ದಾವಣಗೆರೆ:
ಪಂಚಮಸಾಲಿ ಸಮಾಜವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜಕೀಯವಾಗಿ ಕಡೆಗಣಿಸಿರುವ ಬಗ್ಗೆ ಕುರಿತು ಚರ್ಚಿಸಲು ಇಂದು (ಏ.18ರಂದು) ಬೆಳಿಗ್ಗೆ 11 ಗಂಟೆಗೆ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಾಗೂ ಇತರೆ ಸಮುದಾಯದ ಸಮಾನ ಮನಸ್ಕರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಟಿ.ಬಿ.ಗಂಗಾಧರ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಸಭೆಯಲ್ಲಿ ಸಮಾಜದ ಮುಖಂಡರಾದ ತೇಜಸ್ವಿ ಪಟೇಲ್, ಅರಸೀಕೆರೆ ಕೊಟ್ರೇಶ್, ಮಹಿಮಾ ಪಟೇಲ್, ಹೆಚ್.ಎಸ್.ನಾಗರಾಜ್, ಎಂ.ಟಿ.ಸುಭಾಶ್ಚಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
2010ರಲ್ಲಿ ಶಿವಮೊಗ್ಗ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಯಾರೊಬ್ಬ ನಾಯಕರು ಸ್ಪರ್ಧಿಸಲು ಹಿಂಜರಿದಿದ್ದ ಸಮಯದಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವಗೊಂಡ ಮಹಿಮಾ ಪಟೇಲ್ಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಉದ್ದೇಶ ಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ಸಿದ್ದೇಶ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಎಚ್.ಎಸ್. ನಾಗರಾಜ್ರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸಿಕೊಂಡು ನಿರ್ಲಕ್ಷಿಸಲಾಗುತ್ತಿದೆ. ಅಲ್ಲದೇ ಹರಪನಹಳ್ಳಿ ಕ್ಷೇತ್ರದಿಂದ ಅರಸೀಕೆರೆ ಕೊಟ್ರೇಶ್ಗೂ ಟಿಕೆಟ್ ತಪ್ಪಿಸಲಾಗಿದೆ. ಹೀಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಪಂಚಮಸಾಲಿ ಸಮಾಜವನ್ನು ನಿರಂತರವಾಗಿ ಕಡೆಗಣಿಸಿಕೊಂಡು ಬಂದಿವೆ ಎಂದು ಆರೋಪಿಸಿದರು.
ನಿಜಲಿಂಗಪ್ಪನವರ ಸಂಬಂಧಿ ಬಿ.ಲೋಕೇಶ್ರನ್ನು ಮೂಲೆಗುಂಪು ಮಾಡಲಾಗಿದೆ. ಕೆಪಿಸಿಸಿಯ ಹಲವು ನಾಯಕರು ತೇಜಸ್ವಿ ಪಟೇಲ್ ಬಗ್ಗೆ ಒಲವು ಹೊಂದಿದ್ದರೂ ಕಾಂಗ್ರೆಸ್ ಟಿಕೆಟ್ ತಪ್ಪಿಸಲಾಗಿದೆ. ಹೀಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೂ ನಾಯಕರನ್ನು ಬಳಸಿಕೊಂಡು ಹಾಗೆ ಬಿಡಲಾಗುತ್ತಿದೆ. ಇದರಿಂದ ಸಮಾಜದ ನಾಯಕರಿಗೆ ನಿರಾಸೆಯಾಗಿದೆ. ಆದ್ದರಿಂದ ಎಲ್ಲಾ ಮುಖಂಡರನ್ನು ಸಂಪರ್ಕಿಸಿ ಈ ಸಭೆ ಏರ್ಪಡಿಸಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ್, ಶಿವಕುಮಾರ್, ನಾಗರಾಜ್ ವಕೀಲರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ