ತುಮಕೂರು
ಇಂದಿನ ಓದುಗರು, ನಾಳಿನ ನಾಯಕರು, ಬನ್ನಿ ಗ್ರಂಥಾಲಯಕ್ಕೆ, ನಿಮ್ಮದೇ ವಿಶ್ವವಿದ್ಯಾನಿಲಯಕ್ಕೆ, ಅರಿವಿನ ದೇವಾಲಯ, ನಮ್ಮಗ್ರಂಥಾಲಯ, ಓದಿನಿಂದ ವಿದ್ವತ್ತು, ಗ್ರಂಥಗಳೇ ಸಂಪತ್ತು ಮೊದಲಾದ ಘೋಷವಾಕ್ಯಗಳೊಂದಿಗೆ ತುಮಕೂರು ವಿಶ್ವವಿದ್ಯಾನಿಲಯದಿಂದ ಗ್ರಂಥಾಲಯ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
ದೇಶಾದ್ಯಂತ ಪ್ರತಿವರ್ಷ ನವೆಂಬರ್ 14 ರಿಂದ 20ರವರೆಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿಶ್ವವಿದ್ಯಾನಿಲಯ ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಜಂಟಿಯಾಗಿ ಮಂಗಳವಾರ ಆಯೋಜಿಸಿದ್ದ ಗ್ರಂಥಾಲಯ ಮತ್ತು ಓದಿನ ಕುರಿತು ಅರಿವು ಮೂಡಿಸುವ ಜಾಥಾಗೆ ವಿವಿ ಕುಲಪತಿ ಪ್ರೊ.ಸಿದ್ದೇಗೌಡ ಹಸಿರು ಬಾವುಟ ತೋರಿಸುವುದರೊಂದಿಗೆ ಚಾಲನೆ ನೀಡಿದರು.
ಓದು, ಪುಸ್ತಕ ಮತ್ತು ಗ್ರಂಥಾಲಯಗಳ ಮಹತ್ವದ ಬಗ್ಗೆ ಮಾತನಾಡಿದ ಅವರು, ಇಂದಿನ ಸಮಾಜ ಜ್ಞಾನಾಧಾರಿತ ಸಮಾಜ. ಇಲ್ಲಿ ಜ್ಞಾನಕ್ಕೆ ಅತಿ ಹೆಚ್ಚಿನ ಮಹತ್ವ ಉಂಟು. ಜ್ಞಾನಾರ್ಜನೆಗೆ ಇರುವ ಪ್ರಮುಖ ತಾಣವೆಂದರೆ ಗ್ರಂಥಾಲಯ. ಓದಿನ ಹವ್ಯಾಸವನ್ನು ಹಾಗೂ ವೈಚಾರಿಕ ಪ್ರವೃತ್ತಿಯನ್ನು ಬೆಳೆಸುವುದರಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ತರವಾದುದು. ಓದು, ಓದುವ ಹವ್ಯಾಸ ಹಾಗೂ ಪುಸ್ತಕ ಸಂಸ್ಕøತಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿರುವ ಈ ಜಾಥಾ ಒಂದು ಸಮಾಜಮುಖಿ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯ್ಕ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ. ಸುರೇಶ್, ಹಣಕಾಸು ಅಧಿಕಾರಿ ಪ್ರೊ.ಪರಮಶಿವಯ್ಯ, ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಪ್ರಭಾರ ವಿವಿ ಗ್ರಂಥಪಾಲಕ ಡಾ.ಬಿ.ಟಿ. ಸಂಪತ್ಕುಮಾರ್, ಪ್ರಾಧ್ಯಾಪಕಡಾ. ಕೇಶವ, ವಿವಿ ಉಪಗ್ರಂಥಪಾಲಕ ಡಾ. ರವಿ ವೆಂಕಟ್, ವಿವಿಧ ವಿಭಾಗಗಳ ಬೋಧಕರು, ವಿವಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳ ಗ್ರಂಥಪಾಲಕರು, ವಿವಿ ಗ್ರಂಥಾಲಯ ಸಿಬ್ಬಂದಿ ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದರು.
ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ವಿವಿ ಕುಲಪತಿ ಕಚೇರಿಯಿಂದ ಕುವೆಂಪು ನಗರ, ಮಹಾತ್ಮಾಗಾಂಧಿ ಕ್ರೀಡಾಂಗಣ, ಶಿವಕುಮಾರ ಸ್ವಾಮೀಜಿ ವೃತ್ತ ಮಾರ್ಗವಾಗಿ ಚಲಿಸಿ, ಘೋಷವಾಕ್ಯಗಳುಳ್ಳ ಭಿತ್ತಿಚಿತ್ರಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತ ಸಾರ್ವಜನಿಕರ ಗಮನ ಸೆಳೆದರು. ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸುವ, ಪುಸ್ತಕಗಳು ಮತ್ತು ಗ್ರಂಥಾಲಯಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/11/tumkur-vv-photo1.gif)