ತುರುವೇಕೆರೆ
ಮಾಧ್ಯಮ, ರಾಜಕಾರಣ ಇಂದು ಸಂಪೂರ್ಣ ಹಾಳಾಗಿ ಯುವಮಕ್ಕಳ ಮನಸ್ಸಿನಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಲಾರದ ಸ್ಥಿತಿಯಲ್ಲಿ ವಿಜೃಂಭಿಸುತ್ತಿವೆ ಎಂದು ಬೆಂಗಳೂರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ತಾಲ್ಲೂಕಿನ ದಬ್ಬೇಘಟ್ಟದ ಸರ್ಕಾರಿ ಪ್ರೌಢಶಾಲೆ, ಕರ್ನಾಟಕ ಗಾಂಧಿ ಸ್ಮಾರಕನಿಧಿ ಬೆಂಗಳೂರು, ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ಸಂಘ ಹಾಗೂ ದಿಡಗ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ಗಳ ವತಿಯಿಂದ ಬಾ-ಬಾಪು 150ನೇ ಜನ್ಮ ವರ್ಷಾಚರಣೆ ಅಂಗವಾಗಿ ದಬ್ಬೇಘಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಮಾತನಾಡಿದರು.
ಟಿಆರ್ಪಿ ಹಿಂದೆ ಬಿದ್ದಿರುವ ಮಾಧ್ಯಮಗಳು ಮಕ್ಕಳ ಮನಸ್ಸಿನಲ್ಲಿ ಭಯ, ಆತಂಕ, ಕ್ರೌರ್ಯ ಮೊದಲಾದ ನಕಾರಾತ್ಮಕ ಆಲೋಚನೆಗಳನ್ನು ತುಂಬುತ್ತಾ ಸಾಮಾಜಿಕ ಹೊಣೆಗಾರಿಕೆಯನ್ನು ಕಳೆದುಕೊಂಡಿವೆ. ಟಿಆರ್ಪಿಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ಇದೆಯೇ ಎಂದು ಪ್ರಶ್ನಿಸಿದರು.
ಇಂದಿನ ರಾಜಕಾರಣ ಹದಗೆಟ್ಟು ಹೋಗಿದೆ. ಗಾಂಧೀಜಿಯನ್ನು ಕೊಂದ ವ್ಯಕ್ತಿಯನ್ನು ‘ಮಹಾತ್ಮ’ ಎಂದು ಸಾಕಷ್ಟು ವಿಜೃಂಭಿಸಲಾಗುತ್ತಿದೆ. ಹೀಗಿರುವಾಗಲೂ ದೇಶದ ಯಾವ ನ್ಯಾಯಾಲಯಗಳೂ ಈ ಬಗ್ಗೆ ಚಕಾರವೆತ್ತದೆ ಮೌನಕ್ಕೆ ಶರಣಾಗಿರುವುದು ಅಂತಹ ವಿಕೃತ ಆಲೋಚನೆಗಳನ್ನು ಹೊರ ಹಾಕುವ ವ್ಯಕ್ತಿಗಳನ್ನು ಗೆಲ್ಲಿಸಿದ ಜನರ ಮನಸ್ಥಿತಿ ಏನಾಗಿದೆ. ದೊಡ್ಡ ಚೇತನವನ್ನು ಅಪಮಾನಿಸುತ್ತಿರುವ ಹೊತ್ತಿನಲ್ಲಿ ನಾವೆಲ್ಲಾ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಗಾಂಧಿ ಕೇವಲ ಭಾರತಕ್ಕಷ್ಟೆ ಪ್ರಧಾನರಲ್ಲ. ಇಡೀ ಜಗತ್ತಿಗೆ ಅನಿವಾರ್ಯವಾದ ಅನಘ್ರ್ಯ. ಗಾಂಧಿ ಕಂಡದ್ದು ಬಡತನ, ಅಹಿಂಸೆ, ಸತ್ಯ, ಸಮಾನತೆ, ಸ್ವಾತಂತ್ರ್ಯ ಧೀನ, ದುರ್ಬಲರ ಇಂಡಿಯಾವನ್ನು ಅಂತಹ ವ್ಯಕ್ತಿಯ ವಿಚಾರಗಳ ಬಗ್ಗೆ ವಿವೇಚನೆಯಾಗದ ಹೊರತು ಭಾರತ ಸ್ವಾತಂತ್ರ್ಯವಾಗಲಾರದು. ಅಖಂಡ ಭಾರತದ ಜೊತೆಗೆ ಉಳಿದ ಖಂಡಗಳ ಜನರ ಬದುಕಿನ ನಾಯಕನಾಗಿ ಸ್ವೀಕೃತನಾದವನು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ.ಪಿ.ಕೃಷ್ಣ ಮಾತನಾಡಿ, ಗಾಂಧಿಜಿಯನ್ನು ಕೇವಲ ಪುಸ್ತಕ, ಸಿಡಿಗಳಿಗೆ ಕಟ್ಟಿಹಾಕಬಾರದು. ಅವರನ್ನು ನಿರಂತರ ಓದುವ, ಜೀವಂತವಾಗಿಸುವ ಕೆಲಸವಾಗಬೇಕು. ಏಕೆಂದರೆ ಗಾಂಧಿಬಿಟ್ಟು ಭಾರತವಿಲ್ಲ, ಭಾರತ ಬಿಟ್ಟು ಗಾಂಧಿಯಿಲ್ಲ ಎಂಬ ಅಂಶ ಸಾರ್ವಕಾಲಿಕ ಸತ್ಯ ಎಂದರು.
ಕರ್ನಾಟಕ ಗಾಂಧಿ ಸ್ಮಾರಕನಿಧಿ ಗೌರವ ಕಾರ್ಯದರ್ಶಿ ಇಂದಿರಾಕೃಷ್ಣಪ್ಪ ಮಾತನಾಡಿ, ಗಾಂಧಿ ಮತ್ತು ಅಂಬೇಡ್ಕರ್ ಅವರ ಚಿಂತನಧಾರೆಗಳ ದಾರಿಯಲ್ಲೇ ನಾವು ಸಾಗಬೇಕು. ಏಕೆಂದರೆ ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ತೋರಿಸಿಕೊಟ್ಟವರು ಎಂದರು.
ಪ್ರೊ.ಶಿವರಾಜ್ , ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಯ್ಯ ಮಾತನಾಡಿದರು. ಇದೇ ವೇಳೆ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು, ಗಾಂಧಿಸ್ಮಾರಕ ನಿಧಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಿಸಿದರು.
ಸಮಾರಂಭದಲ್ಲಿ ಬೆಂಗಳೂರು ಕಸಾಪ ಅಧ್ಯಕ್ಷ ಪುಟ್ಟೇಗೌಡ, ಅತಿಥಿಗಳಾದ ಪುಟ್ಟರಾಜು, ಕೆ.ಜಿ.ಶ್ರೀನಿವಾಸ್, ಕನ್ನಡ ಜಿಲ್ಲಾ ವಿಷಯ ಪರಿವೀಕ್ಷಕ ಗಿರೀಶ್ ಬಿಆರ್ಸಿ ವಸಂತ್ಕುಮಾರ್, ಮುಖ್ಯ ಶಿಕ್ಷಕ ಟಿ.ಮಂಜುನಾಥ್, ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಎಲ್.ಮಂಜೇಗೌಡ ಮಕ್ಕಳು, ಪೋಷಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
