ತುಮಕೂರು
ಉಪ ಮುಖ್ಯಮಂತ್ರಿ ಹುದ್ದೆ ವಿರೋಧಿಸಿ ನಾನು ಯಾರಿಂದಲೂ ಸಹಿ ಸಂಗ್ರಹ ಮಾಡಿಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಸಮರ್ಥನೆ ನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪಷ್ಟವಾಗಿ ಹೇಳುತ್ತೇನೆ. ಡಿಸಿಎಂ ಹುದ್ದೆ ವಿರೋಧಿಸಿ ನಾನು ಸಹಿ ಸಂಗ್ರಹ ಮಾಡಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಬೆಂಬಲ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಾನು ಅಧಿಕೃತವಾಗಿ ಸಹಿ ಸಂಗ್ರಹ ಮಾಡಿದ್ದೇನೆ ಎಂದು ಮಾಧ್ಯಮಗಳ ಮೂಲಕ ಬಹಿರಂಗವಾಗಿ ಎಲ್ಲೂ ಹೇಳಿಕೆ ನೀಡಿಲ್ಲ ಎಂದು ಪ್ರತಿಕ್ರಿಯಿಸಿದರು.
ಡಿಸಿಎಂ ಸ್ಥಾನದ ಬಗ್ಗೆ ಈಗಾಗಲೇ ಹೇಳಿಕೆ ಕೊಟ್ಟಿದ್ದೆ. ಈ ವಿಚಾರದ ಸಂಬಂಧ ಎಲ್ಲಿ ವಿಷಯ ಮುಟ್ಟಿಸಬೇಕು ಅಲ್ಲಿಗೆ ಮುಟ್ಟಿಸಿದ್ದೇನೆ. ನನಗೆ ಯಾರ ಮೇಲೂ ಅಸಮಾಧಾನ ಇಲ್ಲ. ನನ್ನ ವಿರುದ್ಧ ಹೈ ಕಮಾಂಡ್ಗೆ ದೂರು ನೀಡಬಹುದಿತ್ತು. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬಹುದಿತ್ತು. ಮಾಧ್ಯಮಗಳ ಮುಂದೆ ಏಕೆ ಮಾತನಾಡಿದರು ಎಂದು ಪ್ರಶ್ನಿಸಿದರು.
ಉಪ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ಇದು ನನ್ನೊಬ್ಬನ ಹೇಳಿಕೆಯಲ್ಲ. ರಾಜ್ಯದ ಎಲ್ಲಾ ಜನರ ಭಾವನೆ. ಪಕ್ಷದ ಹಲವಾರು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ನನಗೆ ಬೆಂಬಲ ಸೂಚಿಸಿದ್ದಾರೆ ಎಂದು ಡಿಸಿಎಂ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.
ಜನ ನನ್ನನ್ನು ಮೂರು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಒಮ್ಮೆ ಮಂತ್ರಿಯಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಾನು ಹೈಕಮಾಂಡ್ ಅನ್ನು ಪ್ರಶ್ನೆ ಮಾಡಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಭಾವನೆಯನ್ನು ರಾಜ್ಯದ ಅಧ್ಯಕ್ಷರ ಬಳಿ ಹೇಳಿದ್ದೇನೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
