ಕೃಷಿಯನ್ನೇ ನಂಬಿ ಬದುಕುತ್ತಿರುವ ನೊಳಂಬರು:ಜೆ.ಸಿ.ಮಾಧುಸ್ವಾಮಿ

ತುಮಕೂರು
    ಕೃಷಿಯೊಂದಿಗೆ ಆಡಳಿತವನ್ನು ನಡೆಸಿದ ನೊಳಂಬರು ಇಂದಿಗೂ ಕೃಷಿಯನ್ನೇ ನಂಬಿ ಜೀವನ ಮಾಡುತ್ತಿದ್ದಾರೆ. ನೊಳಂಬರು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆಯಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು
    ನಗರದ ಬಾಲಭವನದಲ್ಲಿ ಶ್ರೀ ಗುರು ಸಿದ್ದರಾಮೇಶ್ವರ ಸೇನೆ ಹಾಗೂ ಜಿಎಸ್‍ಎಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ನೊಳಂಬರ ಶಾಸನಗಳು ಸಂಶೋಧನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಏಳುನಾಡುಗಳನ್ನಾಡಿದ ನೊಳಂಬರ ಇತಿಹಾಸವನ್ನು ಹುಡುಕಿಕೊಂಡು ಸುಮ್ಮನೆ ಇದ್ದರೆ ಆಗುವುದಿಲ್ಲ, ನೊಳಂಬ ಸಮಾಜವನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಂಸ್ಕøತಿಕವಾಗಿ ಏಳ್ಗೆ ಮಾಡುವಂತಹ ಕಾರ್ಯ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು ಎಂದರು.
    ನೊಳಂಬರು ರಾಜಮನೆತನದವರು, ರಾಜರಾಗಿದ್ದರು ಆದರೆ ಇಂದು ಸಮಾಜ ಹಿಂದುಳಿದಿದೆ, ಎಲ್ಲ ಸಮುದಾಯಗಳೊಂದಿಗೆ ಸ್ಪರ್ಧೆಗೆ ಇಳಿಯುವ ಪ್ರಯತ್ನವನ್ನು ನೊಳಂಬ ಸಮಾಜ ಮಾಡದೇ ಇರುವುದನ್ನು ಕಾಣಬಹುದಾಗಿದೆ. ವಿಜಾಪುರದ ಗುರು ಸಿದ್ದರಾಮೇಶ್ವರರು ಹಾಗೂ ಚಾಮಲಾದೇವಿ ಅವರು ನಮ್ಮ ಸಮಾಜದ ಗುರುಗಳಾಗಿ ಸಮುದಾಯವನ್ನು ಮುನ್ನಡೆಸಿದ್ದಾರೆ ಈ ಬಗ್ಗೆ ಸಂಶೋಧನೆ ಮಾಡುವ ಅಗತ್ಯವಿದೆ ಎಂದು ತಿಳಿದರು.
    ತುಮಕೂರಿನಂತಹ ನಗರದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‍ಗಳು ಸಿಗುತ್ತಿಲ್ಲ ಹಾಗಾಗಿ ಶೈಕ್ಷಣಿಕವಾಗಿ ನಮ್ಮ ಸಮಾಜವನ್ನು ಕಟ್ಟಬೇಕಿದೆ, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮುಂದಾಲೋಚನೆ ಮಾಡಬೇಕಿದೆ, ಆರ್ಥಿಕವಾಗಿ ಸ್ವಾವಲಂಬಿಯಾಗಿ ಬೆಳೆಸುವುದೇ ಶಿಕ್ಷಣ ಎನ್ನುವುದನ್ನು ಅರಿತು, ಉದ್ದಿಮೆದಾರರಾಗುವ ನಿಟ್ಟಿನಲ್ಲಿ ಸಮಾಜದ ಯುವಕರನ್ನು ಪ್ರೇರೇಪಿಸಬೇಕಿದೆ.
 
     ವೀರಶೈವ-ಲಿಂಗಾಯತ ಸಮಾಜ ವಿದ್ಯಾವಂತವಾಗಿದೆ ಎಂದರೆ ಅದಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ, ಆದರೆ ಇಂದು ಮಠಗಳು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಶಕ್ತಿ ತುಂಬುವ ಕೆಲಸವನ್ನು ಸಮುದಾಯ ಮಾಡಬೇಕಿದೆ, ನಮ್ಮದು ಜಾತಿಯಲ್ಲ ಧರ್ಮ, ಎಲ್ಲರೊಂದಿಗೆ ಬೆರೆತು ಬದುಕುವುದೇ ಧರ್ಮ ಎನ್ನುವುದನ್ನು ಅರಿತು, ಜಾತಿ ಹೆಸರಿನಲ್ಲಿ ವಿಘಟನೆ ಮಾಡದೇ, ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
   
     ಸಿದ್ದಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿ ಮಾತನಾಡಿ, ನೊಳಂಬ ಅರಸ ಬಗ್ಗೆ ಅಪೂರ್ಣವಾಗಿ ಉಳಿದಿದ್ದ ಕಾರ್ಯ, ದೂರದೃಷ್ಠಿಯಿಂದ ಇಂದು ಪೂರ್ಣಗೊಂಡಿದೆ, ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಆಳ್ವಿಕೆ ಮಾಡಿದ್ದ ನೊಳಂಬರ ಶಾಸನಗಳನ್ನು ಒಗ್ಗೂಡಿಸಿ ಪುಸ್ತಕವನ್ನು ಹೊರತಂದಿರುವುದು ಶ್ಲಾಘನೀಯ. ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವವನ್ನು ಸ್ಮರಿಸಲು, ರಾಜರ ಜನಪ್ರಿಯ ಆಳ್ವಿಕೆಯೇ ಕಾರಣ, ನೊಳಂಬರ ಶಾಸನಗಳು ಗ್ರಂಥ ಮುಂದಿನ ದಿನಗಳಲ್ಲಿ ಸಂಶೋಧಕರಿಗೆ ಆಕರವಾಗಲಿದೆ ಎಂದರು.
     ಪ್ರಾಸ್ತಾವಿಕ ನುಡಗಳನ್ನಾಡಿದ ಜಿಎಸ್‍ಎಸ್ ಟ್ರಸ್ಟ್ ಅಧ್ಯಕ್ಷ ಪ್ರಸನ್ನಕುಮಾರ್, ಸಂವಿಧಾನದ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ಎಲ್ಲ ಸಮುದಾಯಗಳು ಅರಿಯಬೇಕಿದೆ. ನೊಳಂಬರು ವೈಷ್ಣವ ದೇವರನ್ನು ಪೂಜಿಸುತ್ತಾರೆ ಆದರೆ ಆಚರಣೆಗಳೆಲ್ಲ ಒಂದೇ ರೀತಿ ಇವೆ, ನೊಳಂಬರ ಕುಲಶಾಸ್ತ್ರವನ್ನು ಇಂದಿನ ಪೀಳಿಗೆ ಅರಿಯಬೇಕಿದೆ. ಜಿಲ್ಲೆಯಲ್ಲಿ ವೀರಶೈವ-ಲಿಂಗಾಯತ ಧರ್ಮ ಉಳಿಯಲು ಗೋಸಲ ಚನ್ನಬಸವೇಶ್ವರರು ಕಾರಣ. ಅವರಿಲ್ಲದಿದ್ದರೆ ಧರ್ಮದ ಉಳಿವು ಕಷ್ಟವಾಗುತ್ತಿತ್ತು ಎಂದ ಅವರು, ಸಮಾಜವನ್ನು ರಾಜಕೀಯಕ್ಕಾಗಿ ಬಳಸಿಕೊಂಡು ಬಿಸಾಡುವುದನ್ನು ಬಿಟ್ಟು ಸಾಂಸ್ಕøತಿಕವಾಗಿ ಕಟ್ಟಲು ರಾಜಕೀಯ ಧುರೀಣರು ಮುಂದಾಗಬೇಕು ಎಂದು ಹೇಳಿದರು.
   
     ನೊಳಂಬ ಲಿಂಗಾಯತ ಸಮಾಜದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಎಂ.ನಾಗರಾಜು ಮಾತನಾಡಿ ನೊಳಂಬರು ರಾಜ್ಯಕ್ಕೆ ಸಾಂಸ್ಕೃತಿಕ, ರಾಜಕೀಯ ಕೊಡುಗೆ ನೀಡಿದ್ದಾರೆ. ನೊಳಂಬ ಸಂಸ್ಥಾನದ ಬಗ್ಗೆ ವಿದೇಶಿಯರು ಅಧ್ಯಯನ ಮಾಡಿದ್ದಾರೆ, ಅಂತಹ ಹಿರಿಮೆಯನ್ನು ಹೊಂದಿರುವ ಸಂಸ್ಥಾನದ ಬಗ್ಗೆ ಕನ್ನಡದಲ್ಲಿ ಹೆಚ್ಚು ಸಂಶೋಧನೆಗಳು ನಡೆದಿಲ್ಲ ಎಂದ ಅವರು ದೇವಾಲಯ, ಜನೋಪಯೋಗಿ ಕೆಲಸಕ್ಕೆ ಆದ್ಯತೆ ನೀಡಿದ ನೊಳಂಬರ ಬಗ್ಗೆ ಇನ್ನು ಸಂಶೋಧನೆ ಆಗಬೇಕಿದೆ. ನೊಳಂಬರ ಆಡಳಿತ ಸಂಬಂಧಿತ ಶಾಸನಗಳನ್ನು ಜನರಿಗೆ ಅರ್ಥವಾಗುವಂತೆ ಪ್ರಕಟಣೆಗೊಳಿಸುವ ನಿಟ್ಟಿನಲ್ಲಿ ನೊಳಂಬ ಅಧ್ಯಯನ ಕೇಂದ್ರವನ್ನು ಸಂಘದ ವತಿಯಿಂದ ಸ್ಥಾಪಿಸಿ, ಸಂಶೋಧನೆ ಹಾಗೂ ಪ್ರಕಟಣೆಗೆ ನೆರವು ನೀಡುವುದಾಗಿ ಹೇಳಿದರು.
     ಇದೇ ಸಂದರ್ಭದಲ್ಲಿ ಮಾಜಿ ಲೋಕಸಭಾ ಸ್ಪೀಕರ್ ದಿ.ಮಲ್ಲಿಕಾರ್ಜುನಯ್ಯ ಅವರ ಪತ್ನಿ ಜಯದೇವಮ್ಮ, ಮಾಜಿ ಶಾಸಕ ದಿ.ಶಿವನಂಜಪ್ಪ ಪತ್ನಿ ಸುಂದರಮ್ಮ, ಮಾಜಿ ಶಾಸಕರ ದಿ. ಡಿ.ಬಿ.ಗಂಗಾಧರಪ್ಪ ಅವರ ಪತ್ನಿ ಶಂಕುತಲಮ್ಮ ಅವರಿಗೆ ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ, ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ, ಹೊನ್ನಾಳಿ ಶಾಸಕ ಗಂಗಪ್ಪ, ಶಾಸಕ ಜ್ಯೋತಿಗಣೇಶ್, ಷಣ್ಮುಖಪ್ಪ, ವಾರ್ತಾ ಇಲಾಖೆ ನಿರ್ದೇಶಕ ಭೃಂಗೇಶ್, ಎಸ್.ಎನ್. ಸಿದ್ದರಾಮಪ್ಪ , ಪ್ರೊ.ಡಿ.ವಿ.ಪರಮಶಿವಮೂರ್ತಿ, ಡಾ.ಡಿ.ಎನ್.ಯೋಗೀಶ್ವರಪ್ಪ, ಡಿ.ಸಿದ್ಧಗಂಗಯ್ಯ, ಗುಬ್ಬಿ ಪ್ರಕಾಶ್, ಶೈಲಾ ನಾಗರಾಜ್ ಹಾಗೂ ಏಳುನಾಡು ಪ್ರಭುಗಳ ವಂಶಸ್ಥರಾದ ಹುಚ್ಚೀರಪ್ಪಾಜಿ ಅರಸ್, ವೀರಪ್ಪಾಜಿ ಅರಸ್, ಹೊನ್ನಪ್ಪಾಜಿ ಅರಸ್, ನಾಗರಾಜು ಅರಸ್, ಚಿಕ್ಕರಾಜು ಅರಸ್, ಗಂಗರಾಜು ಅರಸ್ , ಶಂಕರಪ್ಪ ಅರಸ್, ಲಿಂಗರಾಜು ಅರಸ್, ಕಾಂತರಾಜು ಅರಸ್ ಇತರರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link