ತುಮಕೂರು

ತುಮಕೂರು ನಗರದಲ್ಲಿರುವ ಕೋಳಿ ಅಂಗಡಿಗಳು ಮತ್ತು ಮಾಂಸದ ಅಂಗಡಿಗಳಿಂದ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪಾಲಿಕೆ ವತಿಯಿಂದಲೇ ಸಂಗ್ರಹಿಸಿ ವಿಲೇವಾರಿ ಮಾಡುವ ನಿರ್ಧಾರಕ್ಕೆ ತುಮಕೂರು ಮಹಾನಗರ ಪಾಲಿಕೆಯು ಬಂದಿದೆ.
ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರ ಅಧ್ಯಯಕ್ಷತೆಯಲ್ಲಿ ಮಂಗಳವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಏರ್ಪಟ್ಟಿದ್ದ ನಗರದ ಕೋಳಿ ಮತ್ತು ಮಾಂಸದ ಅಂಗಡಿಗಳ ಮಾಲೀಕರುಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಪ್ರಸ್ತುತ ನಗರದಲ್ಲಿ 103 ಕೋಳಿ ಅಂಗಡಿಗಳು ಮತ್ತು 36 ಮಾಂಸದ ಅಂಗಡಿಗಳು ಇದ್ದು, ಇವುಗಳಿಂದ ದಿನವೂ ಉತ್ಪತ್ತಿಗೊಳ್ಳುವ ತ್ಯಾಜ್ಯವು ಸಮರ್ಪಕವಾಗಿ ವಿಲೇವಾರಿ ಆಗದೆ, ನಗರದ ವಿವಿಧ ರಸ್ತೆ ಬದಿ ರಾಶಿಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ಈ ಸಭೆಯನ್ನು ನಡೆಸಿ ಸದರಿ ಅಂಗಡಿಗಳ ಮಾಲೀಕರೊಂದಿಗೆ ಚರ್ಚಿಸಿತು.
“ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯ ನಿರ್ವಹಣೆಗೆ ಕೆಲವು ವರ್ಷಗಳ ಹಿಂದೆ ಪಾಲಿಕೆಯು ಸಭೆ ನಡೆಸಿ ಒಂದು ವ್ಯವಸ್ಥೆಯನ್ನು ಮಾಡಿತ್ತು. ಆಗ ನಗರದಲ್ಲಿ ಸುಮಾರು 50-55 ಅಂಗಡಿಗಳಿದ್ದವು. ಆ ಸಭೆಯಲ್ಲಿ ಸದರಿ ಅಂಗಡಿಗಳವರೇ ಚರ್ಚಿಸಿ, ಓರ್ವ ವ್ಯಕ್ತಿಯು ಪ್ರತಿನಿತ್ಯ ತನ್ನದೇ ಆದ ವಾಹನದಲ್ಲಿ ತೆರಳಿ ತ್ಯಾಜ್ಯವಸ್ತುಗಳನ್ನು ಸಂಗ್ರಹಿಸುವುದೆಂದೂ, ಇದಕ್ಕಾಗಿ ಪ್ರತಿ ಅಂಗಡಿಯವರೂ ಆ ವ್ಯಕ್ತಿಗೆ ಇಂತಿಷ್ಟು ಶುಲ್ಕ ನೀಡುವುದೆಂದೂ ತೀರ್ಮಾನಿಸಲಾಗಿತ್ತು. ಆದರೆ ದಿನ ಕಳೆದಂತೆ ಅಂಗಡಿಗಳ ಸಂಖ್ಯೆ ಹೆಚ್ಚಿದೆಯಲ್ಲದೆ, ಒಂದೇ ವಾಹನದಲ್ಲಿ ಎಲ್ಲ ತ್ಯಾಜ್ಯ ಸಂಗ್ರಹ ಆ ವ್ಯಕ್ತಿಗೂ ಕಷ್ಟವಾಗಿ ಇಂದಿನ ಪರಿಸ್ಥಿತಿ ನಿರ್ಮಾಣವಾಗಿದೆ” ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಈ ಎಲ್ಲ ಸಂಗತಿಗಳನ್ನು ಪರಾಮರ್ಶಿಸಿದ ಆಯುಕ್ತ ಭೂಪಾಲನ್, ಇನ್ನು ಮುಂದೆ ಮಹಾನಗರ ಪಾಲಿಕೆ ವತಿಯಿಂದಲೇ ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡುವ ನಿರ್ಧಾರವನ್ನು ಪ್ರಕಟಿಸಿದರು. ಇದಕ್ಕಾಗಿ ಪ್ರತಿ ಅಂಗಡಿಗಳವರೂ ಪಾಲಿಕೆಗೆ ಶುಲ್ಕ ಕೊಡಬೇಕೆಂದೂ, ಸದರಿ ಶುಲ್ಕದ ಬಗ್ಗೆ ಚುನಾವಣಾ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ಬಳಿಕ ನಿರ್ಧಾರ ಕೈಗೊಳ್ಳಲಾಗುವುದೆಂದೂ ತಿಳಿಸಿದರು.
ಇದಕ್ಕೆ ಎಲ್ಲ ಅಂಗಡಿ ಮಾಲೀಕರುಗಳು ಒಪ್ಪಿಗೆ ಸೂಚಿಸಿದರು. ಸಭೆಯಲ್ಲಿ ಸುಮಾರು 90 ಜನ ಅಂಗಡಿ ಮಾಲೀಕರುಗಳು ಭಾಗವಹಿಸಿದ್ದರು. ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಮತ್ತು ಪರಿಸರ ಇಂಜಿನಿಯರ್ ಮೃತ್ಯುಂಜಯ ಅವರು ಕೋಳಿ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಆಗುತ್ತಿರುವ ಅನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








