ಬಿಟ್ಟು ಬಿಡದ ಸೋನೆ ಮಳೆ : ಹೊಲದಲ್ಲೇ ಹೆಸರು ಮೊಳಕೆ

ಹುಳಿಯಾರು :

      ಕಳೆದೊಂದು ವಾರದಿಂದ ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದು ಹುಳಿಯಾರು ಹೋಬಳಿಯ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಹಾಗೂ ಅಲಸಂದೆ ಬೆಳೆ ನಿರಂತರ ಮಳೆಯಿಂದಾಗಿ ಗಿಡದಲ್ಲೆ ಮೊಳಕೆ ಒಡೆಯುತ್ತಿದೆ.

      ಹೌದು, ಈ ವರ್ಷ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದ ಪರಿಣಾಮ ರೈತರು ಉತ್ಸುಕತೆಯಿಂದ ಕೃಷಿ ಮಾಡಿದ್ದರು. ಲಾಕ್‍ಡೌನ್‍ನಿಂದಾಗಿ ಹಳ್ಳಿಗೆ ಬಂದಿದ್ದ ಯುವ ಜನತೆ ಸಹ ದಶಕಗಳಿಂದ ಪಾಳು ಬಿದ್ದಿದ್ದ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಪರಿಣಾಮ ಈ ಭಾಗದ ಸಾವಿರಾರು ಎಕರೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಹಾಗೂ ಅಲಸಂದೆ ಬಿತ್ತನೆಯಾಗಿತ್ತು.

      ಬಂಪರ್ ಬೆಳೆ, ಹುಸಿಯಾದ ನಿರೀಕ್ಷೆ :

      ಪೂರ್ವ ಮುಂಗಾರು ಮಳೆಯು ಕಾಲಕಾಲಕ್ಕೆ ಉತ್ತಮವಾಗಿ ಬಂದು ಬೆಳೆಗೆ ವರವಾಗಿ ರೈತರಿಗೆ ಖುಷಿ ನೀಡಿತ್ತು. ಹೋಬಳಿಯಾದ್ಯಂತ ಬೆಳೆ ಹುಲುಸಾಗಿ ಬಂದು, ಬಂಪರ್ ಬೆಳೆ ಸಿಗುವ ಸೂಚನೆ ನೀಡಿತ್ತು. ಅದರಂತೆ ಉತ್ತಮವಾಗಿ ಫಸಲು ಸಹ ಬಂದಿತ್ತು. ಈಗ ರೈತರು ಸಂಭ್ರಮದಿಂದ ಕೂಯ್ಲಿಗೆ ಮುಂದಾಗಿರುವ ಸಂದರ್ಭದಲ್ಲಿ ಬಿಟ್ಟು ಬಿಟ್ಟು ಬರುತ್ತಿರುವ ಸೋನೆ ಮಳೆಯು ಬೆಳೆಯ ಹಾನಿಗೆ ಕಾರಣವಾಗಿ ರೈತರನ್ನು ದುಃಖಕ್ಕೀಡು ಮಾಡಿದೆ.

ಹೋಲಕ್ಕೆ ಹೋದವರು ಮನೆಗೆ ವಾಪಸ್ : 

     ಹೋಬಳಿಯಾದ್ಯಂತ ಕಳೆದ ಒಂದು ವಾರದಿಂದ ಮೋಡ ಮುಚ್ಚಿದ ವಾತಾವರಣವಿದೆ. ಆಗಾಗ ಸೋನೆ ಮಳೆ ಬರುತ್ತಿರುವುದು ರೈತರಿಗೆ ತಲೆ ನೋವಾಗಿ ಪರಿಣಮಿಸಿದೆ. ಸೋನೆ ಮಳೆಯಲ್ಲಿ ಕಾಯಿ ಬಿಡಿಸಿ ಅದನ್ನು ಬೇರ್ಪಡಿಸುವುದು ದೊಡ್ಡ ಸವಾಲಾಗಿದೆ. ನಿತ್ಯ ಮುಂಜಾನೆ ಒಣಗಿದ ಹೆಸರು ಕಾಯಿ ಬಿಡಿಸಲು ಹೊಲಗಳಿಗೆ ಹೋದ ರೈತಾಪಿ ಜನರು ಸೋನೆ ಮಳೆ ಆರಂಭಗೊಳ್ಳುತ್ತಿದ್ದಂತೆ ಕಾಯಿ ಬಿಡಿಸದೇ ಹಾಗೆಯೇ ನಿರಾಸೆಯಿಂದ ಮನೆಗೆ ಹಿಂದಿರುಗುವ ದೃಶ್ಯ ಸಾಮಾನ್ಯವಾಗಿದೆ.

ಕೊಳೆಯುತ್ತಿರುವ ಬೆಳೆ :

      ವಾರದಿಂದಲೂ ಎಡಬಿಡದೆ ಬೀಳುತ್ತಿರುವ ಸೋನೆ ಮಳೆಯಿಂದ ಹೊಲದಲ್ಲಿ ಬೆಳೆ ಕೊಯ್ಲು ಮಾಡಲಾಗದೆ ಕೈ ಬಿಟ್ಟ ಪರಿಣಾಮ ಸಿಪ್ಪೆಯೊಳಗೆ ಕಾಳುಗಳು ನೆನೆದು ಮೊಳಕೆ ಒಡೆಯುತ್ತಿವೆ, ಕೆಲವೆಡೆ ಕಾಳುಗಳು ಬೂಸ್ಟ್ ಸಹ ಹಿಡಿಯುತ್ತಿವೆ. ಇನ್ನು ಕೊಯ್ಲಾಗಿದ್ದ ಬೆಳೆಯನ್ನು ಮಳೆಯಿಂದಾಗಿ ಕಣ ಮಾಡಲಾಗಿಲ್ಲವಾದ್ದರಿಂದ ಬಣವೆಯಲ್ಲೆ ಮೊಳಕೆ ಒಡೆಯುತ್ತಿವೆ. ಕಣಕ್ಕೆ ಹಾಕಿದ್ದ ಬೆಳೆ ಕೊಳೆತು ಉಪಯೋಗಕ್ಕೆ ಬಾರದಂತಾಗಿದೆ.

ಖರ್ಚು ಮಾಡಿದ ಹಣವಾದರೂ ಬರಲಿ : 

      ಇಷ್ಟು ವರ್ಷ ಉತ್ತಮ ಮಳೆಗಾಲ ಇಲ್ಲ ಅಂತ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಆದರೇ ಈ ವರ್ಷ ಉತ್ತಮವಾಗಿ ಮಳೆ ಬಂದರೂ ಬೆಳೆ ಕೈಹಿಡಿಯುವ ಸಂದರ್ಭದಲ್ಲಿ ಅನಾವಶ್ಯಕವಾಗಿ ಬಂದು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ. ಪರಿಣಾಮ ಕೋವಿಡ್ ಸಂಕಷ್ಟ ಕಾಲದಲ್ಲಿ ಮುಂಗಾರು ಬೆಳೆಯಿಂದ ನಾಲ್ಕು ಕಾಸು ನೋಡುವ ಕನಸು ಕಂಡಿದ್ದ ರೈತರಿಗೆ ಭಾರಿ ನಿರಾಸೆಯಾಗಿದೆ. ಒಟ್ಟಾರೆ ರೈತನ ಜೀವನಲ್ಲಿ ಮಳೆರಾಯ ಜೂಜಾಡುತ್ತಿದ್ದು, ಬಿತ್ತನೆಗೆ ಖರ್ಚು ಮಾಡಿದ ಹಣವಾದರೂ ಸಹ ಬರುವುದೋ, ಇಲ್ಲವೋ ಎನ್ನುವ ಅನುಮಾನ ರೈತರನ್ನು ಕಾಡುತ್ತಿದೆ.

       ಮಳೆಗಾಲದ ಕೊರತೆಯಿಂದ ತತ್ತರಿಸಿದ್ದ ರೈತರಿಗೆ ವಾರದಿಂದ ಸುರಿಯುತ್ತಿರುವ ಸೋನೆ ಮಳೆ, ಬೆಳೆದು ನಿಂತ ಹೆಸರು ಬೆಳೆ ಗಿಡದಲ್ಲಿಯೇ ಮೊಳಕೆ ಒಡೆಯುವಂತೆ ಮಾಡಿ ಫಸಲು ಯಾವುದಕ್ಕೂ ಬಾರದಾಗಿದೆ. ಹೆಸರು ಬೆಳೆಯ ಹಾನಿಯಿಂದ ಕೋಟ್ಯಂತರ ರೂ.ಗಳ ಹಾನಿ ಸಂಭವಿಸಿದ್ದು, ಸರಕಾರ ಇತ್ತ ಕಡೆಗೆ ಗಮನ ಹರಿಸಬೇಕಿದೆ. ಅಧಿಕಾರಿಗಳೂ ಸಹ ವಾಸ್ತವಂಶದ ವರದಿಯನ್ನು ತಯಾರಿಸಿ ಸರಕಾರಕ್ಕೆ ನೀಡಿ ರೈತರಿಗೆ ಪರಿಹಾರ ಕೊಡಿಸಬೇಕಿದೆ.

-ಕೆಂಕೆರೆ ಸತೀಶ್, ಉಪಾಧ್ಯಕ್ಷ, ರಾಜ್ಯ ರೈತ ಸಂಘ.

       ಹುಲಸಾಗಿ ಬೆಳೆದಂತ ಹೆಸರು ಬೆಳೆಯನ್ನು ಕೊಯ್ಲು ಮಾಡಬೇಕು ಎನ್ನುವಷ್ಟರಲ್ಲಿ ದಿಢೀರನೆ ಬಂದಂತ ಮಳೆಯಿಂದ ಫಸಲು ಕಣ್ಮುಂದೆಯೇ ಹಾನಿಯಾಗಿದ್ದನ್ನು ನೋಡಲಾಗುತ್ತಿಲ್ಲ. ಒಂದು ವಾರದಿಂದ ಆಗಾಗ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ನೀರಿನೊಂದಿಗೆ ಮಣ್ಣು ಪಾಲಾದ ಹೆಸರು ಬೆಳೆ ಮೊಳಕೆ ಒಡೆಯುತ್ತಿದ್ದು, ಯಾವ ಉಪಯೋಗಕ್ಕೂ ಬಾರದಾಗಿದೆ. ಸರ್ಕಾರ ನಷ್ಟಕ್ಕೊಳಗಾದ ರೈತರ ನೆರವಿಗೆ ಬರಬೇಕಿದೆ.

-ಲಿಂಗರಾಜು, ರೈತ, ದೊಡ್ಡಎಣ್ಣೇಗೆರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link