ದಾವಣಗೆರೆ:
ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶಿಸಿ, ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಹಾಗೂ ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು ಆಗ್ರಹಿಸಿ, ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಂಘಟನೆಯ ಪದಾಧಿಕಾರಿಗಳು, ಜಲ ವಿವಾದ ಬಗೆಹರಿಸದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ, ಎಸಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷ ಎಲ್.ಸಿ.ನಿಖಿಲ್, ಮೇಕೆದಾಟು ಅಣೆಕಟ್ಟು ಯೋಜನೆ ಕಳೆದ ಹಲವು ವರ್ಷಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸುಮಾರು 5900 ಕೋಟಿ ವೆಚ್ಚದ ಈ ಬೃಹತ್ ಯೋಜನೆಗೆ ರಾಜ್ಯ ಸರ್ಕಾರವು ಸಾಕಷ್ಟು ಸಂಕಷ್ಟಗಳನ್ನು ಹಂತ, ಹಂತವಾಗಿ ಪರಿಹರಿಸಿಕೊಂಡು, ಮುನ್ನಡೆಯುತ್ತಿದೆ. ಕೇಂದ್ರ ಜಲ ಆಯೋಗದ ಅನುಮತಿಯನ್ನೂ ಪಡೆದಿದೆ. ಆದರೆ, ನೆರೆ ರಾಜ್ಯಗಳ ತಕರಾರಿನಿಂದ ಈ ಯೋಜನೆ ಅನುಷ್ಠಾನವಾಗುತ್ತಿಲ್ಲ. ಅದೇರೀತಿ ಉತ್ತರ ಕರ್ನಾಟಕದ ಬಹು ದಶಕಗಳಿಂದ ಕಳಾಸಾ ಬಂಡೂರಿ ಮಹದಾಯಿ ಯೋಜನೆಯೂ ನೆನೆಗುದಿಗೆ ಬಿದ್ದಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಈ ಯಾವ ಸಮಸ್ಯೆಗಳನ್ನು ಸಹ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವ ಕಾರ್ಯವೂ ಸಾಗುತ್ತಿದೆ. ಆದರೆ, ಯೋಜನೆಯಿಂದಾಗಿ ತಮಿಳುನಾಡು, ಗೋವಾ ರಾಜ್ಯಗಳಿಗೆ ಯಾವುದೇ ನಯಾಪೈಸೆಯಷ್ಟು ನಷ್ಟವಾಗುವುದಿಲ್ಲ. ಆದರೂ, ಕಳೆದ 2 ದಶಕಗಳಲ್ಲಿ ಕಾವೇರಿ ನೀರು ಸುಮಾರು 50-60 ಟಿಎಂಸಿ ನೀರು ತಮಿಳುನಾಡು ಮಾರ್ಗವಾಗಿ ಹರಿದು, ವ್ಯರ್ಥವಾಗಿ ಬಂಗಾಳ ಕೊಲ್ಲಿ ಸೇರುತ್ತಿರುವ ನೀರನ್ನು ಹಳೆ ಮೈಸೂರು ಭಾಗದ ನೀರಾವರಿಗೆ, ವಿದ್ಯುತ್ ಉತ್ಪಾದನೆ ಮಾಡಬೇಕಾದರೆ ಮೇಕೆದಾಟು ಯೋಜನೆ ಅತ್ಯವಶ್ಯವಾಗಿದೆ.
ಬೆಂಗಳೂರು, ಸುತ್ತಮುತ್ತಲ ತಾಲೂಕು, ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಹಾಗೂ ತಮಿಳುನಾಡು ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣ 2007ರ ಅಂತಿಮ ಆದೇಶದ ಸಮತೋಲನಾ ಜಲಾಶಯ(ಕುಡಿಯುವ ನೀರಿನ)ದ ನೀರಿನ ಯೋಜನೆ ಕೈಗೊಳ್ಳಲು ಕರ್ನಾಟಕ ರಾಜ್ಯಕ್ಕೆ ಕಾವೇರಿ ನ್ಯಾಯಾಧೀಕರಣ 2007ರ ಅಂತಿಮ ತೀರ್ಪಿನ ವರದಿಯ ಕ್ಲಾಸ್ 12ರ ಪ್ರಕಾರ ಅವಕಾಶವಿದೆ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣವೇ ಮಧ್ಯ ಪ್ರವೇಶ ಮಾಡಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಹಕರಿಸಬೇಕೆಂದು ಆಗ್ರಹಿಸಿದರು.
ಇನ್ನೂ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾಗಿರುವ ಕಳಸಾ ಬಂಡೂರಿ ಮಹಾದಾಯಿ ಯೋಜನೆಯೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಅನಗತ್ಯ ತಕರಾರಿನಿಂದ ನೆನೆಗುದಿಗೆ ಬಿದ್ದಿದೆ. ಆದ್ದರಿಂದ ಕೇಂದ್ರ ಮಧ್ಯ ಪ್ರವೇಶಿಸಿ, ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲಿಲ ಸಂಘಟನೆ ಮುಖಂಡರಾದ ಎಸ್.ಗೋವಿಂದ, ಸೈಯದ್ ಅಜಂ, ಸೋಮಶೇಖರ, ಹರೀಶ, ಮಂಜುನಾಥ ಪೈಲ್ವಾನ್, ಉದಯಕುಮಾರ, ಅನಿಲಕುಮಾರ, ನಂದೀಶ, ಸುನಿಲ್, ಎಲ್.ಸಿ.ಮಹಾಂತೇಶ, ರಾಘು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
