ರಾಣಿಬೆನ್ನೂರ:
ನಮ್ಮ ದೇಶದಲ್ಲಿ ಮಂದಿರಗಳಿರುವಷ್ಟು ಯಾವ ದೇಶಗಳಲ್ಲಿಯೂ ಇಲ್ಲ. ಭಾರತೀಯ ಸಂಸ್ಕತಿ ವಿಶ್ವದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಪಾಶ್ಚಿಮಾತ್ಯರು ದೇವರಿಗಿಂತ ತಮ್ಮ ದೇಹವನ್ನು ಪ್ರೀತಿಸುತ್ತಾರೆ. ಅದೇ ಭಾರತೀಯರು ದೇಹಕ್ಕಿಂತ ದೈವವನ್ನು ಪ್ರೀತಿಸುತ್ತಾರೆ ಎಂದು ಉಜ್ಜಯನಿಯ ಸಿದ್ಧಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಶನಿವಾರ ರಾತ್ರಿ ಇಲ್ಲಿನ ಶನೈಶ್ಚರ ಮಂದಿರದಲ್ಲಿ ಶನೈಶ್ಚರ ಸ್ವಾಮಿಯ ತಿಲಕ್ಷದೀಪೋತ್ಸವ ಹಾಗೂ ಮನುಕುಲಸದ್ಭಾವನಾ, 108 ಗೋವುಗಳ ಗೋಮಂಗಲ ಯಾತ್ರೆ ಮಾತೃ ಸಂಗಮ ಅಂಗವಾಗಿ ಏರ್ಪಡಿಸಲಾಗಿದ್ದ, ಧರ್ಮಸಮಾರಂಭ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಠ ಮಂದಿರಗಳು ವಿಶ್ವಾಸ, ನಂಬಿಗೆ, ಸತ್ಯ, ನ್ಯಾಯ, ನಿಷ್ಠೆಯನ್ನು ತುಂಬುವ ಶಕ್ತಿ ಕೇಂದ್ರಗಳಾಗಿವೆ ಎಂದು ನುಡಿದರು.
ಶನೇಶ್ಚರ ಸ್ವಾಮಿಯು ಧರ್ಮ, ನ್ಯಾಯ ನೀತಿಯಿಂದ ನಡೆಯುವವರಿಗೆ ಅಭಯನಾಗಿದ್ದು, ಅಧರ್ಮದಿಂದ ನಡೆವವರಿಗೆ ವಿರೋಧವಾಗಿರುವುದೇ ಆತನ ನಿಜಧರ್ಮವಾಗಿದೆ. ಪುಣ್ಯ ಕಾರ್ಯಗಳನ್ನು ಮಾಡುವವರಿಗೆ ಕಾಪಾಡುತ್ತಾನೆ. ಪಾಪ ಕಾರ್ಯಗಳನ್ನು ಮಾಡುವವರಿಗೆ ಸಂಕಷ್ಠ ನೀಡುತ್ತಾನೆ ಎಂದು ನುಡಿದರು.
ಮಂದಿರಗಳಲ್ಲಿರುವ ಕಲ್ಲು ಮೂರ್ತಿಗಳು ನಂಬಿ ಶರಣಾದರೆ ಫಲ ನೀಡುತ್ತವೆ. ನಂಬದೇ ನಡೆದುಕೊಳ್ಳುವವರಿಗೆ ಕಲ್ಲಾಗಿಯೇ ಗೋಚರಿಸುತ್ತಾನೆ. ಉದಾಹರಣೆಗೆ ಏಕಲವ್ಯನು ದ್ರೋಣಾಚಾರ್ಯರನ್ನು ತನ್ನ ಗುರುವಾಗಿ ಸ್ವೀಕರಿಸಿ ಆತನ ಮಣ್ಣಿನ ಮೂರ್ತಿಯನ್ನು ಮಾಡಿ ಆ ಮೂರ್ತಿಗೆ ಭಕ್ತಿಯಿಂದ ನಮಿಸಿ ಬಿಲ್ವಿದ್ಯೆಯನ್ನು ಕಲಿತು ಶಬ್ಧವೇಧಿ ವಿದ್ಯೆಯಿಂದ ತನಗೆ ತೊಂದರೆ ಕೊಡುವ ಕಾಣದ ಶ್ವಾನದ ಬಾಯಿಗೆ ಬಿಲ್ಲು ಬಿಟ್ಟು ಅದರ ಬೊಗಳುವಿಕೆಯನ್ನು ನಿಲ್ಲಿಸಿ ಪುನಃ ಬಿಲ್ವಿದ್ಯೆಯಲ್ಲಿ ತೊಡಗಿದನು. ಇಲ್ಲಿ ನಂಬಿದ ಕಲ್ಲು ಮೂರ್ತಿಯೂ ಸಹ ಫಲ ನೀಡುತ್ತದೆ ಎಂಬುದು ಸಾಕ್ಷಿಯಿದೆ ಎಂದು ಶ್ರೀಗಳು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಶನಿಸಿಂಗಾಪುರದ ಮಾದರಿಯಲ್ಲಿ ಇಲ್ಲಿನ ಶನೇಶ್ಚರ ಮಂದಿರವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹಾಗೂ ಸಾರ್ವಜನಿಕರ ವತಿಯಿಂದ ಶ್ರಮಿಸುವದಾಗಿ ಭರವಸೆ ನಿಡಿದರು. ಈ ಮಂದಿರವು ದೇಶದಲ್ಲಿ ಪರಿಚಯಿಸುವಂತಹ ಉತ್ತಮ ಸಾಧನೆಗಳನ್ನು ಮಾಡುವಂತಾಗಲು ಶ್ರಮಿಸೋಣ ಎಂದರು.ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಹಾಲಿ ಶಾಸಕ ಬಸವರಾಜ ಪಾಟೀಲ ಯತ್ನಾಳ ಅವರಿಗೆ ಈ ವರ್ಷದ ಮನುಕುಲ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾನಿಧ್ಯ ವಹಿಸಿದ್ದ ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹೆರೂರಿನ ನಂಜುಂಡ ಪಂಡಿತಾರಾಧ್ಯ ಶ್ರೀಗಳು, ಬಂಕಾಪುರದ ರೇವಣಸಿದ್ದೇಶ್ವರ ಶಿವಾಚಾರ್ಯ ಶ್ರೀಗಳು, ಗುರುಮಹೇಶ್ವರ ಶಿವಾಚಾರ್ಯ ಶ್ರೀಗಳು ಅಭಿನವರುದ್ರ ಚನ್ನಮಲ್ಲಕಾರ್ಜುನ ಶ್ರೀಗಳು, ಗುರುಲಿಂಗ ಶಿವಾಚಾರ್ಯ ಶ್ರೀಗಳು ಉಪಸ್ಥಿತರಿದ್ದರು.
ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನ, ಮಾಜಿ ಶಾಸಕ ಯು.ಬಿ.ಬಣಕಾರ, ಸೋಮಣ್ಣ ಬೇವಿನಮರದ, ಪ್ರಕಾಶ ಕೋಳಿವಾಡ, ಮಂಜುನಾಥ ಮಠಪತಿ, ಭೋಜರಾಜ ಕರೂದಿ,ರುಕ್ಮಿಣಿಬಾಯಿ ಸಾವುಕಾರ, ಎಸ್.ಎಸ್.ರಾಮಲಿಂಗಣ್ಣನವರ, ಬಸವರಾಜ ಸವಣೂರ, ಡಾ| ಬಸವರಾಜ ಕೇಲಗಾರ, ರವೀಂದ್ರಗೌಡ ಪಾಟೀಲ, ಇಕ್ಬಾಲ್ಸಾಬ್ ರಾಣೇಬೆನ್ನೂರ, ಪುಷ್ಪಾ ಬಾದಾಮಿ, ಮಲ್ಲಣ್ಣ ಅಂಗಡಿ, ಗಿರಿಜಾದೇವಿ ದುರ್ಗದಮಠ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
