ಜಿಲ್ಲೆಯ ವಿವಿಧೆಡೆ ಲಿಫ್ಟ್ ಇರಿಗೇಷನ್ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ : ಜೆಸಿಎಂ

ತುರುವೇಕೆರೆ

   ಅಂತರ್ಜಲ ಮಟ್ಟದ ನಿರಂತರ ಕುಸಿತದಿಂದ ತುಮಕೂರು ಜಿಲ್ಲೆಯು 2020ರ ವೇಳೆಗೆ ಮರಳುಗಾಡಾಗಿ ಮಾರ್ಪಾಡಾಗುವ ಅಪಾಯ ಎದುರಾಗಿತ್ತು. ಹಾಗಾಗಿ ಹೇಮಾವತಿ ನಾಲಾ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸುವ ಮೂಲಕ ಅಂರ್ತಜಲದ ಪುನಃಶ್ಚೇತನ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.

   ತುಮಕೂರು ಶಾಖಾ ನಾಲೆಯಿಂದ ಲಿಫ್ಟ್ ಇರಿಗೇಷನ್ ಮೂಲಕ ತಾಲ್ಲೂಕಿನ ನೀರಗುಂದ ಕೆರೆಗೆ ನೀರನ್ನು ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಹಕಾರದಿಂದ ಜಿಲ್ಲೆಯ ವಿವಿಧೆಡೆ ಲಿಫ್ಟ್ ಇರಿಗೇಷನ್ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಬಿಕ್ಕೆಗುಡ್ಡೆ, ಹಾಗಲವಾಡಿ, ಚೇಳೂರು, ಹೆಬ್ಬೂರು ಮತ್ತು ತುಮಕೂರು ಗ್ರಾಮಾಂತರ ಪ್ರದೇಶಗಳಿಗೆ ಇನ್ನೂ ಸಮರ್ಪಕ ನೀರು ಹರಿಸಬೇಕಿದೆ. ಜಿಲ್ಲೆಗೆ ಹರಿಯಬೇಕಿದ್ದ 25.3 ಟಿಎಂಸಿ ನೀರಿನಲ್ಲಿ ಈಗಾಗಲೇ 17 ಟಿಎಂಸಿ ನೀರನ್ನು ಬಳಸಲಾಗಿದೆ. ಗುಬ್ಬಿ ತಾಲ್ಲೂಕಿನ ಕಡಬ ಕೆರೆ ಒಂದನ್ನು ತುಂಬಿಸಿದರೆ ಭಾಗಶಃ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಿದ ಆತ್ಮಸಂತೃಪ್ತಿ ನನಗಿದೆ. ಜಿಲ್ಲೆಗೆ ಇನ್ನೂ 8 ಟಿಎಂಸಿ ಬಾಕಿ ನೀರು ಹರಿಯಬೇಕಿದ್ದು ಆ ನೀರನ್ನು ಮುಂದಿನ ಮಾರ್ಚ್ ತಿಂಗಳಲ್ಲಿ ಹರಿಸುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು.

    ತುರುವೇಕೆರೆ ತಾಲ್ಲೂಕಿನಲ್ಲಿಯೂ ಇನ್ನೂ ಎರಡು ಲಿಫ್ಟ್ ಇರಿಗೇಶನ್ ಕಾಮಗಾರಿಯಾಗಬೇಕಿದೆ. ನಾಲೆಯಿಂದ ನೇರವಾಗಿ ಸಾರಿಗೇಹಳ್ಳಿ ಕೆರೆಗೆ ನೀರು ಹರಿಯುವಂತೆ ಮಾಡುವುದರ ಜೊತೆಗೆ ಕೆರೆಗೆ ತೂಬಿಟ್ಟು ಸಾರಿಗೇಹಳ್ಳಿ ಕೆರೆಯ ಆಸುಪಾಸಿನ ಕೆರೆಗಳಿಗೂ ನೀರು ಹರಿಸುವ ಯೋಜನೆ ರೂಪಿಸಲಾಗುವುದು. ತುಮಕೂರು ಹೇಮಾವತಿ ನಾಲೆಯು ಅಚ್ಚುಕಟ್ಟು ಇಲ್ಲದ್ದರಿಂದ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಹಾಗಾಗಿ ಕುಣಿಗಲ್ ಎಕ್ಸ್‍ಪ್ರೆಸ್ ಲೈನ್ ಕಾಮಗಾರಿ ತಡೆಹಿಡಿದು ತುಮಕೂರು ಶಾಖಾನಾಲೆಯನ್ನು 480 ಕೋಟಿ ವೆಚ್ಚದಲ್ಲಿ ಅಗಲೀಕರಣ ಮಾಡಿ 2000 ಕ್ಯೂಸೆಕ್ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಪ್ರತಿಯೊಬ್ಬರೂ ಅಗತ್ಯಕ್ಕೆ ತಕ್ಕಂತೆ ನೀರನ್ನು ಬಳಸಿ ಮುಂದಿನ ಜನಾಂಗಕ್ಕೆ ಕುಡಿಯುವ ನೀರನ್ನು ಉಳಿಸೋಣ ಎಂದರು.

     ಶಾಸಕ ಮಸಾಲಜಯರಾಂ ಮಾತನಾಡಿ, ಶಿಂಷಾ ನದಿಯ ನೀರು ಮಾರ್ಕೋನಹಳ್ಳಿ ಮೂಲಕ ವ್ಯರ್ಥವಾಗಿ ಹರಿಯುವ 900 ಕ್ಯೂಸೆಕ್ ನೀರನ್ನು ಲೋಕಮ್ಮನಹಳ್ಳಿ, ಬಾಣಸಂದ್ರ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿ ಮಾಡಲು ಸಚಿವರು ಅನುದಾನ ನೀಡಬೇಕು. ತಾಲ್ಲೂಕಿನ ಡಿ.8, ಡಿ.10 ಮತ್ತು ಡಿ.11 ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದು ಹೂಳೆತ್ತಲು ಅಂದಾಜು ವೆಚ್ಚದ ಹಣ ಮಂಜೂರು ಮಾಡಿಕೊಡಿ ಎಂದು ಸಚಿವರಿಗೆ ಮನವಿ ಮಾಡಿದ ಅವರು, ಗ್ರಾಮಸ್ಥರ ಒತ್ತಾಯದ ಮೇರೆಗೆ ಕಂಚಿರಾಯ ದೇವಸ್ಥಾನದ ರಸ್ತೆಗೆ ಡಾಂಬರ್ ಹಾಕಲು 30 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಬಾಣಸಂದ್ರದ ಪವರ್ ಸ್ಟೇಷನ್ ಕಾಮಗಾರಿಯು ಜಾಗದ ಕೊರತೆಯಿಂದ ಇದುವರೆವಿಗೂ ಸ್ಥಗಿತಗೊಂಡಿದ್ದು ಶೀಘ್ರ ಪ್ರಾರಂಭಗೊಳ್ಳಲಿದೆ.

    ‘ತುರುವೇಕೆರೆ ತಾಲ್ಲೂಕಿನ ನೂರಾರು ನೀರು ಗಂಟಿಯ ಸಿಬ್ಬಂದಿಗಳ 98 ಲಕ್ಷ ವೇತನ ಬಾಕಿ ಇದ್ದು ಕೂಡಲೇ ಹಣ ಬಿಡುಗಡೆ ಮಾಡಿಸಿಕೊಡಬೇಕೆಂದು ಸಚಿವ ಜೆ.ಸಿ. ಮಾಧುಸ್ವಾಮಿ ಅವರಲ್ಲಿ ಮನವಿ ಮಾಡಿದರು.’ಹೇಮಾವತಿ ನಾಲಾ ಮುಖ್ಯ ಎಂಜಿನಿಯರ್ ಕೆ.ಬಾಲಕೃಷ್ಣ ಮಾತನಾಡಿ, ತುಮಕೂರು ಶಾಖಾ ನಾಲೆಯ ಸರಪಳಿ 38.975 ಕಿ.ಮೀ.ನಲ್ಲಿ ನೀರನ್ನು ಎತ್ತಿ ನೀರಗುಂದ ಕೆರೆಗೆ ನೀರನ್ನು ಒದಗಿಸಲು 4.11 ಕೋಟಿ ವೆಚ್ಚ ವ್ಯಯಿಸಲಾಗಿದೆ. ವೆಂಕಟಾಪುರ ಹತ್ತಿರದ ನಾಲೆಯಿಂದ ನೀರಗುಂದ ಕೆರೆಯವರೆಗಿನ 3.65 ಕಿ.ಮೀ. ನಷ್ಟು ಪೈಪ್‍ಲೈನ್ ಅಳವಡಿಸಲಾಗಿದೆ. 95 ಎಚ್.ಪಿ.ಯ ಎರಡು ಮೋಟರ್‍ಗಳನ್ನು ಅಳವಡಿಲಾಗಿದ್ದು 60 ದಿನಗಳಲ್ಲಿ ಕೆರೆ ತುಂಬಲಿದ್ದು ನೀರಗುಂದ ಭಾಗದ ರೈತರಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದರು.

     ವೀರೇಂದ್ರಪಾಟೀಲ್ ಪಾಸ್ತಾವಿಕ ನುಡಿಗಳನ್ನಾಡಿದರು. ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿ ಹಾಗೂ ಗೋಡೆಕೆರೆ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ರೇಣುಕಾಕೃಷ್ಣಮೂರ್ತಿ, ತಾ.ಪಂ ಸದಸ್ಯೆ ಹೇಮಾವತಿಶಿವಾನಂದ್, ಎಪಿಎಂಸಿಯ ರೇಣುಕಯ್ಯ, ವಿ.ಟಿ.ವೆಂಕಟ ರಾಮು, ಗ್ರಾ.ಪಂ.ಅಧ್ಯಕ್ಷೆ ಚಂದ್ರಮ್ಮ, ಸದಸ್ಯರುಗಳಾದ ಎನ್.ಕೆ.ಬಸವರಾಜು, ವನಿತಾ, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಎಂ.ಡಿ.ಮೂರ್ತಿ, ದುಂಡ ರೇಣುಕಪ್ಪ, ಅಲ್ಲಪ್ಪ, ಡಿ.ಆರ್.ಬಸವರಾಜು, ಅರಳಿಕೆರೆ ಲೋಕೇಶ್, ಶಿವಕುಮಾರ್, ಕಾಂತಣ್ಣ, ಗುತ್ತಿಗೆದಾರ ರಮೇಶ್ ಸೇರಿದಂತೆ ಅನೇಕ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link