ಕೊಟ್ಟೂರು
ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಜಯಕುಮಾರ ಪಾಟೀಲ್, ತನ್ನ ಅವಧಿಯಲ್ಲಿ ಸಾಕಷ್ಟು ಹಣ ಹಾಗೂ ಸೌಕರ್ಯಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಕನ್ನನಾಯಕಟ್ಟೆ ಗ್ರಾಮದ ಸದಸ್ಯರಾದ ಪಿ.ಹಾಲನಗೌಡ ಮತ್ತು ಜಿ.ರಾಜಪ್ಪ ಆರೋಪಿಸಿದ್ದಾರೆ.
ಈ ಕುರಿತು ಪತ್ರಕಾ ಹೇಳಿಕೆ ನೀಡಿರುವ ಅವರು, ಕ್ಷೇತ್ರದ ಶಾಸಕರು ಗ್ರಾಮದ ಅಭಿವೃದ್ಧಿಗಾಗಿ ಒಂದು ಕೋಟಿ ರೂ. ಅನುದಾನ ನೀಡಿದ್ದರೂ, ರಸ್ತೆ ಅಭಿವೃದ್ದಿಗೆ ಶಾಸಕರು ಸ್ಪಂದಿಸಿಲ್ಲ ಎಂದು ದೂರಿರುವುದು ಸತ್ಯಕ್ಕೆ ದೂರವಾಗಿದೆ.
ತಮ್ಮ ಅವಧಿಯಲ್ಲಿ ಸಾಕಷ್ಟು ಅಧಿಕಾರ, ಹಣ ದುರುಪಯೋಗ ಮಾಡಿಕೊಂಡಿರುವ ಅವರು ನೈತಿಕತೆ ಕಳೆದುಕೊಂಡಿದ್ದಾರೆ. ಗ್ರಾಮದಲ್ಲಿ ಯಾವುದೋ ಕೃಷಿ ಹೊಂಡದ ಮಣ್ಣನ್ನು ರಸ್ತೆಗೆ ಹಾಕಿಸಿ, ಗ್ರಾಮಸ್ಥರ ಸ್ವಂತ ಖರ್ಚಿನಲ್ಲಿ ಮಾಡಿಸಿರುವುದಾಗಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.
ವಿಜಯಕುಮಾರ್ ಪಾಟೀಲ್ ಗ್ರಾ.ಪಂ. ಅಧ್ಯಕ್ಷರಾಗಿದ್ದಾಗ ಗ್ರಾಮದಲ್ಲಿ ಹಾಕಬೇಕಾಗಿದ್ದ ವಿದ್ಯುತ್ ಕಂಬಗಳನ್ನು ತನ್ನ ಹೊಲದಲ್ಲಿ ಹಾಕಿಸಿಕೊಂಡಿದ್ದರು. ಹಳೆ ಹಾಸು ಬಂಡಗಳನ್ನು ಕಿತ್ತಾಗ ಅವುಗಳನ್ನು ಹರಾಜು ಹಾಕದೇ ತನ್ನ ಹಸುಗಳ ಫಾರಂನಲ್ಲಿ ಹಾಕಿಸಿದ್ದಾರೆ.
ತಮ್ಮದೇ ಹೊಲದ ಬೋರ್ವೆಲ್ಗೆ ಗ್ರಾ.ಪಂ. ಪೈಪ್ ಲೈನ್ ಮಾಡಿಸಿಕೊಂಡು ಒಂದೂವರೆ ವರ್ಷ ಕಾಲ ಯಾರಿಗೂ ಗೊತ್ತಾಗದಂತೆ ನೀರು ಹಾಯಿಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.
2104-15ನೇ ಸಾಲಿನಲ್ಲಿ ಹರಾಳು ಗ್ರಾಮದಲ್ಲಿ ಸ್ವಚ್ಛ ಗ್ರಾಮ ಯೋಜನೆಯಡಿ ಉಳಿದಿದ್ದ 4.58ಲಕ್ಷ ರೂ.ಗಳಿಗೆ ಯಾವುದೇ ಕಾಮಗಾರಿ ನಡೆಸದೇ ಹಣವನ್ನು ಡ್ರಾ ಮಾಡಿಕೊಂಡು ಗ್ರಾ.ಪಂ.ಗೆ ದ್ರೋಹ ಎಸಗಿದ್ದಾರೆ. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಹೆಸರಿನಲ್ಲಿ ಕೊಟ್ಟೂರು ಪಿಕೆಜಿಪಿ ಬ್ಯಾಂಕ್ನಲ್ಲಿ ಸಾಲ ಪಡೆದಿರುವ ಅವರು, ಡೇರಿ ಹಾಲನ್ನು ಕೆಎಂಎಫ್ಗೆ ಹಾಕದೇ ಖಾಸಗಿ ಕಂಪನಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ. ಇವರ ಅಧಿಕಾರ ಹಾಗೂ ಹಣ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
