ಚಿತ್ರದುರ್ಗ:
ಕಡ್ಲೆಗುದ್ದ ಗ್ರಾಮದಲ್ಲಿ ಆಂಜನೇಯಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಕ್ಕಳ ಸಂತೆಯನ್ನು ಆಯೋಜಿಸಲಾಗಿತ್ತು.
ಕಡ್ಲೆಗುದ್ದು ಗ್ರಾಮದ ಮುಖಂಡರುಗಳಾದ ಓಂಕಾರಪ್ಪ ಮತ್ತು ಹನುಮಂತಪ್ಪ ಇವರುಗಳು ಮಕ್ಕಳ ಸಂತೆ ಉದ್ಘಾಟಿಸಿ ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆ ವ್ಯವಹಾರಿಕ ಜ್ಞಾನ ಮೂಡಿಸಬೇಕಾಗಿರುವುದರಿಂದ ಮಕ್ಕಳ ಸಂತೆ ಅತ್ಯುತ್ತಮವಾದುದು. ಇದರಿಂದ ರೈತರು ಒಂದೊಂದು ಬೆಳೆ ಬೆಳೆಯುವುದರ ಹಿಂದೆ ಎಷ್ಟು ಪರಿಶ್ರಮವಿದೆ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.
ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ಮಾತನಾಡಿ ಪಠ್ಯದ ಜೊತೆ ವ್ಯವಹಾರಿಕ ಜ್ಞಾನವನ್ನು ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಬೆಳೆಸಬೇಕಾಗಿರುವುದರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳ ಸಂತೆ ಏರ್ಪಡಿಸಿದ್ದೇವೆ. ಸ್ವತಃ ಮಕ್ಕಳೆ ಬಗೆ ಬಗೆ ತರಕಾರಿ ಹಾಗೂ ಆಹಾರ ಧಾನ್ಯಗಳನ್ನು ಮಾರಾಟ ಮಾಡಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಕೌಶಲ್ಯವನ್ನು ಮೂಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಅವರೆಕಾಯಿ, ತೊಗರಿಕಾಯಿ, ಟಮೋಟೊ, ಬಗೆ ಬಗೆಯ ಸೊಪ್ಪು ತರಕಾರಿ, ಫ್ಯಾನ್ಸಿ ಐಟಂ, ಬಟ್ಟೆ, ದೇಹದ ತೂಕ ಪರೀಕ್ಷಿಸುವ ಯಂತ್ರ, ಟೀಸ್ಟಾಲ್, ಪಾನಿಪುರಿ ಹೀಗೆ ತರಹೆವಾರಿ ಪದಾರ್ಥಗಳನ್ನಿಟ್ಟುಕೊಂಡು ಮಕ್ಕಳು ಗ್ರಾಹಕರನ್ನು ಕೂಗಿ ಕರೆಯುತ್ತಿದ್ದುದ್ದು, ಗ್ರಾಮಸ್ಥರ ಮನಸೆಳೆಯುವಂತಿತ್ತು.
ಮಕ್ಕಳ ಸಂತೆಯಲ್ಲಿ ಹೆಚ್ಚು ಲಾಭ ಗಳಿಸಿದ ಮಕ್ಕಳಿಗೆ ವೇದಾಂತ ಲಿಮಿಟೆಡ್ನ ಅಧಿಕಾರಿ ಮಾಲತಿಕರ್ಕಿ ಬಹುಮಾನ ವಿತರಿಸಿದರು.
ಗ್ರಾ.ಪಂ.ಸದಸ್ಯರಾದ ನಾಗರಾಜ್, ಮಧು, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಜಯಪ್ಪ, ಸಿ.ಆರ್.ಪಿ.ದ್ರುವಕುಮಾರ್, ಶಿಕ್ಷಕರುಗಳು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
