ಹಿರಿಯರನ್ನು ಗೌರವಿಸುವುದನ್ನು ಗುಬ್ಬಿ ಶಾಸಕರು ಕಲಿಯಲಿ

ಚಿಕ್ಕನಾಯಕನಹಳ್ಳಿ : 

     ಅಧಿಕಾರ ಶಾಶ್ವತವಲ್ಲ, ಹಿರಿಯರನ್ನು ಗೌರವಿಸುವುದನ್ನು ಗುಬ್ಬಿ ಶಾಸಕರು ಕಲಿಯಬೇಕು, ಸಂಸದರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಗುಬ್ಬಿ ಶಾಸಕರು ಅವರು ಸಚಿವರಾಗಿದ್ದಾಗ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ತಿಳಿಸಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಎಂ.ಜಗದೀಶ್ ಹೇಳಿದರು.

      ಪಟ್ಟಣದ ಹೊಯ್ಸಳ ಪಾರ್ಟಿಹಾಲ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ್ ಹಾಗೂ ಸಂಸದರಾದ ಜಿ.ಎಸ್.ಬಸವರಾಜು ಅವರ ಮಧ್ಯೆ ಕಾರ್ಯಕ್ರಮವೊಂದರಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಗುಬ್ಬಿ ಶಾಸಕರು ಸಂಸದರ ವಿರುದ್ಧ ಕೇವಲವಾಗಿ ಮಾತನಾಡಿದ್ದಾರೆ. ಈ ಮಾತುಗಳು ಸರಿಯಲ್ಲ, ಶಾಸಕರು ಸಂಸದರ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಜಬ್ದಾರಿ ಮಣ್ಣಪಾಲು :

      ಜಿಪಂ ಮಾಜಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ ಅದರಲ್ಲಿ ಜನಪ್ರತಿನಿಧಿಯಾದವರು ಹೇಗೆ ನಡೆದುಕೊಳ್ಳಬೇಕು ಎಂದು ತೋರಿಸಿದ್ದಾರೆ. ಅದನ್ನೆಲ್ಲ ಮಣ್ಣಲ್ಲಿ ತೂರಿ ಹಿರಿಯ ವ್ಯಕ್ತಿಗೆ ಏಕವಚನ ಸಂಬೋಧಿಸಿದ್ದಾರೆ ಇದು ಸರಿಯಲ್ಲ ಎಂದರು.

     ಮಾಹಿತಿ ತಿಳಿಯುವ ಸೌಜನ್ಯವೂ ಇಲ್ಲ :

       ಮತ್ತೊರ್ವ ಜಿಪಂ ಮಾಜಿ ಸದಸ್ಯ ಬಿ.ಎನ್.ಶಿವಪ್ರಕಾಶ್ ಮಾತನಾಡಿ, ಸಂಸದರಾದ ಜಿ.ಎಸ್.ಬಸವರಾಜು ಅವರು ನಾಲ್ಕು ಬಾರಿ ಸಂಸದರಾಗಿದ್ದಾರೆ, ನೀರಾವರಿ ಬಗ್ಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಇಂತಹ ಹಿರಿಯರಿಗೆ ಏಕವಚನದಲ್ಲಿ ಮಾತನಾಡಿರುವ ಗುಬ್ಬಿ ಶಾಸಕರು ಶಾಸಕ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಸಂಸದರು ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ, ನೀರಾವರಿ ಯೋಜನೆ ಬಗ್ಗೆ ಕನಸನ್ನು ಹೊಂದಿರುವ ಸಂಸದರು, ಎತ್ತಿನಹೊಳೆ ಯೋಜನೆ, ಹೇಮಾವತಿ ಯೋಜನೆ, ಭದ್ರಾಮೇಲ್ದಂಡೆ ಯೋಜನೆ ನೀರನ್ನು ಸಂಗ್ರಹಣೆ ಮಾಡಲು ಕೊರಟಗೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಭಾಗಗಳಲ್ಲಿ ದೊಡ್ಡ ಚೆಕ್ ಡ್ಯಾಂ ನಿರ್ಮಾಣ ಮಾಡಲು 550 ಕೋಟಿ ರೂ. ಹಣ ಬಿಡುಗಡೆ ಮಾಡಿಸಿದ್ದಾರೆ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಸೌಜನ್ಯ ಶಾಸಕರಿಗೆ ಇಲ್ಲ ಎಂದು ದೂರಿದರು.

ಮದ್ಯದಂಗಡಿ ತೆರೆದು ಜನರನ್ನು ದುಶ್ಚಟಗಳಿಗೆ ತಳ್ಳಿದ್ದೆ ಸಾಧನೆ :

      ಸಂಸದರು ಊರಿಗೊಂದು ಕೆರೆ ನಿರ್ಮಿಸಿ ಎಲ್ಲರಿಗೂ ನೀರು ಸಿಗಲು ಶ್ರಮ ಪಟ್ಟವರು, ಹೆಚ್‍ಎಎಲ್ ಕಾರ್ಖಾನೆ ಮಂಜೂರು ಮಾಡಿಸಿದವರು, ಅಂತಸರನಹಳ್ಳಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಬೆಳೆಸಿದವರು ಅಲ್ಲದೆ, ಗುಬ್ಬಿ, ಚಿ.ನಾ.ಹಳ್ಳಿ, ತಿಪಟೂರು ಭಾಗದವರಿಗೆ ಅನುಕೂಲವಾಗಲೆಂದು ಇಂಜನಿಯರಿಂಗ್ ಕಾಲೇಜು ತೆರೆದಿದ್ದಾರೆ, ಧಾರ್ಮಿಕ ಕ್ಷೇತ್ರದಲ್ಲಿಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಆದರೆ ಗುಬ್ಬಿ ಶಾಸಕರು ಮದ್ಯದಂಗಡಿ ತೆರೆದು ಜನರನ್ನು ದುಶ್ಚಟಗಳಿಗೆ ತಳ್ಳಿದ್ದಾರೆ ಎಂದು ಬಿ.ಎನ್.ಶಿವಪ್ರಕಾಶ್ ಆರೋಪಿಸಿದರು

      ಎಸ್.ಆರ್.ಶ್ರೀನಿವಾಸ್ ಅವರೇ 4 ಬಾರಿ ಶಾಸಕರಾಗಿ, 1 ಬಾರಿ ಸಚಿವರಾಗಿದ್ದೀರಿ ಇನ್ನು ಮುಂದಾದರೂ ಹಿರಿಯರನ್ನು ಗೌರವಿಸುವುದನ್ನು ಕಲಿಯಿರಿ, ಪುನಃ ಇಂತಹ ಘಟನೆಗಳು ಮರುಕಳಿಸಿದರೆ ನಿಮ್ಮ ವಿರುದ್ದ ಹೋರಾಟ ಮಾಡಬೇಕಾಗುತ್ತದೆ.

-ಬಿ.ಎನ್.ಶಿವಪ್ರಕಾಶ್, ಮಾಜಿ ಜಿಪಂ ಸದಸ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link