
ನವದೆಹಲಿ : ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಆದೇಶಿಸಿದೆ. ಇದರಿಂದಾಗಿ ಸುಪ್ರೀಂ ಕೋರ್ಟಿನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸೋಮವಾರ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಗೊಂಡ ಸುಪ್ರೀಂ ಕೋರ್ಟ್ ಎರಡೂ ಕಡೆಯ ವಾದ ಆಲಿಸಿ ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದ ಪ್ರಕಾರ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ ಎಂದು ಕರ್ನಾಟಕ ವಾದ ಮಂಡಿಸಿತು. ಈ ಅಹವಾಲು ಆಲಿಸಿದ ಸುಪ್ರೀಂಕೋರ್ಟ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ಪಾಲಿಸಿ ಪಾಲನಾ ವರದಿ ಸಲ್ಲಿಸಲು ನ್ಯಾಯಪೀಠ ಸೂಚಿಸಿತು.
ನಿತ್ಯ 12 ಸಾವಿರ ಕ್ಯೂಸೆಕ್ ಹರಿಸಲು ಪ್ರಾಧಿಕಾರ ಈಗಾಗಲೇ ಹದಿನೈದು ದಿನ ನೀರು ಹರಿಸಲು ಕರ್ನಾಟಕಕ್ಕೆ ಸೂಚನೆ ನೀಡಿದೆ. ಆದರೆ ಸದ್ಯ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನಿತ್ಯ ಐದಾರು ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಈವರೆಗೂ 13-14 ಟಿಎಂಸಿ ನೀರು ಮಾತ್ರ ಬಂದಿದೆ ಎಂದು ಕರ್ನಾಟಕ ವಾದ ಮಂಡಿಸಿದೆ.
ಕರ್ನಾಟಕ ಜೂನ್, ಜುಲೈ ಹಾಗೂ ಆಗಸ್ಟ್ ಈವರೆಗೆ ಸೇರಿ 64 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ 14 ಟಿಎಂಸಿ ನೀರು ಮಾತ್ರ ಹರಿಸಿದೆ. ಬಾಕಿ ನೀರು ಹರಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿತು. ಆದರೆ ಮಳೆಯ ಅನಿಶ್ಚಿತತೆ ನಡುವೆ ನಾವು ನೀರು ಹರಿಸುತ್ತಿದ್ದೇವೆ. ಬಿಳಿಗುಂಡ್ಲು ತಲುಪಲು ಸಮಯ ಬೇಕಾಗುತ್ತದೆ ಎಂದು ಕರ್ನಾಟಕ ವರ ವಕೀಲರು ವಾದ ಮಂಡಿಸಿದರು.
ಈಗ ನದಿ ಮೂಲಕ ನೀರು ಹರಿಯುತ್ತಿದೆ, ಪ್ರಾಧಿಕಾರದ ಆದೇಶದಂತೆ ನೀರು ಹರಿಸುತ್ತಿದ್ದು, 12 ಸಾವಿರ ಕ್ಯುಸೆಕ್ ಹರಿದು ಹೋಗಬೇಕು. ಇದಕ್ಕೆ ಸಮಯ ಬೇಕು. ಬಿಳಿಗುಂಡ್ಲು ಬಳಿ ನೀರು ಮಾಪನವಾಗುತ್ತದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಅನಿಶ್ಚಿತತೆಯಿಂದ ಕೂಡಿದ್ದರೂ ಇಷ್ಟು ನೀರು ಹರಿಸುವುದು ನಮಗೆ ಕಷ್ಟವಾಗುತ್ತಿದೆ.
ಮೇಕೆದಾಟು ಆಣೆಕಟ್ಟು ಯೋಜನೆಗೆ ತ.ನಾಡು ವಿರೋಧಿಸುತ್ತಿದೆ. ಇಂತಹ ಸನ್ನಿವೇಶಗಳಲ್ಲಿ ಈ ಆಣೆಕಟ್ಟು ಸಹಾಯಕ್ಕೆ ಬರಲಿದೆ ಎಂದು ಕರ್ನಾಟಕದ ವಕೀಲರು ಹೇಳಿದರು. ಮುಂದಿನ ವಾರ ಪರಿಷ್ಕöÈತ ಮಾಹಿತಿ ಮೇರೆಗೆ ಪರಿಶೀಲಿಸೋಣ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು.








