ನೀರು ಪೂರೈಸುವ ವಿಚಾರದಲ್ಲಿ ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ : ವಿರೂಪಾಕ್ಷಪ್ಪ ಬಳ್ಳಾರಿ

ಬ್ಯಾಡಗಿ:

        ಜಲಾಮೃತ ಹೆಲ್ಪಲೈನ್ ಮೂಲಕ ನೀರು ಕೊಡುತ್ತಿರುವುದನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ, ತಾಲೂಕಿನ ಜನರಿಗೆ ನೀರು ಪೂರೈಸುವ ವಿಚಾರದಲ್ಲಿ ಯಾರೊಂದಿಗೂ ರಾಜಿ ಪ್ರಶ್ನೆಯೇ ಇಲ್ಲ ಶಕ್ತಿ ಮೀರಿ ಪ್ರಯತ್ನ ಮಾಡುವ ಮೂಲಕ ಸಮಸ್ಯೆಗೆ ಸ್ಪಂದಿಸಿದ್ದೇನೆ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೈಗೊಂಡಂತಹ ಕಾಮಗಾರಿಗಳನ್ನು ಹೇಳಿಕೊಳ್ಳಲು ಸಾಧ್ಯವಾಗಿಲ್ಲ, ನನ್ನ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿದ್ದೇನೆ ವೈಯಕ್ತಿಕ ಟೀಕೆಗಿಂತ ಹೇಳಿಕೆಗಳು ಸಲಹೆ ರೂಪದಲ್ಲಿದ್ದರೇ ಉತ್ತಮ, ನೀರು ಪ್ರತಿಯೊಬ್ಬರ ಜವಾಬ್ದಾರಿ ನಾನು ಮಾಡಿದ ಕೆಲಸಗಳನ್ನೂ ಸಹ ಪರಿಗಣಿಸಬೇಕಾಗಿತ್ತು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

        ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಸುದ್ದಿಗೋಷ್ಟಿಯಲ್ಲಿ ಮಾಡಿದ ಆರೋಪಗಳಿಗೆ ಸೋಮವಾರ ತಮ್ಮ ನಿವಾಸದಲ್ಲಿ ಉತ್ತರಿಸಿದ ಅವರು, ನನ್ನ ಸ್ವಂತ ಮೂರು 3 ಕೊಳವೆಭಾವಿಗಳನ್ನು ನೀರಿನ ಸಲುವಾಗಿ ಸಾರ್ವಜನಿಕರಿಗೆ ಉಚಿತವಾಗಿ ನೀಡಿದ್ದೇನೆ, ಈ ವಿಷಯ ಆರೋಪ ಮಾಡುವವರಿಗೇಕೆ ಕಾಣಲಿಲ್ಲ ಎಂದುಪ್ರಶ್ನಿಸಿದರು.

        ತಾಲೂಕಿನ ವಿವಿಧೆಡೆಗಳಲ್ಲಿ ಈಗಾಗಲೇ 144 ಕೊಳವೆಭಾವಿಗಳನ್ನು ಕೊರೆಸಲಾಗಿದೆ, ಅದರೆ 44 ರಲ್ಲಿ ಹನಿ ನೀರು ಬರಲಿಲ್ಲ ಇನ್ನೂ ಕೆಲ ಕೊಳವೆಭಾವಿಗಳು ಮೂರ್ನಾಲ್ಕು ದಿನಗಳಷ್ಟು ಮಾತ್ರ ನೀರು ಕೊಟ್ಟು ಬಳಿಕ ಸ್ಥಗಿತಗೊಂಡಿವೆ, ಅಂತರ್ಜಲ ಬಹಳಷ್ಟು ಕೆಳ ಮಟ್ಟಕ್ಕೆ ಹೋಗಿದೆ, ಹೀಗಾಗಿ ಕೊಳವೆಭಾವಿಗಳನ್ನು ನೆಚ್ಚಿಕೊಳ್ಳಬೇಡಿ ಎಂದರೇ, ಗ್ರಾಮಸ್ಥರು ಕೇಳುವ ಪರಿಸ್ಥಿತಿಯಿಲ್ಲ ಹೀಗಾಗಿ ಅನಿವಾರ್ಯವಾಗಿ ಕೊಳವೆಭಾವಿಗಳನ್ನು ಕೊರೆಸಲಾಗುತ್ತಿದೆ ಎಂದರು.

        ಇಲ್ಲದ ನೀರು ತರುವುದು ಎಲ್ಲಿಂದ: ಪ್ರತಿ ಟ್ಯಾಂಕರ್ 500 ರೂ.ಗಳನ್ನು ಸರ್ಕಾರ ನಿಗದಿಪಡಿಸಿದೆ, ಆದರೆ ಸದರಿ ದರಕ್ಕೆ ಟ್ಯಾಂಕರ್ ಮಾಲೀಕರು ನೀರು ಪೂರೈಸಲು ಸಿದ್ಧರಿಲ್ಲ, ಅಲ್ಲದೇ ರೈತರ ಕೊಳವೆಭಾವಿಗಳನ್ನು ಮನವೊಲಿಸಿ ಪಡೆದುಕೊಳ್ಳಲಾಗಿದ್ದರೂ ಸಹ ಸರ್ಕಾರ ನೀಡುತ್ತಿರುವ ಪ್ರತಿ ತಿಂಗಳಿಗೆ 8 ಸಾವಿರ ಸಾಲುವುದಿಲ್ಲ ಎಂದು ಕೆಲ ರೈತರು ನೀರು ಕೊಡಲು ನಿರಾಕರಿಸುತ್ತಿದ್ದಾರೆ, ಅದಾಗ್ಯೂ ಸಹ ಕೆಲ ಗ್ರಾಮಗಳಲ್ಲಿ ರೈತರ ಮನವೊಲಿಸಲಾಗಿದ್ದು ಸಮಸ್ಯೆಗೆ ಪರಿಹಾರ ಸಿಕ್ಕಿದೆ, ಅತ್ಯಂತ ಸಮಸ್ಯಾತ್ಮಕವಾಗಿದ್ದ ಮಾಸಣಗಿ ಗ್ರಾಮಕ್ಕೆ ನದಿ ನೀರು ಪೂರೈಕೆ ಮಾಡಲಾಗುತ್ತಿದೆ, ಅಷ್ಟಕ್ಕೂ ಇಲ್ಲದ ನೀರನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಾಸ್ತವದ ಅರಿವಿದೆ:

         ಇನ್ನೂ ಎರಡು ತಿಂಗಳು ಕಾಲ ಭೀಕರವಾದ ನೀರಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ, ಯಾವ್ಯಾವ ಗ್ರಾಮಗಳಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿದುಕೊಂಡಿದ್ದೇನೆ ಅದಕ್ಕೆ ಪರಿಹಾರವನ್ನೂ ಸಹ ಹುಡುಕಲು ಜಿಲ್ಲಾಡಳಿತ ಸೇರಿದಂತೆ ತಾಲೂಕಾಡಳಿತಕ್ಕೆ ಒತ್ತಾಯಿಸಿದ್ದೇನೆ, ಪ್ರತಿಯೊಂದು ಗ್ರಾಮಕ್ಕೂ ಒಂದೊಂದು ರೀತಿಯ ಸಮಸ್ಯೆಗಳಿವೆ, ಇದನ್ನು ಎಲ್ಲರೂ ಸೇರಿ ನಿಭಾಯಿಸಬೇಕಾಗುತ್ತದೆ ಎಂದರು.

         ಸಚಿವರ ಸಭೆಗೂ ನಿರಾಕರಿಸಿದ ಚುನಾವಣಾಧಿಕಾರಿ: ಸಚಿವ ಕೃಷ್ಣ ಭೈರೇಗೌಡ ಅವರನ್ನೇ ನೇರವಾಗಿ ಭೇಟಿ ಮಾಡಿ ನೀರಿನ ಸಮಸ್ಯೆ ಪರಿಹಾರಕ್ಕೆ ಹಣ ಬಿಡುಗಡೆಗೊಳಿಸುವಂತೆ ಮತ್ತು ಹಾವೇರಿಯಲ್ಲಿ ಸಭೆಯನ್ನೂ ಸಹ ಆಯೋಜಿಸಲಾ ಗಿತ್ತು, ಆದರೆ ಚುನವಣಾಧಿಕಾರಿಗಳು ಸಭೆ ನಡೆಸಲು ಮೇ.23 ರವರೆಗೆ ಅವಕಾಶ ನೀಡಲಿಲ್ಲ ಹೀಗಾಗಿ ನಮ್ಮ ತಾಲೂಕಿನ ಸಮಸ್ಯೆ ಸರ್ಕಾರಕ್ಕೆ ತಲುಪುವಲ್ಲಿ ಹಿನ್ನೆಡೆಯಾಗಲು ಕಾರಣವಾಯಿತು, ಈ ಕುರಿತು ಜಿಲ್ಲಾ ಉಸ್ತುವಾಗಿ ಸಚಿವರಿಗೂ ಸಹ ಮನವರಿಕೆ ಮಾಡಿಕೊಡಲು ಸಿದ್ಧನಾಗಿದ್ದು ಅವರೊಂದಿಗೂ ಚರ್ಚಿಸುವುದಾಗಿ ತಿಳಿಸಿದರು.

         ಬ್ಯಾಡಗಿ ಮತಕ್ಷೇತ್ರದಲ್ಲಿ ಕೊಳವೆಭಾವಿಗಳು ಇಲ್ಲದಂತೆ ನೋಡಿಕೊಳ್ಳುವೆ: ಬೆಂಗಳೂರಿಗೆ ಕೆಆರ್‍ಎಸ್‍ನಿಂದ ನೀರು ಪೂರೈ ಸುತ್ತಿರುವ ಮಾದರಿಯಲ್ಲಿ ಗಾಜನೂರು ಡ್ಯಾಮ್ ನಿಂದ ಬ್ಯಾಡಗಿವರೆಗೆ ಒಟ್ಟು 215 ಕೀ.ಮೀ.ಪೈಪ್ ಲೈನ ಹಾಕಿಕೊಡಿ ಬ್ಯಾಡಗಿ ಮತಕ್ಷೇತ್ರದಲ್ಲಿ ಕೊಳವೆಭಾವಿಗಳು ಇಲ್ಲದಂತೆ ನೋಡಿಕೊಳ್ಳುತ್ತೇನೆ, ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ ಒತ್ತಾಯಿಸಲಾಗಿದ್ದು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡುತ್ತಿಲ್ಲ, ಅಷ್ಟೇಕೆ ಆಣೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಎಲ್ಲ ನಕ್ಷೆಗಳು ಸಿದ್ಧವಾಗಿವೆ, ಇದಕ್ಕಾಗಿ ಕೇಂದ್ರ ಸರ್ಕಾರದ ಅನುದಾನ ತರಲು ಚಿಂತನೆ ನಡೆಸಲಾಗಿದೆ ಎಂದರು.

         ಈ ಸಂದರ್ಭದಲ್ಲಿ ಶಿವಬಸಪ್ಪ ಕುಳೇನೂರ, ಶಂಕ್ರಣ್ಣ ಮಾತನವರ, ಸುರೇಶ ಯತ್ನಳ್ಳಿ, ನಾಗರಾಜ ಬಳ್ಳಾರಿ, ವೈ.ಎನ್.ಕರೇಗೌಡ್ರ, ನಾಗರಾಜ ಆನ್ವೇರಿ, ಗುಡ್ಡಪ್ಪ ಕೊಳೂರ, ದ್ಯಾಮನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link