ಮೋದಿ ಭಾಷಣಕ್ಕೆ ಜನ ಮರುಳಾಗಲ್ಲ ಬಿಜೆಪಿ ಅಧಿಕಾರಕ್ಕೆ ಬರಲ್ಲ:-ಶಿವಶಂಕರರೆಡ್ಡಿ

ಹಗರಿಬೊಮ್ಮನಹಳ್ಳಿ

      ದೇಶದಲ್ಲಿ ನಿರುದ್ಯೋಗ ಸಮಸ್ಯೆ ದುಪ್ಪಟ್ಟಾಗಿದೆ, ಬಡತನ ಮಿತಿಮೀರಿದೆ, ಇನ್ನು ಆರ್ಥಿಕ ಪರಿಸ್ಥಿತಿಯಂತು ಸಂಪೂರ್ಣವಾಗಿ ನೆಲಕಚ್ಚಿದೆ. ಜನಕ್ಕೆ ದಿಕ್ಕು ತಪ್ಪಿಸುವ ರೀತಿಯಲ್ಲಿ ಮೋದಿ ನಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಬಾರಿ ಮೋದಿ ಭಾಷಣಕ್ಕೆ ಜನ ಮರುಳಾಗಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದರು.

      ಪಟ್ಟಣದಲ್ಲಿ ಶಾಸಕ ಭೀಮಾನಾಯ್ಕರ ಜನಸಂಪರ್ಕ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದ ಯಾವ ರೈತರಿಗೂ ನಯಾಪೈಸೆ ಬಂದಿಲ್ಲ ಕೇವಲ ಬೆರಳೆಣಿಕೆಯ ಶ್ರೀಮಂತರ ಸಲುವಾಗಿ ಪ್ರಧಾನಿ ಮೋದಿ ರಾಜಕಾರಣ ಮಾಡುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿ ಸಾಮರಸ್ಯ, ಅದಗೆಡಿಸುವ ಹುನ್ನಾರ, ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಕೋಮುವಾದಿ ಬಿಜೆಪಿಯಿಂದ ದೇಶಕ್ಕೆ ಏನೂ ಉಪಯೋಗವಿಲ್ಲ. ಮೋದಿಯವರ 5 ವರ್ಷ ಅಧಿಕಾರ ಅವಧಿಯಲ್ಲಿ ನಮ್ಮ ರಾಜ್ಯಕ್ಕೆ ಯಾವುದೇ ಕೆಲಸಗಳಾಗಿಲ್ಲ.

      ರಾಜ್ಯದಲ್ಲಿರುವ ನಮ್ಮ ಮೈತ್ರಿ ಸರ್ಕಾರದಿಂದ ಜನೋಪಯೋಗಿ ಹಾಗೂ ರೈತರ ಸಾಲಮನ್ನಾ ಹೀಗೆ ಹತ್ತು ಹಲವಾರು ಜನಪರ ಕೆಲಸಗಳು ಹಾಗೂ ಮಹತ್ತರ ಯೋಜನೆಗಳು ಜಾರಿಯಾಗಿವೆ ಎಂಬುದನ್ನು ಹಳ್ಳಿಯ ಒಬ್ಬ ಶ್ರೀಸಾಮಾನ್ಯ ಬೇಕಾದರೂಹೇಳುತ್ತಾನೆ. ನಮ್ಮ ಮೈತ್ರಿ ಸರ್ಕಾರ ಜನಪರವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ಕೇಂದ್ರದಿಂದ ರೈತರ ಖಾತೆಗೆ 6 ಸಾವಿರ ರೂಪಾಯಿ ಜಮೆ ಮಾಡುತ್ತೇನೆ ಎನ್ನುವ ಮೋದಿಯವರು ಎಲ್ಲಾ ದಾಖಲೆಗಳನ್ನು ನೀಡಿದ್ದರೂ ರಾಜ್ಯ ಸರ್ಕಾರ ದಾಖಲೆ ನೀಡಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಮೋದಿಯವರ ಆರೋಪಯದಲ್ಲಿ ಯಾವುದೇ ಹುರುಳಿಲ್ಲ.

       ಜಿಎಸ್‍ಟಿಯಲ್ಲಿ ಬಹಳಷ್ಟು ತೊಂದರೆಗಳಿದ್ದು ಬಡವರು ಹಾಗೂ ರೈತರಿಗೆ ಅನುಕೂಲವಾಗುವಂತೆ ಇದನ್ನು ಸರಳೀಕರಣ ಗೊಳಿಸುವುದೇ ಕಾಂಗ್ರೆಸ್‍ನ ಉದ್ದೇಶವಾಗಿದೆ. ಅಲ್ಲದೇ ನಾವು ಮಹಿಳೆಯರಿಗೆ ಶೇಕಡ 30 ಮೀಸಲಾತಿ ತರುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದೇವೆ. ಕಾಂಗ್ರೆಸ್‍ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಆದ್ದರಿಂದ ಕಾಂಗ್ರೆಸ್‍ನ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಉಗ್ರಪ್ಪನವರನ್ನು ಮತ್ತೊಮ್ಮೆ ಎಲ್ಲರೂ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕಾಗಿದೆ ಎಂದರು.

        ಶಾಸಕ ಭಿಮಾನಾಯ್ಕ ಮಾತನಾಡಿ ಈಗ ಸರ್ಜಿಕಲ್ ಸ್ಟ್ರೈಕ್‍ಬಗ್ಗೆ ಮಾತನಾಡುವ ಬಿಜೆಪಿ ಮೋದಿ ಹುಟ್ಟುವ ಮೊದಲೇ 1948ರಲ್ಲೇ ಕಾಂಗ್ರೆಸ್ ಸರ್ಜಿಕಲ್ ಸ್ಟೈಕ್ ಮಾಡಿತ್ತು ಎಂಬುದನ್ನು ಮರೆತಂತಿದೆ. ದಿನನಿತ್ಯದ ಶ್ರೀಸಾಮಾನ್ಯನ ಬಳಕೆಯ ವಸ್ತುಗಳ ಬೆಲೆ ಮೋದಿ ಆಡಳಿತ ಅವಧಿಯಲ್ಲಿ ಗಗನಕ್ಕೇರಿದೆ ಇನ್ನೆಲ್ಲಿಂದ ತಾನೆ ಅಚ್ಚೇದಿನ್ ಬರಲು ಸಾಧ್ಯ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಆದ್ದರಿಂದ ಮಾತೆತ್ತಿದರೆ ಸಂವಿಧಾನ ತೆಗಿತೀವಿ ಎನ್ನುತ್ತಿದ್ದಾರೆ.

         ತೆಗೆಯಲು ಅಷ್ಟು ಸುಲಭವಾಗಿ ನಾವು ಬಿಟ್ಟುಬಿಡುತ್ತೇವೇ 15 ವರ್ಷಗಳಲ್ಲಿ ಈ ಭಾಗದಿಂದ 3 ಬಿಜೆಪಿ ಸಂಸದರು ಆಗಿ ಹೋಗಿದ್ದಾರೆ. ಅವರಿಂದ ನಮ್ಮ ಜಿಲ್ಲೆಗೆ ಏನು ಒಳ್ಳೆಯದಾಗಿದೆ ಅಭಿವೃದ್ಧಿಯಾಗಿದೆ ಯೋಧರ ಸಾವಿನಲ್ಲೂ ರಾಜಕೀಯ ಮಾಡುವ ಬಿಜೆಪಿಗೆ ಮತದಾರ ತಕ್ಕ ಉತ್ತರ ಕೊಡಲಿದ್ದಾನೆ. 545 ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖನೋಡಿ ಓಟು ಹಾಕಿ ಎನ್ನುತ್ತಿದ್ದಾರೆ ಅಂದರೆ ಇವರಿಗೆ ಸ್ವಂತಹ ತಮ್ಮದೇ ಆದ ಹೇಳಿಕೊಳ್ಳುವಂತಹ ಮುಖವಿಲ್ಲವೇ? ಬಿಜೆಪಿಯಿಂದ ರೈತರಿಗೂ ಹಾಗೂ ಬಡವರಿಗು ಏನೂ ಒಳ್ಳೆಯದಾಗಿಲ್ಲ.

        ರಾಜ್ಯದಲ್ಲಿ ಈ ಬಾರಿ 18 ರಿಂದ 20 ಸೀಟುಗಳು ಮೈತ್ರಿ ಸರ್ಕಾರಕ್ಕೆ ಬರಲಿವೆ ಆದ್ದರಿಂದ ರಾಹುಲ್‍ಗಾಂಧಿಯವರ ಕೈ ಬಲಪಡಿಸಲು ನಮ್ಮ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನವರನ್ನು ಗೆಲ್ಲಿಸಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ತಾ.ಪಂ ಸ್ಥಾಯಿಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ಸದಸ್ಯ ಅನಿಲ್‍ಕುಮಾರ್ ಜಾಣಾ, ಒಬಿಸಿ ಅಧ್ಯಕ್ಷ ಹೆಚ್.ಎಂ.ನೂರಿ, ಜೆಡಿಎಸ್ ಅಧ್ಯಕ್ಷ ಬನ್ನಿಗೋಳ ವೆಂಕಣ್ಣ, ಪುರಸಭೆ ಸದಸ್ಯರಾದ, ತಳವಾರ ರಾಘವೇಂದ್ರ, ಜೋಗಿ ಹನುಮಂತ, ಭರತ್, ಅಲ್ಲಾಭಕ್ಷಿ, ಡಿಶ್. ಮಂಜುನಾಥ, ಬಾಲಕೃಷ್ಣ ಬಾಬು, ಉಪ್ಪಾರ ಬಾಲು, ಮುಖಂಡರಾದ ಅಕ್ಕಿ ತೋಟೇಶ್, ಹೆಗ್ಡಾಳ್ ರಾಮಣ್ಣ, ಮುಟುಗನಹಳ್ಳಿ ಕೊಟ್ರೇಶ್, ಕನ್ನಿಹಳ್ಳಿ ಚಂದ್ರು, ಮೈಲಾರಪ್ಪ, ಪವಾಡಿ ಹನುಮಂತಪ್ಪ, ಇರ್ಫಾನ್, ಜಂದಿಸಾಬ್, ಕುಲ್ಮಿ ರೆಹಮಾನ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link