ತುಮಕೂರು
ನಮ್ಮ ದೇಶದಲ್ಲಿ ಪರಂಪರಾಗತವಾಗಿ ಹವಾಮಾನವನ್ನು ನಿರ್ಧರಿಸುವ ಅನೇಕ ಪದ್ಧತಿ ಮತ್ತು ಸಂಪ್ರದಾಯಗಳು ಆಚರಣೆಯಲ್ಲಿದ್ದವು ಅವುಗಳ ಜ್ಞಾನ ಈಗ ನಶಿಸಿದೆ, ಅದು ಪುನರ್ ಸ್ಥಪನೆಯಾಗಬೇಕು ಎಂದು ಸಹಜ ಬೇಸಾಯ ಶಾಲೆಯ ಕೃಷಿ ವಿಜ್ಞಾನಿ ಡಾ.ಹೆಚ್.ಮಂಜುನಾಥ್ ಹೇಳಿದರು.
ತುಮಕೂರು ವಿಜ್ಞಾನ ಕೇಂದ್ರದಲ್ಲಿ ಸಹಜ ಬೇಸಾಯ ಶಾಲೆಯು ಆಯೋಜಿಸಿದ್ದ ವಾಯುಗುಣ ವೈಪರಿತ್ಯದ ನಡುವೆ ಯಶಸ್ವಿ ಬೇಸಾಯ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು.
ಇಡೀ ವರ್ಷದ ಮಳೆಯನ್ನು ನಿರ್ಧರಿಸುವ ಮತ್ತು ಗಾಳಿ ಬೀಸುವ ದಿಕ್ಕನ್ನು ಆಧಾರಿಸಿ ಆ ವರ್ಷದ ಬರ, ಮಳೆ, ವಾತಾವರಣದ ಸ್ಥಿತಿಗತಿಗಳನ್ನು ತಿಳಿಯುವ ಜ್ಞಾನ ರೈತರಲ್ಲಿತ್ತು. ಇಂದು ದತ್ತಾಂಶಗಳನ್ನು ಕೇಂದ್ರೀಕರಿಸಿ ಸಂಗ್ರಹಿಸಲಾಗುತ್ತಿದೆ ಅದು ಪ್ರತಿ ಹಳ್ಳಿಯ ರೈತರು ಗುಂಪುಗೂಡಿ ಹವಾಮಾನ ದತ್ತಾಂಶಗಳನ್ನು ಸಂಗ್ರಹಿಸಿ ದಾಖಲಿಸುವ ವೀಕೇಂದ್ರೀಕರಣವಾಗಬೇಕು ಅದು ತಾಲ್ಲೂಕು ಮತ್ತು ಜಿಲ್ಲೆಗಳಿಗೆ ತಲುಪಬೇಕು ಇದಕ್ಕೆ ಪಂಚಾಯಿತಿಗಳು ಸಹಕರಿಸಬೇಕು. ಇಂತಹ ವಿಕೇಂದ್ರೀಕೃತ ದತ್ತಾಂಶಗಳು ಮಾತ್ರ ಉತ್ತಮ ಬೆಳೆಯನ್ನು ನಿರ್ಧರಿಸುತ್ತವೆ ಆಗ ರೈತರ ಬದುಕು ಹಸನಾಗುತ್ತದೆಂದು ತಿಳಿಸಿದರು.
ಮಳೆಯ ಪ್ರಮಾಣ, ಗಾಳಿ ಬೀಸುವ ದಿಕ್ಕು, ಮಣ್ಣಿನ ತೇವಾಂಶ, ವಾತಾವರಣದ ದಗೆ, ಸೂರ್ಯನ ಶಾಖ, ದೈನಂದಿನ ಕನಿಷ್ಠ ಮತ್ತು ಗರಿಷ್ಠ ತಾಪಮಾನ, ಮಳೆ ನಕ್ಷತ್ರಗಳು ಇವುಗಳನ್ನು ನಿರಂತರವಾಗಿ ಅಭ್ಯಾಸಮಾಡುವ ರೈತರು ಮಾತ್ರ ವಾಯುಗುಣ ವೈಪರಿತ್ಯಗಳಿಗೆ ಹೊಂದಿಕೆಯಾಗಬಲ್ಲ ಬೇಸಾಯ ಮಾಡಿ ಯಶಸ್ವಿಯಾಗಲು ಸಾಧ್ಯವಿದೆ. ಇಲ್ಲದೆ ಹೋದರೆ ರೈತರು ಅನೇಕ ಕಷ್ಟನಷ್ಟಗಳನ್ನು ಅನುಭವಿಸುವಂತಾಗುತ್ತದೆ ಎಂದು ಕೃಷಿ ವಿಜ್ಞಾನಿ ಡಾ.ಹೆಚ್.ಮಂಜುನಾಥ್ ಹೇಳಿದರು.
ಪರಿಸರವಾದಿ ಸಿ ಯತಿರಾಜು ಮಾತನಾಡಿ, ಬೇಸಾಯ ಯಶಸ್ವಿಯಾಗಲು ಸ್ಥಳೀಯ ದತ್ತಾಂಶಗಳು ಅತ್ಯಗತ್ಯ, ಅವುಗಳನ್ನು ರೈತರೇ ಸಂಗ್ರಹಿಸುವ, ಅರ್ಥಮಾಡಿಕೊಳ್ಳುವ, ವಿಶ್ಲೇಶಿಸಿ ಬಳಸುವ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಕರಗತಮಾಡಿಕೊಳ್ಳಬೇಕು. ವಾಯುಗುಣ ವೈಪರಿತ್ಯ ಜಾಗತಿಕ ವಿದ್ಯಾಮಾನವಾದರೂ ಅದು ಸ್ಥಳೀಯವಾಗಿ ಅನೇಕ ಪರಿಣಾಮಗಳನ್ನುಂಟು ಮಾಡುತ್ತಿರುತ್ತದೆ ಎಂದು ಹೇಳಿದರು.
ಕಾರ್ಯಾಗಾರಕ್ಕೆ ವಿವಿಧೆಡೆಗಳಿಂದ ಸುಮಾರು 50ಕ್ಕೂ ಅಧಿಕ ರೈತರು ಮತ್ತು ಆಸಕ್ತರು ಆಗಮಿಸಿದ್ದರು. ಅವರು ತಮ್ಮ ಕೃಷಿ ಪದ್ದತಿಯ ಕಷ್ಟನಷ್ಟಗಳನ್ನು ಹೇಳಿಕೊಂಡರು. ಕೆಲವರು ಸಹಜ ಬೇಸಾಯ ಮಾಡಲು ನೊಂದಾಯಿಸಿಕೊಂಡರು.ಸಹಜ ಬೇಸಾಯ ಶಾಲೆಯ ಜ್ಯೋತಿರಾಜ್, ರಾಮಕೃಷ್ಣಪ್ಪ, ಡಾ.ನಾಗೇಂದ್ರ, ರವೀಶ್, ವಿವೇಕ್, ಕೆ.ಪಿ.ಮಧುಸೂದನ್ ಭಾಗವಹಿಸಿದ್ದರು.