ಬೆಳಗಾವಿ
ಸಚಿವ ರಮೇಶ್ ಜಾರಕಿಹೊಳಿ ನಡೆಗೆ ಬೆಳಗಾವಿ ಜಿಲ್ಲೆಯ ಶಾಸಕರು ಹಾಗೂ ಅವರ ಕುಟುಂಬದ ಸದಸ್ಯರು ತೀವ್ರ ಅಸಮಾಧಾನಗೊಂಡಿದ್ದಾರೆ.
ರಮೇಶ್ ತಮ್ಮ ವೈಯಕ್ತಿಕ ವಿಚಾರವನ್ನು ತಂದು ಪಕ್ಷಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಇದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಕಿರಿಕಿರಿಯಾಗುತ್ತಿದೆ. ಬೆಳಗಾವಿಯಲ್ಲಿಯೇ ಸಚಿವ ಸಂಪುಟ ಸಭೆ ಹಾಗೂ ಸಿಎಲ್ಪಿಗೆ ಬರುವುದಿಲ್ಲ. ಬೇಕಾದರೆ ಪಕ್ಷ ಬಿಟ್ಟು ಹೋಗಲಿ ಎಂಬ ಅಸಮಾಧಾನವನ್ನು ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಶಾಸಕರು ವ್ಯಕ್ತಪಡಿಸುತ್ತಾರೆ.
ರಮೇಶ್ ಜಾರಕಿಹೊಳಿಗೆ ಸಚಿವ ಡಿ.ಕೆ. ಶಿವಕುಮಾರ್ ಜತೆ ಅಸಮಾಧಾನ ಇದೆ. ಆದ್ದರಿಂದಲೇ ಅವರು ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಶಾಸಕರ ಆಕ್ರೋಶ. ವೈಯಕ್ತಿಕ ವಿಚಾರಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಬಾರದು. ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕೆಂದು ಅನೇಕ ಶಾಸಕರು ಆಗ್ರಹಿಸಿದರು.
ಕುಟುಂಬದಲ್ಲೂ ಅತೃಪ್ತಿ:
ರಮೇಶ್ ಜಾರಕಿಹೊಳಿ ನಡೆಗೆ ಅವರ ಕುಟುಂಬದಲ್ಲೂ ಅತೃಪ್ತಿ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಟ್ಟು ಸಚಿವ ಸ್ಥಾನ ನೀಡಿದೆ. ಪಕ್ಷಕ್ಕೆ ಗೌರವ ತರುವಂತೆ ನಡೆದುಕೊಳ್ಳಬೇಕು ಎಂದು ಅವರ ಸಹೋದರರೆಲ್ಲ ತಿಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ನಡೆದುಕೊಳ್ಳದಿರುವಂತೆಯೂ ಹೇಳಿದ್ದಾರೆ. ಆದರೆ ರಮೇಶ್ ಯಾರ ಮಾತನ್ನು ಕೇಳುತ್ತಿಲ್ಲ ಎಂದು ಅವರ ಕುಟುಂಬದ ಮೂಲಗಳು ಹೇಳುತ್ತವೆ.
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಬೆಳಗ್ಗೆ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ನಾಗೇಂದ್ರ, ಸಚಿವ ಜಯಮಾಲಾ ಅವರೊಂದಿಗೆ ಖಾಸಗಿಯಾಗಿ ಚರ್ಚೆ ನಡೆಸಿದ್ದಾರೆ. ಸಂಪುಟ ಸೇರ್ಪಡೆ ಮತ್ತು ಸಂಪುಟದಿಂದ ಕೈಬಿಡುವ ವಿಚಾರ ಕಾಂಗ್ರೆಸ್ನಲ್ಲಿ ಚರ್ಚೆ ನಡೆಯುತ್ತಿರುವಾಗ ಈ ಭೇಟಿ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
