ಪಾವಗಡ
ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ವರುಣನ ಆರ್ಭಟಕ್ಕೆ ಪಟ್ಟಣದ ರಸ್ತೆಗಳೆಲ್ಲ ಜಲಾವೃತವಾಗಿದ್ದಲ್ಲದೆ, ರೈತನ ಪಾಲಿಹೌಸ್ನ ರೆಕ್ಸಿನ್ ಶೀಟ್ ಹರಿದು ತುಂಡಾದ ಘಟನೆ ನಡೆದಿದೆ.
ಮುಂಗಾರು ಮಳೆ ಈ ಬಾರಿ ರೈತರ ಮೊಗÀದಲ್ಲಿ ಸಂತಸ ಮೂಡಿಸುವ ರೀತಿಯಲ್ಲಿ ಆಗುತ್ತಿದ್ದು, ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯಾಹ್ನ ಬೀಜ ಬಿತ್ತನೆಗಾಗುವಷ್ಟು ಧಾರಾಕಾರ ಮಳೆಯಾಗಿರುತ್ತದೆ.
ಪಟ್ಟಣದಲ್ಲಿ ಹಲವು ವರ್ಷಗಳ ನಂತರ ಆಲಿಕಲ್ಲು ಸಹಿತ ಮಳೆಯಾಗಿದ್ದು, ಜನತೆ ಆಲಿಕಲ್ಲನ್ನು ನೋಡಲು, ಹಾಯ್ದುಕೊಳ್ಳಲು ಮುಂದಾಗಿದ್ದು ರೋಚಕವಾಗಿತ್ತು.
ಮಳೆಗಾಳಿ ಆರ್ಭಟಕ್ಕೆ ಭೈರಾಪುರ ಬಳಿ ಮೂರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕಡಮಲಕುಂಟೆ ಗ್ರಾಮದ ರೈತ ಮಹಿಳೆ ಲಕ್ಷಮ್ಮ ಕೋಂ ಹನುಮಂತರಾಯಪ್ಪರವರ ಜಮೀನಿನಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2018-19 ನೆ ಸಾಲಿನಲ್ಲಿ ನಿರ್ಮಿಸಿದ್ದ ಪಾಲಿಹೌಸ್ನ ಕಳಪೆ ಕಾಮಗಾರಿ ಬಯಲಾಗಿದೆ. ರೈತರಿಗೆ ಗುತ್ತಿಗೆದಾರರು ಯಾವುದೇ ಮಾಹಿತಿ ನೀಡದೆ ಜಮೀನಿನ ತಗ್ಗು ಪ್ರದೇಶದಲ್ಲಿ ಘಟಕ ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ವೇಳೆ ಯಾವುದೇ ಗುಣಮಟ್ಟ ಕಾಪಾಡದ ಹಿನ್ನೆಲೆಯಲ್ಲಿ ಮ¼ಗಾಳಿಗೆ ಘಟಕ ಸಂಪೂರ್ಣವಾಗಿ ನೆಲಕ್ಕೆ ಉರುಳಿ ಬಿದ್ದಿದೆ.
ಘಟಕದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳೆದಿದ್ದ ಟೊಮ್ಯಾಟೊ ಬೆಳೆಯೂ ಕೂಡ ನಾಶವಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಸೂಕ್ತ ಪರಿಹಾರ ಕೊಡಿಸಬೇಕೆಂದು ರೈತ ಮಹಿಳೆ ಲಕ್ಷ್ಮಮ್ಮ ಕಣ್ಣೀರು ಹಾಕಿ ನೋವು ತೋಡಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ