ದಾವಣಗೆರೆ :
ಪ್ರಕೃತಿ ವಿಕೋಪಗಳನ್ನು ಸಮರ್ಪಕವಾಗಿ ನಿರ್ವಹಿಸಲಿಕ್ಕಾಗಿ, ಎಲ್ಲಾ ಇಲಾಖೆಗಳು ನಿರಂತರವಾಗಿ ಕ್ರಿಯಾ ಯೋಜನೆಗಳನ್ನು ಪರಿಷ್ಕರಣೆ ಮಾಡುವ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕುಮಾರ್ ಹನುಮಂತಪ್ಪ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾ ತರಬೇತಿ ಸಂಸ್ಥೆ, ಮತ್ತು ವಿಕೋಪ ನಿರ್ವಹಣಾ ಇಲಾಖೆ ಇವರ ಸಂಯಕ್ತಾಶ್ರಯದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಇಂದು ಏರ್ಪಡಿಸಲಾಗಿದ್ದ “ಜಿಲ್ಲಾ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆಯ ಪರಿಷ್ಕರಣೆ ಹಾಗೂ ತಯಾರಿಕೆ” ಎಂಬ ವಿಷಯದ ಕುರಿತ ಎರಡು ದಿನಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಕೋಪಗಳು ಸಂಭವಿಸಿದ ಸಂಧರ್ಭದಲ್ಲಿ ಮಾತ್ರ ವಿಕೋಪ ನಿರ್ವಹಣಾ ಕ್ರಿಯಾ ಯೋಜನೆಗಳನ್ನು ಮಾಡಲಾಗುತ್ತಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ನಿರಂತರವಾಗಿ ಯೋಜನೆಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದರು.
ಮಾನವ ನಿರ್ಮಿತ ವಿಕೋಪಗಳು ಹಾಗೂ ಪ್ರಕೃತಿಯಿಂದ ಒದಗಿ ಬರುವಂತಹ ವಿಕೋಪಗಳನ್ನು ನಾವು ಎದುರಿಸಲು ಸಮರ್ಪಕವಾದ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮೈಸೂರು ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕರಾದ ಚಂದ್ರಾನಾಯಕ್ ಮಾತನಾಡಿ, ಪ್ರತಿ ಇಲಾಖೆಗಳು ವಿಕೋಪ ನಿರ್ವಹಣೆ ಕುರಿತಂತೆ ಕ್ರಿಯಾ ಯೋಜನೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಯಾರಿಸಿಟ್ಟುಕೊಳ್ಳುವುದರ ಜೊತೆಗೆ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಹಾಕಿ ವಿಪತ್ತಿನ ಸಂಧರ್ಭದಲ್ಲಿ ಜನಸಾಮಾನ್ಯರಿಗೆ ಮಾಹಿತಿ ದೊರೆಯುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವ ಪ್ರಭು ಶರ್ಮಾ, ಜಿಲ್ಲಾ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಜಯಣ್ಣ, ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲ ದಿವಾಕರ್ ರೆಡ್ಡಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
