ಬೆಂಗಳೂರು
ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಮೌಲ್ಯಗಳು ನಶಿಸುತ್ತಿವೆ. ಮಾಧ್ಯಮ ಕ್ಷೇತ್ರ ಮಲಿನವಾದರೆ ಪ್ರಜಾಪ್ರಭುತ್ವ ಮಲಿನವಾಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಇಂದಿಲ್ಲಿ ಕಳವಳ ವ್ಯಕ್ತಪಡಿಸಿದರು.
ಇನ್ನು ಟಿ.ವಿ ವಾಹಿನಿಗಳು ತಾವೇ ದುಡಿದು, ತಾವೇ ತಿನ್ನುವ ಪರಿಸ್ಥಿತಿಗೆ ಸಿಲುಕಿವೆ.. ಅದಲ್ಲೂ ಕೆಲ ವಾಹಿನಿಗಳು ಅಧೋಗತಿಗಿಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಕುರಿತ “ಸಿದ್ದಹಸ್ತ” ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ಅವರು, ಕೆಲವರಿಗೆ ಖುರ್ಚಿಯಿಂದ ಹೆಸರು ಬರುತ್ತದೆ. ಆದರೆ ಸಿದ್ದರಾಜು ಅವರಿಂದ ಅವರ ಪಿಟಿಐ ಸಂಸ್ಥೆಗೆ ಹೆಸರು ಬಂದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಉತ್ತಮ ಕೆಲಗಳು ಜಾರಿಗೊಳ್ಳಲು ಸಿದ್ದರಾಜು ಸಹ ಹಲವಾರು ಸಲಹೆಗಳನ್ನು ನೀಡಿದ್ದರು ಎಂದು ಸ್ಮರಿಸಿಕೊಂಡರು.
ಕೆಪಿಎಸ್ಸಿ ಸದಸ್ಯ ಡಾ ಎಚ್. ರವಿಕುಮಾರ್ ಮಾತನಾಡಿ, ಹಿಂದಿನ ಪತ್ರಿಕೋದ್ಯಮ ಗಟ್ಟಿಯಾಗಿತ್ತು. ಮುದ್ರಣ ಮಾಧ್ಯಮದ ಒಂದೊಂದು ಶಬ್ದ ಕೂಡ ಮಹತ್ವ ಪಡೆಯುತ್ತಿತ್ತು. ಇಂದು ಮಾಧ್ಯಮ ಕ್ಷೇತ್ರ ತನ್ನ ಹಿಡಿತ ಕಳೆದುಕೊಂಡಿದೆ ಎಂದರು.
ಅಭಿನಂದನಾ ನುಡಿಗಳನ್ನಾಡಿದ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಎಚ್. ಕಾಂತರಾಜ್, ಸಿದ್ದರಾಜು ಪತ್ರಿಕೋದ್ಯಮ ಪದವಿ ಪಡೆಯದೆ, ಪದವಿ ಪಡೆದವರಿಗಿಂತ ಅತಿ ಹೆಚ್ಚು ಸಾಧನೆ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಂದ ಬಂದು ಇಂಗ್ಲಿಷ್ ಭಾಷಾ ಪತ್ರಿಕೋದ್ಯಮದಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/06/hmrevanna-19-1463658860-02-1509602900-1517635973.jpg)