ಹೊಸದುರ್ಗ:
ಕಾಳಿ ನದಿಯಿಂದ ಮಲಪ್ರಭಾ ನದಿಗೆ (ಅಮೃತ ಧಾರೆ ಯೋಜನೆ) ಹಾಗೂ ಕೃಷ್ಣಾ ನದಿಯಿಂದ ಘಟಪ್ರಭಾ ನದಿ (ಬಸವ ಧಾರೆ ಯೋಜನೆ) ಜೋಡಣೆ ವಿಚಾರವಾಗಿ ನಿರಾಣಿ ವರದಿ ಅನುಷ್ಠಾನ ಮಾಡುವಂತೆ ಮನವರಿಕೆ ಮಾಡಲು ಇಂದು ವಿವಿಧ ಶ್ರೀಗಳು ಪ್ರಧಾನಿ ಮೋದಿ ಹಾಗೂ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದ್ದಾರೆ.
ಉತ್ತರ ಕರ್ನಾಟಕದ ಹಾಗೂ ದಲಿತ ಹಿಂದುಳಿದ ಮಠಾಧೀಶರ ಒಕ್ಕೂಟದ ಪರವಾಗಿ ಹೊಸದುರ್ಗದ ಶ್ರೀ ಜಗದ್ಗುರು, ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ಶಾಂತವೀರ ಮಹಾಸ್ವಾಮೀಜ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದಪುರಿ ಸ್ವಾಮೀಜಿ , ಉಪ್ಪಾರ ಭಗೀರಥ ಪೀಠದ ಜಗದ್ಗುರು ಶ್ರೀ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಭೋವಿ ಪೀಠದ ಜಗದ್ಗುರು ಶ್ರೀ ಇಮ್ಮಡಿಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಗುರು ಪೀಠದ ಜಗದ್ಗುರು ಶ್ರೀ ಬಸವಮಾಚಿದೇವ ಸ್ವಾಮೀಜಿಯವರ ನಿಯೋಗವು ಬುಧವಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ತೆರಳಿದ್ದರು.
ಶಾಸಕ ಮುರುಗೇಶ್ ನಿರಾಣಿಯವರ ಮನವಿ ಮೇರೆಗೆ ವಿವಿಧ ಸಮುದಾಯದ ಜಗದ್ಗುರುಗಳು ಉತ್ತರ ಕರ್ನಾಟಕದ ನೀರಾವರಿಗಾಗಿ ಒತ್ತಾಯಿಸುತ್ತಿರುವುದು ರೈತರಿಗೆ ಹೊಸ ಶಕ್ತಿ ಬಂದಂತಾಗಿದೆ ಎಂದು ಮಹದಾಯಿ ಕಳಸ ಬಂಡೂರಿ ರೈತ ಮುಖಂಡರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಅಮೃತ ಇಜೇರಿ ಸಂತಸ ವ್ಯಕ್ತಪಡಿಸಿ ಜಗದ್ಗುರುಗಳನ್ನು ಹಸಿರು ಶಾಲು ಹೊದಿಸಿ ಬೀಳ್ಕೊಟ್ಟರು. ಇದೇ ವೇಳೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
