ಹಾವೇರಿ :
ಎಲ್ಲ ಜಾತಿ, ವರ್ಗದ ಭಕ್ತರ ಭಾವೈಕ್ಯ ಸಂಗಮದಂತಿರುವ ತಾಲ್ಲೂಕಿನ ಸುಕ್ಷೇತ್ರ ಹನುಮನಹಳ್ಳಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ವಾರ್ಷಿಕ ಜಾತ್ರೆ ದಿ, 08 ರಿಂದ ಆರಂಭ ಗೊಳ್ಳುತ್ತಿದ್ದು, ಶ್ರೀ ಮಠದ ಪ್ರಮುಖ ಆಚರಣೆಯಾಗಿರುವ ಮುಳ್ಳು ಗದ್ದುಗೆ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಶತಮಾನಗಳ ಧಾರ್ಮಿಕ ಇತಿಹಾಸ ಹೊಂದಿರುವ ಹೂವಿನ ಹಡಗಲಿ, ಸಂಕಧಾಳ ಪುಣ್ಯಕ್ಷೇತ್ರಗಳ ಸಂಸ್ಥಾನ ಮಠವಾದ ಹನುಮನಹಳ್ಳಿ ಗ್ರಾಮದ ಹಾಲೇಶ್ವರ ಮಠದ ಮುಳ್ಳುಗದ್ದುಗೆ ಉತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಾದ ಕನವಳ್ಳಿ, ಕಾಟೆನಳ್ಳಿ, ಭರಡಿ, ಕುರಗುಂದ, ಅಗಡಿ, ನುಕಪುರ, ಕಂಚರಗಟ್ಟಿ, ಕೇಂಗೊಂಡ, ಕಳ್ಳಿಹಾಳ, ತಿಮ್ಮೇನಹಳ್ಳಿ ಮುಂತಾದ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿಭಾವ ಮೆರೆಯುವ ಜಿಲ್ಲೆಯ ಪ್ರಮುಖ ಜಾತ್ರೆಯಾಗಿದೆ.
ಶ್ರೀ ಮಠದ ಸಿದ್ಧರಾಮ ಹಾಲಶಿವಯೋಗಿಗಳವರ ನೇತೃತ್ವದಲ್ಲಿ ಸ್ಥಳೀಯ ಗ್ರಾ.ಪಂ. ಆಡಳಿತ, ಗ್ರಾಮಸ್ಥರು ಸೇರಿ ತಿಂಗಳಿನಿಂದ ಜಾತ್ರೆಯ ಸಿದ್ಧತಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಂಡಿದ್ದಾರೆ. ಗ್ರಾಮದ ಸುತ್ತ ಮುತ್ತಲಿನ ಭಕ್ತಾದಿಗಳು ಜಾತ್ರೆಯ ಪ್ರತಿದಿನ ಕಾರ್ಯಕ್ರಮಗಳಲ್ಲಿ ಅನ್ನ ದಾಸೋಹ ಏರ್ಪಡಿಸಿ ಹಾಲೇಶ್ವರ ಕೃಪೆಗೆ ಪಾತ್ರರಾಗುತ್ತಾರೆ.
ಕಾರ್ಯಕ್ರಮಗಳ ವಿವರ: ಶ್ರೀ ಮಠದ ಸಿದ್ಧರಾಮ ಹಾಲಶಿವಯೋಗಿಗಳ ನೇತೃತ್ವದಲ್ಲಿ ಏಪ್ರಿಲ 8 ರಂದು ರಾತ್ರಿ 10-30ಕ್ಕೆ ಸಾಂಪ್ರದಾಯಿಕ ಮುಳ್ಳು ಗದ್ದುಗೆ ಉತ್ಸವ ಜರುಗಲಿದ್ದು, ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಬೆಳಗಿನಜಾವ ಮೂಲ ಸ್ಥಳದಲ್ಲಿ ಸಂಪನ್ನಗೊಳ್ಳಲಿದೆ. ಏಪ್ರಿಲ್ 9 ರಂದು ಸಂಜೆ 5 ಗಂಟೆಗೆ ಹಾಲಸ್ವಾಮಿ ರಥೋತ್ಸವ ಜರುಗಲಿದ್ದು, ನಂತರ ಧರ್ಮ ಸಭೆ ಜರುಗಲಿದೆ. ಮರುದಿನ 10 ರಂದು ಸಾಮೂಹಿಕ ವಿವಾಹ, ಕಡುಬಿನ ಕಾಳಗ, ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಾರ್ಗ: ಹನುಮನಹಳ್ಳಿ ಗ್ರಾಮವು ಜಿಲ್ಲಾ ಕೇಂದ್ರದಿಂದ ಪೂರ್ವಕ್ಕೆ ಸುಮಾರು 12 ಕಿ ಮೀ ದೂರವಿದ್ದು, ಹಾವೇರಿ, ಬ್ಯಾಡಗಿ, ಹೊಸರಿತ್ತಿ, ಗುತ್ತಲ ಪಟ್ಟಣಗಳಿಂದ ಬಸ್ಸಿನ ಸೌಲಭ್ಯ ಇರುತ್ತದೆ. ಗ್ರಾಮ ಒಳ್ಳೆಯ ಹವೆ, ಗಾಳಿ, ನೀರು, ಸ್ವಚ್ಛತೆಯಿಂದ ಕೂಡಿರುತ್ತದೆ. ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
