್ತದೆ ಎಂದು ತಿಳಿಸಿದರು.
ವಕೀಲರಾದ ಎ.ಕರುಣಾನಿಧಿ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಗಳ ಬಗ್ಗೆ, ರಾಘವೇಂದ್ರ ಅವರು ಮಾಹಿತಿ ಹಕ್ಕು ಕಾಯ್ದೆ ಬಗ್ಗೆ, ಕ್ಯಾರ್ ವೆಂಕಟೇಶ್ ಅವರು, ಮೋಟಾರ್ ವಾಹನ ಮತ್ತು ರಸ್ತೆ ಕಾಯ್ದೆ ಬಗ್ಗೆ ಮಾತನಾಡಿದರು.
ಈ ಸಂಧರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಮಾಜಿ ಹುಡಾ ಅಧ್ಯಕ್ಷ ಎಲ್.ಸಿದ್ದನಗೌಡ, ಪಿಡಿಒ ಎಂ.ಉಮೇಶ, ವಕೀಲರ ಸಂಘದ ಕಾರ್ಯದರ್ಶಿ ವೀರನಗೌಡ, ವಕೀಲರಾದ ಕೆ.ರಾಮಪ್ಪ, ಕೆ.ಜಂಬಣ್ಣ, ಟಿ.ಹನುಮಂತಪ್ಪ, ಪಂಪಾಪತಿ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ