ಬಳ್ಳಾರಿ
ಬಿಸಿಲ ನಾಡಿನಲ್ಲೂ ಇನ್ನುಮುಂದೆ ಆಗಸ್ಟ್ 15ರಿಂದ ವನ್ಯಜೀವಿ ಪ್ರೇಮಿಗಳು ಸಪಾರಿ ಹೊರಡಬಹುದು ಕೇವಲ ಬಂಡೀಪುರ, ಶಿವಮೊಗ್ಗೆ ಮತ್ತು ಬನ್ನೇರುಘಟ್ಟದಲ್ಲಿ ಮಾತ್ರ ವನ್ಯಜೀವಿಗಳನ್ನು ನೋಡುವ ಭಾಗ್ಯ ಪ್ರಾಣಿಪ್ರಿಯರಿಗೆ ಇತ್ತು. ಇದೀಗ ಹೈದರಾಬಾದ್ ಕರ್ನಾಟಕ ಜಿಲ್ಲೆಗಳ ಜನರೂ ಸೇರಿದಂತೆ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವನ್ಯಪ್ರೇಮಿಗಳು ಕಾಡುಪ್ರಾಣಿಗಳನ್ನು ವೀಕ್ಷಣೆ ಮಾಡಬಹುದು.
ಹೊಸಪೇಟೆ ತಾಲೂಕಿನ ಕಮಲಾಪುರ ಬಳಿ 360 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಜೈವಿನ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಈ ಉದ್ಯಾನಕ್ಕೆ ಈಗಾಗಲೇ ಹಲವು ಕಾಡುಪ್ರಾಣಿಗಳನ್ನು ತಂದಿರಿಸಲಾಗಿದೆ. ಇವುಗಳ ಸಾಲಿನಲ್ಲೀಗ ಎರಡು ಸಿಂಹಗಳನ್ನು ಕರೆ ತರಲಾಗಿದ್ದು ಹುಲಿ, ಸಿಂಹಗಳ ಸಫಾರಿಗೆ ಸಮಯ ಬಂದೊದಗಿದೆ. ಮೈಸೂರಿನ ಪ್ರಾಣಿ ಸಂಗ್ರಹಾಲಯದಿಂದ ಕೇಸರಿ ಹಾಗೂ ಪ್ರೇಮ ಎಂಬ ಹೆಸರಿನ ಗಂಡು ಮತ್ತು ಹೆಣ್ಣು ಸಿಂಹಗಳನ್ನು ತರಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಪೃಥ್ವಿ ಹಾಗೂ ಪ್ರೇಮಾ ಹೆಸರಿನ ಎರಡು ಹುಲಿಗಳನ್ನು ತರಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಮಲಾಪುರ ಬಳಿಯ ಕುರುಚಲು ಕಾಡಿನಲ್ಲಿ ಈ ಉದ್ಯಾನವಕ್ಕೆ ಚಾಲನೆ ನೀಡಲಾಗಿದೆ. ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯ ಪ್ರವಾಸೋದ್ಯಮ, ಮೂಲಸೌಕರ್ಯಾಭಿವೃದ್ಧಿ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಜನಾರ್ಧನರೆಡ್ಡಿ ಅವರು 2010ರಲ್ಲಿ ಈ ಉದ್ಯಾನವನಕ್ಕೆ ಚಾಲನೆ ನೀಡಿದ್ದರು. ಈಗಾಗಲೇ 75 ಜಿಂಕೆಗಳು, 75 ಕೃಷ್ಣಮೃಗ, 6 ನೀಲಗಾಯ್, 6 ಸಾಂಬಾರ್, 4 ಹುಲಿಗಳು, 4 ಸಿಂಹಗಳನ್ನು ಕರೆ ತರಲಾಗಿದೆ. ಉಳಿದಂತೆ ಜೂನ್ ಅಂತ್ಯಕ್ಕೆ ಚಿರತೆಗಳು, ಮೊಸಳೆಗಳು, ಕರಡಿ, ಹೀನಾಸ್, ಕತ್ತೆ ಕಿರುಬ, ತೋಳ ಮತ್ತು ನರಿಗಳನ್ನು ತರುವ ಪ್ರಯತ್ನಗಳು ನಡೆದಿವೆ. ಇದೊಂದು ರಾಷ್ಟ್ರೀಯ ಪಾರ್ಕ್ ಆಗಿದ್ದು ಗಿಳಿ, ನವಿಲು, ಕಾಡುಕೋಳಿ, ಸಿಂಹ ಬಾಲದ ಕೋತಿಗಳನ್ನೂ ತರಲಾಗುತ್ತದೆ. ಇದೊಂದು ಪರಿಪೂರ್ಣ ಜೈವಿಕ ರಾಷ್ಟ್ರೀಯ ಉದ್ಯಾನವನವನ್ನಾಗಿ ಮಾಡುವ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಆಗಸ್ಟ್ 15ರಿಂದ ವನ್ಯಪ್ರೇಮಿಗಳು ಇಲ್ಲಿ ಸಫಾರಿ ನಡೆಸಬಹುದಾಗಿದೆ.
ಇಲ್ಲಿನ ವಾತಾವರಣ ಪೂರಕ:
ಗುಜರಾತಿನಲ್ಲಿರುವ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಂಹ ಮತ್ತು ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅದೇರೀತಿ, ಇಲ್ಲಿನ ಪರಿಸರ ಮತ್ತು ವಾತಾವರಣ ಕೂಡ ಹುಲಿ-ಸಿಂಹಗಳಿಗೆ ಹೇಳಿ ಮಾಡಿಸಿದಂತಿದ್ದು ಈ ಉದ್ಯಾನವನ್ನು ರಾಷ್ಟ್ರೀಯ ಜೈವಿಕ ಉದ್ಯಾನವನ್ನಾಗಿ ರೂಪಿಸುವ ಎಲ್ಲ ಚಟುವಟಿಕೆಗಳು ನಡೆದಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
