ಬೆಂಗಳೂರು
ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ನೀಡಿರುವುದು ಹಿಂದುಳಿದ ವರ್ಗದವರಿಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ನಗರದ ದೇವರಾಜ ಅರಸು ಭವನದಲ್ಲಿ ಭಾನುವಾರ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಶ್ರೀ ದೇವರಾಜು ಅರಸು ಸಂಶೋಧನಾ ಸಂಸ್ಥೆ ಆಯೋಜಿಸಿದ್ದ ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ (ಎಸ್.ಸಿ, ಎಸ್.ಟಿ, ಓಬಿಸಿ ಹೊರತುಪಡಿಸಿ) ಜಾರಿಗೊಳಿಸಿರುವ ಶೇ.10 ರಷ್ಟು ಮೀಸಲಾತಿಯಿಂದಾಗುವ ಪರಿಣಾಮಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗದೆ ಕೇಂದ್ರ ಸರ್ಕಾರ ಇಂತಹ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.
ವಿಶ್ವದ 197 ರಾಷ್ಟ್ರಗಳಲ್ಲಿಯೇ ಡಾ.ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಬಹಳ ಶ್ರೇಷ್ಠವಾದದ್ದು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಸಾಮಾಜಿಕ ನ್ಯಾಯದಡಿ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ತಿದ್ದುಪಡಿ ತಂದು ಮೀಸಲಾತಿ ಕಲ್ಪಿಸಲಾಗುತ್ತಿದ್ದು ಇದರಿಂದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಮೀಸಲಾತಿಯನ್ನು ಜಾತಿಯ ಆಧಾರದಲ್ಲಿ ನೀಡಬಾರದು, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಿಲ್ಲ. ಆದರೂ ರಾಜಕೀಯ ಲಾಭ ಪಡೆಯಲು ಮೀಸಲಾತಿ ನೀಡಲಾಗುತ್ತಿದ್ದು, ಶೇ. 50ಕ್ಕಿಂತ ಮೀಸಲಾತಿ ಮೀರಬಾರದು ಎಂಬ ನಿಯಮ ಉಲ್ಲಂಘನೆಯಾಗುತ್ತಿದೆ ಎಂದರು.ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂಬ ನಿಯಮಕ್ಕೆ ನಮ್ಮ ಆಕ್ಷೇಪಣೆವೇನೂಯಿಲ್ಲ.ಆದರೆ ಯಾವ ಆಧಾರದಲ್ಲಿ ಮೀಸಲಾತಿ ನೀಡಲಾಗುತ್ತಿದೆ ಎಂಬುದೇ ನಮ್ಮ ಪ್ರಶ್ನೆಯಾಗಿದೆ ಎಂದು ಹೇಳಿದರು.
ಕೇಂದ್ರದ ಶೇ. 10 ರಷ್ಟು ಮೀಸಲಾತಿ ಅನುಷ್ಠಾನವಾದರೆ ಓಬಿಸಿ ಜಾತಿಗಳು ಬ್ರಾಹ್ಮಣ, ಜೈನ ಸೇರಿದಂತೆ ಇನ್ನಿತರ ಪ್ರಬಲ ಜಾತಿಗಳೊಡನೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮ ಬಲ ಸಾದೀಸುವುದು ಅಸಾಧ್ಯ. ಹಾಗಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದರುಕೇಂದ್ರದ ಓಬಿಸಿ ಪಟ್ಟಿಯಲ್ಲಿ 199 ಜಾತಿ ಮತ್ತು ಉಪಜಾತಿಗಳಿವೆ. ಆದರೆ 2002 ರಲ್ಲಿ ಕರ್ನಾಟಕ ಸರ್ಕಾರ ತಯಾರಿಸಿದ ಓಬಿಸಿ ಪಟ್ಟಿಯಲ್ಲಿ 208 ಜಾತಿ ಮತ್ತು ಉಪಜಾತಿಗಳಿವೆ. ಆದರೆ ಕೇಂದ್ರದ ಪಟ್ಟಿಗೂ ರಾಜ್ಯದ ಪಟ್ಟಿಗೂ ತಾಳೆಯಾಗುವುದೇ ಇಲ್ಲ ಎಂದು ಹೇಳಿದರು.ವಿಚಾರ ಸಂಕಿರಣದಲ್ಲಿ ದೇವರಾಜ ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕ ನರಸಿಂಹಯ್ಯ, ಹಿಂದುಳಿದ ವರ್ಗಗಳ ಶಾಶ್ವತ ವರ್ಗಗಳ ಅಧ್ಯಕ್ಷ ಕಾಂತರಾಜು, ಬಿ.ಕೆ.ರವಿ, ನಳಿನಾಕ್ಷಿ ಸಣ್ಣಪ್ಪ ಉಪಸ್ಥಿತರಿದ್ದರು.